ಶಿವಮೊಗ್ಗ: ಜೂ.14ರವರೆಗೆ ಲಾಕ್ಡೌನ್ ವಿಸ್ತರಣೆ, ಮದ್ಯದಂಗಡಿಗೆ ಒಪ್ಪಿಗೆ
ಶಿವಮೊಗ್ಗ, ಜೂನ್ 5: ಶಿವಮೊಗ್ಗ ಜಿಲ್ಲೆಯಾದ್ಯಂತ ಜೂ.14ರವರೆಗೆ ಲಾಕ್ಡೌನ್ ಮುಂದುವರೆಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಕೆಲವು ಕೈಗಾರಿಕೆಗಳಿಗೆ ಈ ಅವಧಿಯಲ್ಲಿ ರಿಲೀಫ್ ನೀಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ದಿನಸಿ, ಮದ್ಯ ಮಾರಾಟದ ಕುರಿತು ಹೊಸ ನಿರ್ಧಾರ ಪ್ರಕಟಿಸಲಾಗಿದೆ. ಈ ಹಿಂದೆ ಜೂನ್ 7ರವರೆಗೆ ಕಠಿಣ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಅವಧಿಯನ್ನು ಜೂನ್ 14ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ""ಜಿಲ್ಲೆಯಲ್ಲಿ ಕಳೆದ 15 ದಿನದ ಹಿಂದೆ ಪಾಸಿಟಿವಿಟಿ ಪ್ರಮಾಣ ಶೇ.40ರಷ್ಟಿತ್ತು. ಈಗ ಅದು ಶೇ.18ಕ್ಕೆ ತಗ್ಗಿದೆ. ಆದರೆ ಕೊರೊನಾ ಪ್ರಮಾಣ ಇನ್ನಷ್ಟು ಕಂಟ್ರೋಲ್ ಮಾಡಲು ಲಾಕ್ಡೌನ್ ವಿಸ್ತರಿಸಲಾಗಿದೆ'' ಎಂದರು.
ಕೈಗಾರಿಕೆ, ದಿನಸಿ ಮತ್ತು ಮದ್ಯ
ಕೆಲವು ಕೈಗಾರಿಕೆಗಳಿಗೆ ರಿಲೀಫ್ ನೀಡಲಾಗಿದ್ದು, ರಫ್ತು ಮತ್ತು ರಕ್ಷಣಾ ಇಲಾಖೆ ಸಂಬಂಧ ಉತ್ಪಾದನೆಯಲ್ಲಿ ತೊಡಗಿರುವ ಕಾರ್ಖಾನೆಗಳು ಕೆಲಸ ಮಾಡಲು ಅವಕಾಶವಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ದಿನಸಿ ಅಂಗಡಿಗಳು ಪ್ರತಿದಿನ ಬೆಳಗ್ಗ 6 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ರಿಟೇಲ್ ವ್ಯಾಪಾರಕ್ಕೆ ಅವಕಾಶವಿದೆ. ಬುಧವಾರ ಮತ್ತು ಶನಿವಾರ ಹೋಲ್ಸೇಲ್ ವ್ಯಾಪಾರ ನಡೆಸಬಹುದಾಗಿದೆ ಎಂದರು.
ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 6 ರಿಂದ ಬೆಳಗ್ಗೆ 8 ಗಂಟೆವರೆಗೆ ಮದ್ಯ ಮಾರಾಟ ಮಾಡಬಹುದು. ಪಾರ್ಸಲ್ಗೆ ಮಾತ್ರ ಅವಕಾಶವಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಆರ್.ಪ್ರಸನ್ನಕುಮಾರ್, ಶಾಸಕ ಕುಮಾರ್ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಉಪಸ್ಥಿತರಿದ್ದರು.