ಕೃಷಿ ನಿಯಂತ್ರಣಕ್ಕೆ ಹಲವು ಕಾನೂನು ಬರಲಿವೆ; ಟಿಕಾಯತ್ ಎಚ್ಚರಿಕೆ
ಶಿವಮೊಗ್ಗ, ಮಾರ್ಚ್ 21: " ಕೃಷಿ ಸಂಬಂಧ ಈಗಾಗಲೇ ಮೂರು ಕಾನೂನು ಬಂದಿವೆ. ಇನ್ನಷ್ಟು ಕಾನೂನು ತರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ದೇಶವ್ಯಾಪಿ ಹೋರಾಟ ನಡೆಸಲಾಗುತ್ತಿದೆ" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದರು.
ಭಾನುವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೃಷಿ ಮಾರುಕಟ್ಟೆಯನ್ನು ಕಬಳಿಸಲು ಅನೇಕ ಬಹುರಾಷ್ಟ್ರೀಯ ಕಂಪನಿಗಳು ಹಾತೊರೆಯುತ್ತಿವೆ. ಈಗಾಗಲೇ ತರಕಾರಿ ಸೇರಿದಂತೆ ಹಲವು ವಸ್ತುಗಳನ್ನು ಮಾಲ್ಗಳಲ್ಲಿ ಖರೀದಿಸುತ್ತಿದ್ದೇವೆ. ಮುಂದೆ ಜನರ ರೊಟ್ಟಿಯು ಕೂಡ ತಿಜೋರಿ ಸೇರಿ, ಜನರು ಸಂಕಷ್ಟಕ್ಕೀಡಾಗುವಂತಾಗುತ್ತದೆ" ಎಂದರು.
ಬೆಂಗಳೂರು ಸುತ್ತುವರೆದು ರೈತರು ಹೋರಾಡಿ; ಟಿಕಾಯತ್ ಕರೆ
"ದೇಶದ ಜನರ ರೊಟ್ಟಿಯನ್ನು ತಿಜೋರಿಯಲ್ಲಿ ಇರಿಸಿ ಬಂದ್ ಮಾಡಲು ಯತ್ನಿಸಲಾಗುತ್ತಿದೆ. ಇದರ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಕೃಷಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಕಾನೂನುಗಳನ್ನು ರೂಪಿಸಲಾಗುತ್ತಿದೆ. ಈ ಕಾನೂನುಗಳ ವಿರುದ್ಧ ಮಾತನಾಡಿದರೆ ಪ್ರಕರಣಗಳು ದಾಖಲಾಗುತ್ತಿದೆ. ಜೂನ್ ತಿಂಗಳೊಳಗೆ ನಮ್ಮ ಹೋರಾಟ ನಿಲ್ಲಲಿದೆ ಎಂದು ಕೇಂದ್ರ ಸರ್ಕಾರ ಯೋಚಿಸಿದೆ. ಆದರೆ, ನಮ್ಮ ಹೋರಾಟ ಮುಂದುವರೆಸಲಿದ್ದೇವೆ" ಎಂದು ರಾಕೇಶ್ ಟಿಕಾಯತ್ ಹೇಳಿದರು.
ಕೃಷಿ ಮೂಲಭೂತ ಸೌಕರ್ಯ ನಿಧಿ; ರೈತರಿಗೆ ಪ್ರಯೋಜನಗಳು
ವಾರಾಂತ್ಯದ ಸಂತೆಗಳ ಮೇಲೆ ನಿಯಂತ್ರಣ
"ಕೃಷಿ ಕಾಯ್ದೆ ಬಗ್ಗೆ ವ್ಯಾಪಾರಿಗಳಿಗೆ ಮೊದಲೇ ತಿಳಿದಿತ್ತು. ಹಾಗಾಗಿ ಅವರು ದೊಡ್ಡ ದೊಡ್ಡ ಗೋದಾಮುಗಳನ್ನು ಸ್ಥಾಪಿಸಿದ್ದಾರೆ. ವಾರಾಂತ್ಯದ ಸಂತೆಗಳ ಮೇಲೆ ನಿಯಂತ್ರಣ ಸಾಧಿಸಿ, ಆಹಾರ ಮಾರುಕಟ್ಟೆಯನ್ನು ಸ್ಥಾಪಿಸುವ ಹುನ್ನಾರ ಕೇಂದ್ರ ಸರ್ಕಾರದ್ದಾಗಿದೆ. ಈ ಮೂಲಕ ರೈತರು, ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳಲಾಗುತ್ತಿದೆ" ಎಂದು ರಾಕೇಶ್ ಟಿಕಾಯತ್ ಆರೋಪಿಸಿದರು.
ಬೆಂಬಲ ಬೆಲೆ ಕಾನೂನು ಮಾಡಲಿ
ಸಂಯುಕ್ತ ಕಿಸಾನ್ ಮೋರ್ಚಾದ ಮತ್ತೊಬ್ಬ ಮುಖಂಡ ಯುದ್ದವೀರ್ ಸಿಂಗ್ ಮಾತನಾಡಿ, "ಬೆಂಬಲ ಬೆಲೆ ಈ ಹಿಂದೆ ಇತ್ತು, ಈಗಲೂ ಇದೆ, ಮುಂದೆಯು ಇರುತ್ತೆ ಎಂದು ಪ್ರಧಾನಿಯವರು ತಿಳಿಸುತ್ತಿದ್ದಾರೆ. ಆದರೆ ಬೆಂಬಲ ಬೆಲೆ ಕಾನೂನು ರೂಪಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಬೆಳೆಯನ್ನು ಸರ್ಕಾರವೇ ಖರೀದಿಸಲಿ, ಮಾರುಕಟ್ಟೆಯಲ್ಲೆ ಖರೀದಿಸಲಿ, ಬೆಂಬಲ ಬೆಲೆಯಲ್ಲಿ ಖರೀದಿಯಾಗಬೇಕು" ಎಂದರು.
ದೇಶದ ರೈತರಿಗೇನು ಮಿದುಳಿಲ್ಲವಾ?
"ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರನ್ನು ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಈ ದೇಶದ ರೈತರಿಗೇನು ಮಿದುಳಿಲ್ಲವಾ?, ಅಧಿಕಾರಿಗಳು, ಅಧಿಕಾರದಲ್ಲಿ ಇರುವವರಿಗೆ ಮಾತ್ರ ಯೋಚನಾ ಶಕ್ತಿ ಇರುವುದಾ?. ಬಿಜೆಪಿಯನ್ನು ಕೇಡರ್ ಪಕ್ಷದ ಎಂದುಕೊಂಡಿದ್ದೆವು. ಆದರೆ ಅದು ಇಬ್ಬರಿಂದ ಮಾತ್ರ ನಡೆಯುತ್ತಿರುವ ಪಕ್ಷ. ಕೆಲವು ಉದ್ಯಮಿಗಳಿಗಾಗಿ ನಡೆಯುತ್ತಿರುವ ಪಕ್ಷ" ಎಂದು ಆರೋಪಿಸಿದರು.
ಕೃಷಿಕರಿಗಷ್ಟೆ ಸೀಮಿತವಾಗದ ಆಂದೋಲನ
"ಉತ್ತರ ಭಾರತದಲ್ಲಿ ಆರಂಭವಾದ ಆಂದೋಲನ ಮೊದಲಿಗೆ ಕೃಷಿಕರಿಗೆ ಸೀಮಿತವಾಗಿತ್ತು. ಆದರೆ ಕಾರ್ಮಿಕರು ಸಮಸ್ಯೆಯಲ್ಲಿದ್ದಾರೆ, ಶ್ರಮಿಕರು ಸಮಸ್ಯೆಯಲ್ಲಿದ್ದಾರೆ, ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಯೋಜಿಸಲಾಗಿದೆ. ಈಗ ಹೋರಾಟದ ವ್ಯಾಪ್ತಿ ದೊಡ್ಡದಾಗಿದೆ" ಎಂದು ಯುದ್ದವೀರ್ ಸಿಂಗ್ ತಿಳಿಸಿದರು.