ಶಿವಮೊಗ್ಗದಲ್ಲಿ ಡಿಕೆಶಿ ಬ್ರದರ್ಸ್ ಮಿಂಚಿನ ಸಂಚಾರ: ಯಡಿಯೂರಪ್ಪ ತಲ್ಲಣ
Recommended Video
ರಾಜ್ಯದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಭಾನುವಾರ (ಏ 21) ಮುಕ್ತಾಯಗೊಳ್ಳಲಿದೆ. ಶಿವಮೊಗ್ಗ ಸೇರಿದಂತೆ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಚುನಾವಣೆ ಮಂಗಳವಾರ (ಏ 23) ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜ್ಯ ರಾಜಕಾರಣದಲ್ಲಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಅದಕ್ಕೊಂದು ತಾರ್ಕಿಕ ಅಂತ್ಯಕಾಣದವರೆಗೆ ವಿರಮಿಸದ ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್, ಶಿವಮೊಗ್ಗ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಡಿಕೆಶಿ, ಮಂಡ್ಯದಲ್ಲಿ ಮಾತ್ರ ಕಾಂಗ್ರೆಸ್ ಭಿನ್ನಮತವನ್ನು ಸರಿದಾರಿಗೆ ತರುವಲ್ಲಿ ವಿಫಲರಾದರು ಎನ್ನುವುದನ್ನು ಬಿಟ್ಟರೆ, ಮಿಕ್ಕೆಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಫುಲ್ ಫೇಮಸ್.
ಬಿ.ವೈ.ರಾಘವೇಂದ್ರ ಸೋಲಿಸಲು ಒಂದಾದ ಮೂವರು ನಾಯಕರು!
ಮೊದಲ ಹಂತದ ಚುನಾವಣೆ ಮುಗಿದ ಕೂಡಲೇ ಶಿವಮೊಗ್ಗದಲ್ಲಿ ಠಿಕಾಣಿ ಹೂಡಿರುವ ಸಹೋದರರು, ಮಧು ಬಂಗಾರಪ್ಪ ಪರ ಮಿಂಚಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು ಸೋಲಿಸಲು ಪಣತೊಟ್ಟಿರುವ ಡಿಕೆಶಿ, ಅತೃಪ್ತ ಮುಖಂಡರನ್ನು ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಯಡಿಯೂರಪ್ಪ, ನನ್ನ ನಡುವೆ ಸ್ನೇಹವಿದೆ. ಆದರೆ ರಾಜಕೀಯ ಬೇರೆ ಗೆಳೆತನ ಬೇರೆ
ಯಡಿಯೂರಪ್ಪ ಮತ್ತು ನನ್ನ ನಡುವೆ ಸ್ನೇಹವಿದೆ. ಆದರೆ ರಾಜಕೀಯ ಬೇರೆ ಗೆಳೆತನ ಬೇರೆ, ಮಧು ಬಂಗಾರಪ್ಪ ಪರ ಪ್ರಚಾರದದಲ್ಲಿ ತೊಡಗಿಸಿಕೊಂಡು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸವನ್ನು ನಾನು ಮತ್ತು ನನ್ನ ಸಹೋದರ ಮಾಡುತ್ತೇವೆ ಎಂದು ಹೇಳಿರುವ ಡಿಕೆಶಿ, ಕಳೆದೆರಡು ದಿನಗಳಿಂದ ಕ್ಷೇತ್ರದಲ್ಲಿ ನಡೆಸುತ್ತಿರುವ ಮಿಂಚಿನ ಸಂಚಾರ, ಯಡಿಯೂರಪ್ಪನವರನ್ನು ಚಿಂತೆಗೀಡುಮಾಡಿದೆ.
ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರರ ನಡುವೆ ಕದನ: ಗೆಲುವು ಯಾರಿಗೆ?
ಬಗರ್ ಹುಕುಂ ಹಕ್ಕುಪತ್ರ, ಮಂಗಲಕಾಯಿಲೆ
ಅರಣ್ಯಹಕ್ಕು ಕಾಯ್ದೆ ತಿದ್ದುಪಡಿ, ಬಗರ್ ಹುಕುಂ ಹಕ್ಕುಪತ್ರ, ಮಂಗಲಕಾಯಿಲೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ಕ್ಷೇತ್ರದಲ್ಲಿದ್ದರೂ, ಎರಡೂ ಪ್ರಮುಖ ಪಕ್ಷಗಳು ಆರೋಪ, ಪ್ರತ್ಯಾರೋಪದಲ್ಲಿ ಮತ್ತು ಭರವಸೆ ನೀಡುವುದನ್ನಷ್ಟೇ ಕಾಯಕ ಮಾಡಿಕೊಂಡು ಕೂತಿವೆ. ಜೆಡಿಎಸ್-ಕಾಂಗ್ರೆಸ್ಸಿಗೆ ಒಗ್ಗಟ್ಟಿನ ಜಪದ ಅನಿವಾರ್ಯತೆ, ಬಿಜೆಪಿಗೆ ಮೋದಿ ಜಪ. ಆರು ತಿಂಗಳ ಹಿಂದೆ ನಡೆದ ಲೋಕಸಭಾ ಉಪಚುನಾವಣೆಯಲ್ಲೂ ಇದೇ ಪರಿಸ್ಥಿತಿಯಿತ್ತು.
ಯಡಿಯೂರಪ್ಪನವರನ್ನು ಚಿಂತೆಗೀಡುಮಾಡಿದ್ದಂತೂ ಹೌದು
ಡಿ ಕೆ ಶಿವಕುಮಾರ್ ಆಖಾಡಕ್ಕೆ ಇಳಿದ ಮೇಲೆ ಕ್ಷೇತ್ರದ ಚಿತ್ರಣ ಬದಲಾಗುತ್ತಿರುವುದಂತೂ ಹೌದು. ಕಳೆದ ಉಪಚುನಾವಣೆಯಲ್ಲಿ ಐವತ್ತು ಸಾವಿರ ಮತಗಳ ಅಂತರದಿಂದ ಸೋತಿದ್ದ ಮಧು ಬಂಗಾರಪ್ಪ, ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇನ್ನು ಬಿ ವೈ ರಾಘವೇಂದ್ರ, ಗೆಲುವಿನ ಅಂತರವಷ್ಟೇ ನಾನು ಎದುರು ನೀಡುತ್ತಿರುವುದು ಎನ್ನುವ ಮಾತನ್ನಾಡಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ಕ್ಷೇತ್ರದ ಚಿತ್ರಣ, ಯಡಿಯೂರಪ್ಪನವರನ್ನು ನಿದ್ದೆಗೆಡಿಸಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು
ಬೇರೆ ಕ್ಷೇತ್ರಗಳಂತೆ ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಅಷ್ಟೇನೂ ಭಿನ್ನಮತವಿಲ್ಲ. ಇಷ್ಟವಿದ್ದರೆ ಮೈತ್ರಿ ಪರವಾಗಿ ಪ್ರಚಾರ ಮಾಡುತ್ತಾರೆ, ಇಲ್ಲದಿದ್ದವರು ತಮ್ಮಪಾಡಿಗೆ ತಾವಿದ್ದಾರೆ. ಇನ್ನು ಜಿಲ್ಲೆಯ ಪ್ರಭಾವಿ ವ್ಯಕ್ತಿಗಳಾದ ಕಾಂಗ್ರೆಸ್ಸಿನ ಬಿ ಕೆ ಸಂಗಮೇಶ್ ಮತ್ತು ಜೆಡಿಎಸ್ಸಿನ ಅಪ್ಪಾಜಿ ಗೌಡರ ನಡುವಿನ ದಶಕದ ವೈರತ್ವವನ್ನು, ಡಿ ಕೆ ಶಿವಕುಮಾರ್ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನನ್ನೇ ನಂಬಿರುವ ಮಧು ಬಂಗಾರಪ್ಪನವರನ್ನು ಡಿಕೆಶಿ ದಡ ಸೇರಿಸುತ್ತಾರಾ
ಗೆಲುವು ಕಂಡುಕೊಳ್ಳಲು ತನ್ನದೇ ತಂತ್ರ ಪ್ರಯೋಗಿಸುವ ಡಿ ಕೆ ಶಿವಕುಮಾರ್, ಕಳೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷಕ್ಕೆ ಊಹಿಸಲೂ ಅಸಾಧ್ಯವಾದ ಗೆಲುವನ್ನು ತಂದುಕೊಟ್ಟಿದ್ದರು. ಈಗ ಶಿವಮೊಗ್ಗದಲ್ಲಿ ಸಹೋದರರಿಬ್ಬರು ರಣತಂತ್ರ ರೂಪಿಸುತ್ತಿದ್ದಾರೆ. ತನ್ನನ್ನೇ ನಂಬಿರುವ ಮಧು ಬಂಗಾರಪ್ಪನವರನ್ನು ಡಿಕೆಶಿ ದಡ ಸೇರಿಸುತ್ತಾರಾ ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.