ಶಿವಮೊಗ್ಗ; ಮದ್ಯದಂಗಡಿ ಬಂದ್, ಕಳ್ಳಭಟ್ಟಿಗೆ ಮತ್ತೆ ಬೇಡಿಕೆ!
ಶಿವಮೊಗ್ಗ, ಜೂನ್ 02; ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರ ಕಠಿಣ ಲಾಕ್ಡೌನ್ ಜಾರಿಯಾಗುತ್ತಿದ್ದಂತೆ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕಳ್ಳಭಟ್ಟಿಗೆ ಬೇಡಿಕೆ ಬಂದಿದೆ. ಅಬಕಾರಿ ಅಧಿಕಾರಿಗಳು ನಡುರಾತ್ರಿ ಕಾರ್ಯಾಚರಣೆ ಆರಂಭಿಸಿದ್ದು, ಕಳ್ಳಭಟ್ಟಿ ಕಾಯಿಸುವವರಿಗೆ ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ.
ಮೇ 31ರಂದು ಸೊರಬ ತಾಲೂಕು ಹಂಚಿ ತಾಂಡದಲ್ಲಿ ಕಳ್ಳಭಟ್ಟಿ ಕಾಯಿಸುತ್ತಿದ್ದಾಗಲೇ ದಾಳಿ ನಡೆಸಲಾಯಿತು. 7 ಲೀಟರ್ ಕಳ್ಳಭಟ್ಟಿ ಸಾರಾಯಿ, 175 ಲೀಟರ್ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿತ್ತು. ಕುಮಾರ್ ನಾಯ್ಕ, ರಾಮಾ ನಾಯ್ಕ ಎಂಬುವವರನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಮಿತಿಮೀರಿದ ಕಳ್ಳಭಟ್ಟಿ ದಂಧೆ
ಜೂನ್ 1ರ ನಡುರಾತ್ರಿ ಶಿಕಾರಿಪುರ ತಾಲೂಕು ಮಳವಳ್ಳಿ ತಾಂಡದ ಮಲ್ಲಪ್ಪನ ಕಟ್ಟೆ ಕೆರೆ ದಡದಲ್ಲಿ ಕಳ್ಳಭಟ್ಟಿ ಕಾಯಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳ್ಳಭಟ್ಟಿ ದಂಧೆಕೋರರು ಪರಾರಿಯಾಗಿದ್ದಾರೆ. 135 ಲೀಟರ್ ಬೆಲ್ಲದ ಕೊಳೆ, 9 ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.
ಮದ್ಯ ಇಲ್ಲ; ಕೋಲಾರದಲ್ಲಿ ಶುರುವಾಗಿದೆ ಕಳ್ಳಭಟ್ಟಿ ತಯಾರಿ
ಸಂಪೂರ್ಣ ಲಾಕ್ಡೌನ್ ಹಿನ್ನಲೆಯಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ. ಪ್ರತಿದಿನ ಮುಂಜಾನೆ ಅಗತ್ಯ ವಸ್ತುಗಳ ಖರೀದಿಗೆ ಸಹ ಅವಕಾಶ ನೀಡಿಲ್ಲ. ಮದ್ಯದಂಗಡಿಗಳನ್ನು ಸಹ ಮುಚ್ಚಲಾಗಿದ್ದು, ಜನರು ಕಳ್ಳಭಟ್ಟಿ ಮೊರೆ ಹೋಗಿದ್ದಾರೆ.
ಮತ್ತೊಂದು ಕಳ್ಳಭಟ್ಟಿ ದುರಂತ : ಮದ್ಯ ಸೇವಿಸಿ ಸಾವನ್ನಪ್ಪಿದ ಕಾರ್ಮಿಕರ ಸಂಖ್ಯೆ 80ಕ್ಕೆ ಏರಿಕೆ
ಕಳ್ಳಭಟ್ಟಿಗೆ ಡಿಮಾಂಡ್ ಏಕೆ?
ಶಿವಮೊಗ್ಗ ಜಿಲ್ಲೆಯಲ್ಲಿ ಮದ್ಯದಂಗಡಿಗಳು ಬಂದ್ ಆಗಿವೆ. ಇನ್ನು ಲಾಕ್ ಡೌನ್ ವೇಳೆ ದುಡಿಮೆಯೂ ಇಲ್ಲವಾಗಿದೆ. ಇದೇ ಕಾರಣಕ್ಕೆ ಜನರು ಕಡಿಮೆ ದರದ ಮದ್ಯಕ್ಕೆ ಅಥವಾ ಕಳ್ಳಭಟ್ಟಿಯತ್ತ ವಾಲುತ್ತಿದ್ದಾರೆ. ಇದರ ತಯಾರಿಕೆಗೆ ಬೆಲ್ಲದ ಕೊಳೆ, ಕೆಲವು ಹಣ್ಣುಗಳು, ಸ್ಪಿರಿಟ್ ಕೂಡ ಬಳಕೆ ಮಾಡುತ್ತಾರೆ. ಹಾಗಾಗಿ ಕಳ್ಳಭಟ್ಟಿ ಸೇವಿಸುವವರಿಗೆ ಕಿಕ್ ಏರಲಿದೆ. ದುಬಾರಿ ಅಲ್ಲದ್ದರಿಂದ ಡಿಮಾಂಡ್ ಕೂಡ ಹೆಚ್ಚಿದೆ.
ಏನಂತಾರೆ ಅಬಕಾರಿ ಅಧಿಕಾರಿಗಳು?
"ಕಳ್ಳಭಟ್ಟಿ ಸೇವನೆ ಆರೋಗ್ಯದ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮ ಉಂಟು ಮಾಡಲಿದೆ. ಹಾಗಾಗಿ ಇದರ ಮಾರಾಟ ಮತ್ತು ತಯಾರಿಸುವುದು ಅಪರಾಧ. ಈ ಬಗ್ಗೆ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಯಾವುದೆ ಮಾಹಿತಿ ಸಿಕ್ಕರೂ ಜನರು ಅಬಕಾರಿ ಅಧಿಕಾರಿಗಳಿಗೆ ಒದಗಿಸಬೇಕು" ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ಮನವಿ ಮಾಡಿದ್ದಾರೆ.
ಕಳೆದ ವರ್ಷವೂ ಡಿಮಾಂಡ್ ಇತ್ತು
ಕಳೆದ ವರ್ಷ ಲಾಕ್ ಡೌನ್ ಸಂದರ್ಭ ಕಳ್ಳಭಟ್ಟಿಗೆ ಭಾರಿ ಡಿಮಾಂಡ್ ಉಂಟಾಗಿತ್ತು. ಆ ಸಂದರ್ಭದಲ್ಲೂ ಹಗಲು, ರಾತ್ರಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲೂ ಮತ್ತೆ ಕಳ್ಳಭಟ್ಟಿ ಅಬ್ಬರ ಶುರುವಾಗಿದೆ. ಇದಕ್ಕೆ ತಡೆಯೊಡ್ಡಲು ಅಬಕಾರಿ ಇಲಾಖೆಗೂ ಸವಾಲಾಗಿದೆ.
ಜೂನ್ 7ರ ತನಕ ಲಾಕ್ಡೌನ್
ಕೋವಿಡ್ ಹರಡುವಿಕೆ ನಿಯಂತ್ರಿಸಲು ಮೇ 31ರಿಂದ ಜೂನ್ 7ರ ತನಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಹಾಲು, ಔಷಧಿ ಖರೀದಿಗೆ ಮಾತ್ರ ಅವಕಾಶವಿದೆ. ಉಳಿದ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ.