ಒಂದೇ ವರ್ಷದಲ್ಲಿ ಮೂರು ಚುನಾವಣೆ ಸೋತ ಮಧು ಬಂಗಾರಪ್ಪ
ಶಿವಮೊಗ್ಗ, ಮೇ 24: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಸತತ ಸೋಲುಗಳಿಂದ ಹೈರಾಣಾಗಿದ್ದಾರೆ. 'ಹ್ಯಾಟ್ರಿಕ್' ಸೋಲು ಅವರನ್ನು ಕಂಗೆಡಿಸಿದೆ. ಅದೂ ಅತ್ಯಲ್ಪ ಅವಧಿಯಲ್ಲಿಯೇ ಮೂರು ಪ್ರಮುಖ ಚುನಾವಣೆಗಳಲ್ಲಿ ಸೋಲು ಅನುಭವಿಸಿರುವುದು ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಕುಮಾರ್ ಬಂಗಾರಪ್ಪ ಎದುರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಜೆಡಿಎಸ್ ಅಭ್ಯರ್ಥಿ ಮಧುಬಂಗಾರಪ್ಪ, ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಪಕ್ಷದ ಯಾವ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಳ್ಳುತ್ತಿರಲಿಲ್ಲ. ಆದರೆ, ಜೆಡಿಎಸ್ ನಾಯಕರು ಅವರನ್ನು ಭೇಟಿ ಮಾಡಿ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು.
ಮೈತ್ರಿ ಸರ್ಕಾರದ ನಾಯಕರ ಮನವೊಲಿಕೆ ಪ್ರಯತ್ನ ಯಶಸ್ವಿಯಾಗಿ ಮಧು ಬಂಗಾರಪ್ಪ ಕಣಕ್ಕಿಳಿದಿದ್ದರು. ಆದರೆ, ಈ ಬಾರಿ ಕೂಡ ಅವರಿಗೆ ಸೋಲು ಎದುರಾಗಿದೆ. ಆ ಸೋಲಿನ ಅಂತರ ಇನ್ನಷ್ಟು ಹಿಗ್ಗಿದೆ ಎನ್ನುವುದು ಗಮನಾರ್ಹ. ವಿಶೇಷವೆಂದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಯಾವ ಭಾಗದಲ್ಲಿಯೂ ಅವರಿಗೆ ಮುನ್ನಡೆ ದೊರೆತಿಲ್ಲ. ಜಿಲ್ಲೆಯಲ್ಲಿ ಏಕಮಾತ್ರ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ಭದ್ರಾವತಿಯಲ್ಲಿ, ಜೆಡಿಎಸ್ ಮುಖಂಡ ಅಪ್ಪಾಜಿಗೌಡ ಮತ್ತು ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ನಡುವಿನ ವೈರತ್ವವನ್ನು ಹೋಗಲಾಡಿಸಿ ಇಬ್ಬರೂ ಒಂದಾಗುವಂತೆ ಮಾಡುವಲ್ಲಿ ನಾಯಕರು ಸಫಲರಾಗಿದ್ದರು.
ಚುನಾವಣೆಯಲ್ಲಿ ಬಿಜೆಪಿಯವರೇ ನನಗೆ ಸಹಾಯ ಮಾಡಿದ್ದಾರೆ: ಬಾಂಬ್ ಸಿಡಿಸಿದ ಮಧು ಬಂಗಾರಪ್ಪ
ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಮುಂತಾದವರು ಶಿವಮೊಗ್ಗಕ್ಕೆ ತೆರಳಿ ಪ್ರಚಾರ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ತಮ್ಮನೆದುರು ಮುಖಭಂಗ
2018ರ ವಿಧಾನಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಎದುರು ಬಿಜೆಪಿಯ ಅಭ್ಯರ್ಥಿಯಾಗಿ ಅವರ ಸಹೋದರ ಕುಮಾರ್ ಬಂಗಾರಪ್ಪ ಕಣಕ್ಕಿಳಿದಿದ್ದರು. ಕುಮಾರ್ ಬಂಗಾರಪ್ಪ 72,091 ಮತಗಳನ್ನು ಪಡೆದಿದ್ದರೆ, ಮಧು ಬಂಗಾರಪ್ಪ 68,805 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.
ಜನತೆಗೆ ನನ್ನ ಗೆಲುವು ಬೇಕಾಗಿದೆ ಎಂದ ಮಧು ಬಂಗಾರಪ್ಪ
ಉಪ ಚುನಾವಣೆಯಲ್ಲಿ ಸೋಲು
ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ನವೆಂಬರ್ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಿಂದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಅವರ ಎದುರು ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಕಣಕ್ಕಿಳಿದಿದ್ದರು. ಇಲ್ಲಿ ಉತ್ತಮ ಪೈಪೋಟಿ ನೀಡಿದ್ದರೂ 50 ಸಾವಿರ ಮತಗಳ ಅಂತರದಿಂದ ಮಧು ಬಂಗಾರಪ್ಪ ಸೋಲು ಅನುಭವಿಸಿದ್ದರು.
'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'
ಮತ್ತೆ ಸೋಲಿನ ಕಹಿ
ಈ ಎರಡು ಚುನಾವಣೆಗಳ ಬಳಿಕ ಮಧು ಬಂಗಾರಪ್ಪ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು. ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ, ಈ ಚುನಾವಣೆಯಲ್ಲಿ ಕೂಡ ದೋಸ್ತಿ ಸರ್ಕಾರಕ್ಕೆ ಬಿಜೆಪಿ ಪ್ರಾಬಲ್ಯವನ್ನು ಎದುರಿಸುವ ಸೂಕ್ತ ಅಭ್ಯರ್ಥಿ ಸಿಗದೆ ಮಧು ಬಂಗಾರಪ್ಪ ಅವರ ಮನವೊಲಿಸಿ ಅವರನ್ನೇ ಕಣಕ್ಕಿಳಿಸಿತು. ಸತತ ಎರಡನೆಯ ಬಾರಿಗೆ ಅವರು ಬಿ.ವೈ. ರಾಘವೇಂದ್ರ ಎದುರು ಅಖಾಡಕ್ಕಿಳಿದರು. ಈ ಚುನಾವಣೆಯಲ್ಲಿ ಅವರು ಬಿಜೆಪಿ ಅಲೆ ಎದುರು ಪೈಪೋಟಿ ನೀಡದಾದರು. ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಎಲ್ಲಿಯೂ ಮುನ್ನಡೆ ಸಿಗಲಿಲ್ಲ
ಶಿವಮೊಗ್ಗ ಕ್ಷೇತ್ರದ ಯಾವ ವಿಧಾನಸಭೆ ವ್ಯಾಪ್ತಿಯಲ್ಲಿಯೂ ಮುನ್ನಡೆ ಪಡೆದುಕೊಳ್ಳುವುದು ಮಧು ಬಂಗಾರಪ್ಪ ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಭಾರಿ ಸೋಲು ಅನಿವಾರ್ಯವಾಯಿತು. ಒಂದು ಬಾರಿ ತಮ್ಮನ ಎದುರು ಮತ್ತು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಎದುರು ಕೇವಲ ಒಂದು ವರ್ಷದಲ್ಲಿಯೇ ಎರಡು ಬಾರಿ ಸೋತ ಕುಖ್ಯಾತಿ ಅವರದಾಯಿತು.