ಡಿ. ಕೆ. ಶಿವಕುಮಾರ್ ಪಿಎ ಎಂದು 15 ಲಕ್ಷ ವಂಚಿಸಿದ ಭೂಪ!
ಶಿವಮೊಗ್ಗ, ನವೆಂಬರ್ 11; ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕೆಎಸ್ಆರ್ಟಿಸಿ ಚಾಲಕರೊಬ್ಬರಿಗೆ 15 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ನಿವೃತ್ತ ಚಾಲಕ ಕೆಂಚಪ್ಪ ಮೋಸ ಹೋದವರು. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಂಚಪ್ಪ ಅವರಿಂದ 15 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ನಿವೇಶನ ಕೊಡಿಸುವ ಹೆಸರಿನಲ್ಲಿ ವಂಚನೆ: ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಸೆರೆ
2106ರಲ್ಲಿ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಕೆಂಚಪ್ಪ ಅವರಿಗೆ ಪರಿಚಯವಾಗಿದ್ದಾನೆ. ತಾನು ವಿಶ್ವಾಸ್ ಚಂದ್ರಶೇಖರ್ ಮತ್ತು ಜೊತೆಗಿದ್ದ ಮಹಿಳೆಯನ್ನು ಸಂಧ್ಯಾ ಎಂದು ಪರಿಚಿಯಿಸಿಕೊಂಡಿದ್ದಾರೆ.
ಮೈಸೂರು; ರೈಲ್ವೆ ನೌಕರಿ ನೆಪದಲ್ಲಿ ವಂಚನೆ, ಬಂಧನ!
"ನಾನು ಡಿ. ಕೆ. ಶಿವಕುಮಾರ್ ಆಪ್ತ ಕಾರ್ಯದರ್ಶಿ. ಸರ್ಕಾರಿ ಕೆಲಸ ಕೊಡಿಸುತ್ತೇನೆ" ಎಂದು ನಂಬಿಸಿದ್ದಾನೆ. ವಿಶ್ವಾಸ್ ಚಂದ್ರಶೇಖರ್ ಮಾತು ನಂಬಿದ ಕೆಂಚಪ್ಪ ತಮ್ಮ ಪರಿಚಯದವರೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸಲು ಹಣ ನೀಡಿದ್ದಾರೆ. ಸ್ವಲ್ಪ ಹಣವನ್ನು ನೇರವಾಗಿ ಕೊಟ್ಟಿದ್ದಾರೆ. ಉಳಿದ ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸಿದ್ದಾರೆ.
ದಾವಣಗೆರೆ; ರೈತರು, ವರ್ತಕರಿಗೆ ವಂಚನೆ, 2 ಕೋಟಿ ಪೊಲೀಸರ ವಶಕ್ಕೆ!
ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದ ವಿಶ್ವಾಸ್ ಚಂದ್ರಶೇಖರ್ ಬಳಿಕ ಸರಿಯಾಗಿ ಸ್ಪಂದಿಸಿಲ್ಲ. ಹಣ ಹಿಂತಿರುಗಿಸುವಂತೆ ಕೆಂಚಪ್ಪ ಒತ್ತಡ ಹೇರಿದ್ದಾರೆ. ವಿಶ್ವಾಸ್ ಚಂದ್ರಶೇಖರ್ ಊರಿಗೆ ಹೋಗಿ ಹಣ ಕೇಳಿದಾಗ 1 ಲಕ್ಷ ರೂ. ನ ಚೆಕ್ ನೀಡಿದ್ದಾನೆ. ಆದರೆ ಆ ಚೆಕ್ ಬೌನ್ಸ್ ಆಗಿದೆ.
ಕೊನೆಗೆ ನಿವೃತ್ತ ಚಾಲಕ ಕೆಂಚಪ್ಪ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಚಿಕ್ಕಮಗಳೂರಿನ ವಿಶ್ವಾಸ್ ಚಂದ್ರಶೇಖರ್ ಮತ್ತು ಮೈಸೂರಿನ ಸಂಧ್ಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೈಕ್ ಡಿಕ್ಕಿ, ತಲೆ ಮೇಲೆ ಹತ್ತಿದ ಕಾರು; ವೇಗವಾಗಿ ಬಂದ ಬೈಕ್ ಪಾದಚಾರಿಯೊಬ್ಬರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಪಾದಚಾರಿಯ ತಲೆ ಮೇಲೆ ಅದೇ ದಾರಿಯಲ್ಲಿ ಬಂದ ಕಾರಿನ ಚಕ್ರ ಹತ್ತಿದೆ. ಗಂಭೀರ ಗಾಯಗೊಂಡಿದ್ದ ಪಾದಚಾರಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ತಾಲೂಕು ಹೊಸಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಗೋಣೆಪ್ಪ, ಪರಶುರಾಮ, ಮಂಗಳಮ್ಮ ಎಂಬುವವರು ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ಅಪಘಾತವಾಗಿದೆ.
ಶಿವಮೊಗ - ತೀರ್ಥಹಳ್ಳಿ ರಸ್ತೆಯ ಪಕ್ಕದಲ್ಲಿ ಮೂವರು ನಡೆದುಕೊಂಡು ಹೋಗುತ್ತಿದ್ದರು. ಗಾಜನೂರು ಕಡೆಯಿಂದ ಬಂದ ಬೈಕ್ ಗೋಣೆಪ್ಪ (28) ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಬೈಕು ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದರಿಂದ ಗೋಣೆಪ್ಪ ರಸ್ತೆಗೆ ಮೇಲೆ ಬಿದ್ದಿದ್ದಾರೆ. ಅದೇ ಹೊತ್ತಿಗೆ ಬೈಕಿನ ಹಿಂಭಾಗದಲ್ಲೇ ಬರುತ್ತಿದ್ದ ಓಮ್ನಿ ಕಾರು ಗೋಣೆಪ್ಪನ ತಲೆ ಮೇಲೆ ಹತ್ತಿದೆ.
ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಣೆಪ್ಪ ಅವರನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗೋಣೆಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಹೊಸಳ್ಳಿ ಜನರಿಗೆ ನಿತ್ಯ ಭಯ; ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ. ಹೊಸಳ್ಳಿ ಸೇರಿದಂತೆ ಈ ಭಾಗದ ಜನರು ಹೈವೇ ರಸ್ತೆಗೆ ಬರಲು ಹೆದರುತ್ತಾರೆ. ಅಪಘಾತಗಳು ಇಲ್ಲಿ ಸರ್ವೆ ಸಾಮಾನ್ಯ ಎಂಬಂತಾಗಿದೆ.
ಗಾಜನೂರಿನಲ್ಲಿ ಹಲವು ಡಾಬಾಗಳು, ಹೊಟೇಲ್ಗಳಿವೆ. ಕೆಲವು ಕಡೆ ಮದ್ಯಪಾನಕ್ಕೂ ಅವಕಾಶವಿದೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಪ್ರದೇಶದಿಂದ ಇಲ್ಲಿಗೆ ಮದ್ಯ ಸೇವಿಸಲು ಯುವಕರು ಬರುತ್ತಾರೆ.
ಹೀಗೆ ಬರುವವರು ಅತಿ ವೇಗವಾಗಿ ವಾಹನ ಚಲಾಯಿಸುತ್ತಾರೆ. ಇದರಿಂದಾಗಿ ಗಾಜನೂರು ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಘಟನೆ ಸಂಬಂಧ ಬೈಕ್ ಚಾಲಕ ಮತ್ತು ಕಾರು ಚಾಲಕನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.