ಶಿವಮೊಗ್ಗದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಸಾವರ್ಕರ್ ಫೋಟೋ!
ಶಿವಮೊಗ್ಗ, ಆಗಸ್ಟ್ 14: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ಶಿವಮೊಗ್ಗದಲ್ಲಿ ವಿವಾದಕ್ಕೆ ಕಾರಣವಾಗಿದೆ. ಬ್ಯಾರಿಸ್ ಸಿಟಿ ಸೆಂಟರ್ ಮಾಲ್ನಲ್ಲಿ ಶನಿವಾರ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಸಿಟಿ ಸೆಂಟರ್ ಮಾಲ್ ಒಳ ಆವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಮಹಾತ್ಮ ಗಾಂಧಿ, ಜವಾಹರ್ಲಾಲ್ ನೆಹರೂ, ಆಜಾದ್ ಚಂದ್ರಶೇಖರ್, ಸರ್ದಾರ್ ವಲ್ಲಭಬಾಯಿ ಪಟೇಲ್, ವಿನಾಯಕ ದಾಮೋದರ ಸಾರ್ವರ್ಕರ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.
ವಿಡಿಯೋ: ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ಚಂಡೀಗಢದ ಜನತೆ
ಬ್ಯಾರಿಸ್ ಸಿಟಿ ಸೆಂಟರ್ ಮಾಲ್ಗೆ ಬಂದಿದ್ದ ಕಾರ್ಪೊರೇಟರ್ ಒಬ್ಬರ ಪತಿ ಮತ್ತು ಸಾಮಾಜಿಕ ಹೋರಾಟಗಾರ ಆಸಿಫ್ ಮತ್ತು ಆತನ ಸಂಗಡಿಗರು, ಆಕ್ಷೇಪ ವ್ಯಕ್ತಪಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮುಸ್ಲಿಂ ಹೋರಾಟಗಾರರ ಕಡೆಗಣನೆ
ಪ್ರದರ್ಶನದಲ್ಲಿ ಇರುವ ಭಾವಚಿತ್ರಗಳ ಪೈಕಿ ಮುಸ್ಲಿಂ ಹೋರಾಟಗಾರರನ್ನು ಕಡೆಗಣಿಸಲಾಗಿದೆ ಎಂದು ಆಸಿಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿ. ಡಿ. ಸಾರ್ವರ್ಕರ್ ಅವರ ಭಾವಚಿತ್ರ ಅಳವಡಿಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸಿಟಿ ಸೆಂಟರ್ ಮಾಲ್ ಆವರಣದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು.
ಪೊಲೀಸರ ಲಾಠಿ ಏಟು ತಿಂದು ಜೈಲು ಸೇರಿದ್ದೆವು ಎಂದ ಪ್ರಲ್ಹಾದ್ ಜೋಶಿ: ಯಾವಾಗ ಗೊತ್ತಾ?
ಸಂಘ ಪರಿವಾರ-ಬಿಜೆಪಿ ಮುಖಂಡರ ಆಕ್ರೋಶ
ಆಸಿಫ್ ಮತ್ತು ಆತನ ಸಂಗಡಿಗರು ಸಿಟಿ ಸೆಂಟರ್ ಮಾಲ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ. ವಾಟ್ಸಪ್ ಮತ್ತು ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಅಲ್ಲದೆ ಪರ ವಿರೋಧದ ಚರ್ಚೆಗೂ ಕಾರಣವಾಯಿತು. ಇದರ ಬೆನ್ನಿಗೆ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಆಸಿಫ್ ಮತ್ತು ಆತನ ಸಂಗಡಿಗರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಸಿಪ್ ಬಂಧನಕ್ಕೆ ಆಗ್ರಹ
ಇನ್ನು, ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಸಿಟಿ ಸೆಂಟರ್ ಮಾಲ್ ಮುಂದೆ ಧರಣಿ ನಡೆಸಿದರು. ಆಸಿಫ್ ಮತ್ತು ಆತನ ಸಂಗಡಿಗರನ್ನು ಬಂಧಿಸಬೇಕು ಆಗ್ರಹಿಸಿದರು. ಅವರ ಬಂಧನ ಆಗುವವರೆಗೆ ತಾವು ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಜಗದೀಶ್, "ಸಂಭ್ರಮದ ಸ್ವಾತಂತ್ರ್ಯ ಆಚರಣೆ ನಿಲ್ಲಿಸಲು ಹೊರಟಿದ್ದರು. ನಾವು ಇಲ್ಲಿ ಬಂದು ಆಚರಣೆಯನ್ನು ಮುಂದುವರೆಸಿದ್ದೇವೆ. ಪಾಲಿಕೆಯವರು ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಗಲಾಟೆ ಮಾಡಿದವರನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.
"ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಪ್ರದರ್ಶನ ಮಾಡುವಂತೆ ಸರ್ಕಾರ ಆದೇಶಿಸಿದೆ. ಅದರಂತೆ ನಾವು ಸಿಟಿ ಸೆಂಟರ್ ಮಾಲ್ನಲ್ಲಿ ಭಾವಚಿತ್ರ ಪ್ರದರ್ಶನ ಮಾಡಿದ್ದೇವೆ. ಅಲಂಕಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಸಿಫ್ ಮತ್ತು ಆತನ ಸಂಗಡಿಗರು ಬಂದು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಭಾವಚಿತ್ರ ಮಾತ್ರ ಹಾಕಿದ್ದೀರ. ಮುಸ್ಲಿಂ ಹೋರಾಟಗಾರರ ಭಾವಚಿತ್ರವಿಲ್ಲ ಅಂತಾ ಗಲಾಟೆ ಮಾಡಿದ್ದಾರೆ. ಇದೆಲ್ಲಾ ಸಿಸಿ ಕ್ಯಾಮರಾದಲ್ಲಿಯು ರೆಕಾರ್ಡ್ ಆಗಿದೆ" ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದ್ದಾರೆ
ಆಸಿಪ್ ಬಂಧನಕ್ಕೆ ಆಗ್ರಹ
"ಭಾವಚಿತ್ರ ಪ್ರದರ್ಶನದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಆರೋಪ ಸಂಬಂಧ ಆಸಿಫ್ ಮತ್ತು ಆತನ ಸಹಚರರ ವಿರುದ್ಧ ಪಾಲಿಕೆ ವತಿಯಿಂದ ದೂರು ನೀಡಲಾಗಿದೆ. ಐಪಿಸಿ ಸೆಕ್ಷನ್ 341, 353 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ" ಎಂದು ಬಿಜೆಪಿ ನಗರಾಧ್ಯಕ್ಷ ಜಗದೀಶ್ ಅವರು ತಿಳಿಸಿದ್ದಾರೆ.
ಬ್ಯಾರಿಸ್ ಸಿಟಿ ಸೆಂಟರ್ ಮಾಲ್ನಲ್ಲಿ ನಡೆದ ಘಟನೆಯಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಸಿಟಿ ಸೆಂಟರ್ ಮಾಲ್ನಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.