ಶಿವಮೊಗ್ಗದ ದಲಿತರ ಬಡಾವಣೆಯಲ್ಲಿ ಮಂತ್ರಾಲಯ ಶ್ರೀ ಪಾದಯಾತ್ರೆ
ದಲಿತರ ಬಡಾವಣೆ ಬೀದಿಗಳಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥರು ಪಾದಯಾತ್ರೆ ಮಾಡಿದರು. ನಾನು ನೆಪ ಮಾತ್ರಕ್ಕೆ ಆಗಮಿಸಿದೆ, ಭಕ್ತರಿಂದ ಹೂವಿನ ಮಾಲೆ ಹಾಕಿಸಿಕೊಂಡೆ ಅಂತ ಅಗಬಾರದು ಎಂದರು.
ಶಿವಮೊಗ್ಗ, ನವೆಂಬರ್ 7: ಇಲ್ಲಿನ ಹೊಸಮನೆ ಬಡಾವಣೆಯ ದಲಿರ ಬೀದಿಗಳಲ್ಲಿ ಭಾನುವಾರ ಬೇರೆಯದೇ ಚಿತ್ರ ಕಾಣುತ್ತಿತ್ತು. ಕಾವಿ ತೊಟ್ಟಿದ್ದ ಸ್ವಾಮೀಜಿಯೊಬ್ಬರು ಆ ಬೀದಿಗಳಲ್ಲಿ ಓಡಾಡಿದರು. ಅಲ್ಲಿನ ಜನರ ಜತೆ ಮಾತನಾಡಿದರು. ಇವ್ರು ನಮ್ ಮನೆಯವರೆಗೆ ಬಂದರಲ್ಲಾ, ಎಂದು ಅಲ್ಲಿನ ಜನರೂ ಆಶ್ಚರ್ಯಪಟ್ಟರು.
ಹಾಗೆ ದಲಿತರ ಬಡಾವಣೆ ಬೀದಿಗಳಲ್ಲಿ ಓಡಾಡಿದವರು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥರು. ಅದೊಂದು ಪಾದಯಾತ್ರೆ ಕಾರ್ಯಕ್ರಮವಾಗಿತ್ತು. ಸ್ವಾಮೀಜಿ ಬಡಾವಣೆಯ ಮನೆಮನೆಗೂ ತೆರಳಿ ಸ್ವಚ್ಛತೆ ಬಗ್ಗೆ ತಿಳಿಹೇಳಿದರು. ಜಾಗೃತಿ ಮೂಡಿಸಿದರು. ಈ ವೇಳೆ ಅಲ್ಲಿ ಮಹಿಳೆಯರು ಪಾದಪೂಜೆ ಮಾಡಿದರು. ದಾರಿಯಲ್ಲಿ ನೀರು ಹಾಕಿ, ಹೂವುಗಳಿಂದ ಕೂಡಿದ ರಂಗೋಲಿ ಹಾಕಿದ್ದರು.[ಉಡುಪಿ: ಮಂತ್ರಾಲಯ ಸ್ವಾಮೀಜಿಗಳ ಪುರ ಪ್ರವೇಶ]
ಆಶೀರ್ವಚನ ನೀಡಿದ ಸ್ವಾಮೀಜಿ, 'ನಾನು ನೆಪ ಮಾತ್ರಕ್ಕೆ ಆಗಮಿಸಿದೆ, ಭಕ್ತರಿಂದ ಹೂವಿನ ಮಾಲೆ ಹಾಕಿಸಿಕೊಂಡೆ ಅಂತ ಅಗಬಾರದು. ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಕ್ಕೆ ಯಾವಾಗಲೂ ಹೋಗುತ್ತೇನೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕುರಿತ ಜಾಗೃತಿಗಾಗಿ ಬಂದಿದ್ದೇನೆ' ಎಂದರು.
'ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಕಲ್ಪನೆ ಸ್ವಚ್ಛ ಭಾರತ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ನನ್ನ ಉದ್ದೇಶ. ಇದು ರಾಜಕೀಯ ಅಥವಾ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಬೇರೆ ದೇಶಗಳನ್ನು ಹೊಗಳುವ ನಾವು, ದೇಶದ ಸ್ವಚ್ಛತೆ ಕಾಪಾಡಿಕೊಳ್ಳಲು ಗಮನಹರಿಸಬೇಕು' ಎಂದರು.[ಮಂತ್ರಾಲಯ ಮಠದಲ್ಲಿ ಅತೃಪ್ತಿಯ ಕಿಡಿ, ರಾಘವೇಂದ್ರ!]
ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ನಾಣು ಮಂತ್ರಾಲಯಕ್ಕೆ ಹೋಗಿಬಂದಿದ್ದೆ. ಸ್ವಾಮಿಗಳೇ ನಮ್ಮ ಮನೆ ಬಾಗಿಲವರೆಗೆ ಬಂದಿದ್ದು ತುಂಬ ಖುಷಿಯಾಗಿದೆ ಎಂದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.