ವೃದ್ಧನ ಅಂತ್ಯಕ್ರಿಯೆ ವಿಚಾರದಲ್ಲಿ ಮಹಾ ಎಡವಟ್ಟು ಮಾಡಿಕೊಂಡಿತಾ ಮೆಗ್ಗಾನ್ ಆಸ್ಪತ್ರೆ!
ಶಿವಮೊಗ್ಗ, ಜುಲೈ 31: ಕೊರೊನಾ ವೈರಸ್ ನಿಂದ ಮೃತನಾದ ಶಿಕಾರಿಪುರದ ವೃದ್ಧನ ಸಾವಿನ ಸುದ್ದಿಯನ್ನು ಕುಟುಂಬಕ್ಕೆ ತಿಳಿಸದೇ ಆಸ್ಪತ್ರೆಯವರು ಅಂತ್ಯಕ್ರಿಯೆ ಮಾಡಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ.
ಈ ತರದ ಪ್ರಶ್ನೆಯೊಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಎಡವಟ್ಟಿನಿಂದ ಮೂಡಿದ್ದು, ವೃದ್ಧನ ಕುಟುಂಬದವರು ಕೋವಿಡ್ ಆಸ್ಪತ್ರೆಯಲ್ಲಿ ವೃದ್ಧ ಕಾಣದೇ ಇರುವ ಹಿನ್ನೆಲೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಲು ಹೋದಾಗ ಎರಡು ದಿನದ ಹಿಂದೆ ವೃದ್ಧರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯೂ ನಡೆದಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಆ ಬಳಿಕ ಮೃತರು ಬೇರೆ, ನಿಮ್ಮ ತಂದೆ ಬೇರೆ ಎಂದು ಹೇಳಿದ್ದಾರೆ. ಹಾಗಾದರೆ ಅಂತ್ಯಕ್ರಿಯೆ ನಡೆದಿದ್ದು ಯಾರದ್ದು, ಶಿಕಾರಿಪುರದ ವೃದ್ಧ ಎಲ್ಲಿದ್ದಾರೆ? ಎನ್ನುವ ಅನುಮಾನ ಮೂಡಿದೆ.
ಏನಿದು ಪ್ರಕರಣ?
ಉಸಿರಾಟದ ತೊಂದರೆಯಿದ್ದ ಹಿನ್ನೆಲೆಯಲ್ಲಿ ಮಹಾದೇವಪ್ಪ ಎಂಬ ವೃದ್ಧರನ್ನು ಶಿಕಾರಿಪುರದ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು. ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ವೈದ್ಯರು ಕೊರೊನಾ ಸೋಂಕಿನ ಪರೀಕ್ಷೆ ನಡೆಸಿದ್ದಾರೆ. ಮೊದಲ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು, ನಂತರ ರ್ಯಾಪಿಡ್ ಟೆಸ್ಟ್ ನಲ್ಲಿ ವೃದ್ಧನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಶಿಕಾರಿಪುರದಿಂದ ಮೆಗ್ಗಾನ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕಳುಹಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಸರಿಯಾಗಿ ನೀಡುತ್ತಿಲ್ಲ: ಆರೋಪ
ಈ ಮಾಹಿತಿಯನ್ನು ಮಹಾದೇವಪ್ಪ ಅವರ ಕುಟುಂಬಕ್ಕೆ ತಿಳಿಸಿದ್ದು, ಬಳಿಕ ವಿಷಯ ತಿಳಿದು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿ ಕುಟುಂಬಸ್ಥರು ಮಹಾದೇವಪ್ಪ ಬಗ್ಗೆ ವಿಚಾರಿಸಿದರೆ ಈ ಹೆಸರಿನವರು ಯಾರೂ ಇಲ್ಲ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಅವರ ಜೊತೆ ಆಸ್ಪತ್ರೆಯಲ್ಲಿ ಕುಟುಂಬದವರು ಯಾರೂ ಇರಲಿಲ್ಲ
ಇದರಿಂದ ಆತಂಕಿತರಾದ ಮಹಾದೇವಪ್ಪ ಕುಟುಂಬದವರು ಮೂರ್ನಾಲ್ಕು ದಿನ ಮೆಗ್ಗಾನ್ ಆಸ್ಪತ್ರೆಗೆ ಅಲೆದಾಡಿದರೂ ಯಾವುದೇ ಮಾಹಿತಿ ಸಿಗದಿದ್ದಾಗ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಆರೋಗ್ಯ ಇಲಾಖೆ ಅಧಿಕಾರಿಗಳು ಮಹದೇವಪ್ಪ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ
ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುವುದೇ ಬೇರೆ. ಮಹಾದೇವಪ್ಪ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗ ಅವರ ಜೊತೆ ಆಸ್ಪತ್ರೆಯಲ್ಲಿ ಕುಟುಂಬದವರು ಯಾರೂ ಇರಲಿಲ್ಲ. ಹೀಗಾಗಿ ಅವರನ್ನು ನಾವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದೆವು. ಬಳಿಕ ಅವರ ಕುಟುಂಬದವರಿಗೆ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ, ಹಾಗಾಗಿ ಅವರ ವಿರುದ್ಧ ಅಂದೇ ದೂರು ದಾಖಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ.
ಮೃತ ವೃದ್ಧ ಚನ್ನಬಸಪ್ಪ ಎಂದು ಹೇಳಲಾಗಿದೆ
ಎರಡು ದಿನದ ಹಿಂದೆ ಕೊರೊನಾ ಸೋಂಕಿನಿಂದ 90 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಅವರೇ ಮಹಾದೇವಪ್ಪನವರಾ ಅಥವಾ ಬೇರೆಯವರಾ ಎಂಬುದನ್ನು ಪರಿಶೀಲಿಸುತ್ತೇವೆ ಎನ್ನುತ್ತಿದ್ದಾರೆ ಈ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಈ ಕುರಿತು ಮೆಗ್ಗಾನ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀಧರ್ ಒನ್ ಇಂಡಿಯಾದೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಮೃತ ವೃದ್ಧ ಚನ್ನಬಸಪ್ಪ ಎಂದು ಹೇಳಲಾಗಿದೆ.
ಭೂಮಿ ನೀಡುವ ಯಾವ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಬಿ.ವೈ.ರಾಘವೇಂದ್ರ
ಶಿಕಾರಿಪುರದ ವೃದ್ಧ ನಮ್ಮ ಆಸ್ಪತ್ರೆಗೆ ದಾಖಲಾದ ಕುರಿತು ಕೇಸ್ ಸೀಟ್ ಇದೆ, ಆದರೆ ರೋಗಿ ಎಲ್ಲಿದ್ದಾರೆ ಎಂಬ ಮಾಹಿತಿ ಪತ್ತೆಯಾಗಿಲ್ಲ. ಅವರು ಕಾಣೆಯಾಗಿದ್ದಾರಾ? ಅಥವಾ ಎಲ್ಲಿದ್ದಾರೆ ಎಂಬ ಮಾಹಿತಿ ಇನ್ನೂ ಪತ್ತೆಯಾಗಿಲ್ಲ ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.
ಕುಟುಂಬದವರು ಕೇಳುತ್ತಿರುವುದು ನಮ್ಮ ಅಜ್ಜನ ಹುಡುಕಿಕೊಡಿ ಎಂದು
ಹಾಗಾದರೆ ವೃಧ್ಧ ಮಹಾದೇವಪ್ಪ ಎಲ್ಲಿದ್ದಾರೆ? ಮೃತರಾಗಿದ್ದಾರೆ ಎಂದರೇ ಕುಟುಂಬವರಿಗೆ ತಿಳಿಸಿಲ್ಲ ಏಕೆ? ಕಾಣೆಯಾಗಿದ್ದಾರೆ ಎನ್ನುವುದಾದರೆ ಆಸ್ಪತ್ರೆಯ ನಿರ್ಲಕ್ಷ್ಯ ಕಾರಣವೇ? ಕುಟುಂಬದವರು ಕೇಳುತ್ತಿರುವುದು ನಮ್ಮ ಅಜ್ಜನ ಹುಡುಕಿಕೊಡಿ. ಮೃತರಾಗಿದ್ದಾರೆ ಎನ್ನುವುದಾದರೆ ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ. ಈ ಸಂಬಂಧ ಕುಟುಂಬದವರು ದೂರು ನೀಡಲು ಹೋದರೂ ಪೊಲೀಸರು ದೂರು ತೆಗೆದುಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಕುಟುಂಬದ ಹಿರಿಯ ವ್ಯಕ್ತಿಯನ್ನು ಕಳೆದುಕೊಂಡು ಸದಸ್ಯರು ಸಂಪೂರ್ಣ ವಿಚಲಿತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಆಶಯವಾಗಿದೆ.