Breaking; ಶಿವಮೊಗ್ಗದಲ್ಲಿ ಚಾಕು ಇರಿತ, ಪ್ರಮುಖ ಆರೋಪಿಗೆ ಗುಂಡೇಟು
ಶಿವಮೊಗ್ಗ: ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಜಬೀ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಮಾರ್ನಮಿ ಬೈಲಿನ (30) ವರ್ಷದ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬೆಳಗಿನ ಜಾವ ಶಿವಮೊಗ್ಗದ ಎನ್. ಟಿ. ರಸ್ತೆಯ ಫಲಕ್ ಪ್ಯಾಲಸ್ ಬಳಿ ಆರೋಪಿ ಮೊಹಮ್ಮದ್ ಜಬೀ ಕಾಲಿಗೆ ಗುಂಡು ಹಾರಿಸಿ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ನಡೆದದ್ದು ಹೇಗೆ?; ಆಗಸ್ಟ್ 15ರಂದು ಗಾಂಧಿ ಬಜಾರ್ ತರಕಾರಿ ಮಾರುಕಟ್ಟೆ ಬಳಿ 20 ವರ್ಷದ ಪ್ರೇಮ ಸಿಂಗ್ ಎಂಬಾತನ ಹೊಟ್ಟೆಗೆ ಚಾಕು ಇರಿಯಲಾಗಿತ್ತು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಂಧಿಸಲು ಮುಂದಾಗಿದ್ದರು.
ಮಂಗಳವಾರ ಬೆಳಗಿನ ಜಾವ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿಯನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆಯೇ ಚಾಕುವಿನಿಂದ ಇರಿಯಲು ಆತ ಮುಂದಾಗಿದ್ದಾನೆ. ಹಾಗಾಗಿ ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ ಎಸ್.ಕುರಿ ಅವರು ಪಿಸ್ತೂಲಿನಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮೊಹಮ್ಮದ್ ಜಬೀ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಾಕು ಇರಿತ ಪ್ರಕರಣ ಸಂಬಂಧ ಈಗಾಗಲೇ ದೊಡ್ಡಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜೆಸಿ ನಗರದ 25 ವರ್ಷದ ನದೀಮ್ ಹಾಗೂ ಬುದ್ಧ ನಗರದ 25 ವರ್ಷದ ಅಬ್ದುಲ್ ರೆಹಮಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.
ಎರಡು ದಿನಗಳ ಹಿಂದಷ್ಟೇ ಸಿಟಿ ಸೆಂಟರ್ ಮಾಲ್ನಲ್ಲಿ ಸಾವರ್ಕರ್ ಚಿತ್ರ ಹಾಕಿದ್ದನ್ನು ಪ್ರಶ್ನಿಸಿದ ಬೆನ್ನಲ್ಲೇ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮುಂದುವರಿದ ಭಾಗವಾಗಿ ಅಮೀರ್ ಅಹಮ್ಮದ್ ವೃತ್ತದಲ್ಲಿ ಸಾವರ್ಕರ್ ಚಿತ್ರ ತೆರವುಗೊಳಿಸಿದ್ದಕ್ಕೆ ಗಲಾಟೆ ಆಗಿದೆ.
Recommended Video
ಗುಂಪು ಚದುರಿಸುವುದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು. ರಾಜಸ್ಥಾನ ಮೂಲದ ಹಾಗೂ ನಗರದ ಅಂಗಡಿಯೊಂದರಲ್ಲಿ ಕಾರ್ಯರ್ವನಿರ್ವಹಿಸುತ್ತಿದ್ದ ಪ್ರೇಮ್ ಸಿಂಗ್ ಎಂಬುವವರಿಗೆ ಕಿರಾತಕರು ಚಾಕುವಿನಿಂದ ಇರಿದಿದ್ದರು. ನಗರದಲ್ಲಿ ಇಂದು ಕೂಡ 144 ಸೆಕ್ಷನ್ ಜಾರಿಯಲ್ಲಿದ್ದು, ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.