ಶಿವಮೊಗ್ಗ; ತರಕಾರಿ, ದಿನಸಿ ತಲುಪದ ಹಳ್ಳಿಗಳಲ್ಲೂ ಸಿಕ್ತಿದೆ ಮದ್ಯ!
ಶಿವಮೊಗ್ಗ, ಜೂನ್ 06; ಲಾಕ್ಡೌನ್ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ, ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೊರೊನಾ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಆರಗ ಜ್ಞಾನೇಂದ್ರ, ಅಬಕಾರಿ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಿವಮೊಗ್ಗ; ಮದ್ಯದಂಗಡಿ ಬಂದ್, ಕಳ್ಳಭಟ್ಟಿಗೆ ಮತ್ತೆ ಬೇಡಿಕೆ!
"ತೀರ್ಥಹಳ್ಳಿಯ ಹಳ್ಳಿ ಹಳ್ಳಿಗೆ ದಿನಸಿ, ತರಕಾರಿ ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ ಮದ್ಯ ಮಾತ್ರ ಎಲ್ಲಡೆ ಅಕ್ರಮವಾಗಿ ಸಿಗುತ್ತಿದೆ. ಹೆಣ್ಣುಮಕ್ಕಳು ಹಗಲು ರಾತ್ರಿ ಕರೆ ಮಾಡಿ ನಮ್ಮನೆ ಮಾಂಗಲ್ಯ ಹೋಯ್ತು, ಗಂಡ ತೀರಿಕೊಂಡ ಅಂತಾ ಗೋಳಾಡುತ್ತಿದ್ದಾರೆ" ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ತೀರ್ಥಹಳ್ಳಿ: ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ ಕಾಂಗ್ರೆಸ್
"ದಾಳಿ ಮಾಡಿ ಲೀಟರ್ಗಟ್ಟಲೇ ಮದ್ಯ ವಶಕ್ಕೆ ಪಡೆಯುತ್ತಿರುವ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮದ್ಯದಂಗಡಿ ಮಾಲೀಕರ ವಿರುದ್ಧ ಕೇಸ್ ಹಾಕುತ್ತಿಲ್ಲ. ವಶಕ್ಕೆ ಪಡೆದ ಮದ್ಯದ ಬ್ಯಾಚ್ ಪರಿಶೀಲಿಸಿ ಮದ್ಯದಂಗಡಿ ವಿರುದ್ಧ ಕೇಸ್ ಹಾಕುತ್ತಿಲ್ಲ" ಎಂದು ಆರೋಪಿಸಿದರು.
ವೈರಲ್ ವಿಡಿಯೋ; ತೀರ್ಥಹಳ್ಳಿಯಲ್ಲಿ ದನಗಳ್ಳರು ಎಸ್ಕೇಪ್
"ಅಕ್ರಮ ಮದ್ಯ ಮಾರಾಟದಿಂದ ತೀರ್ಥಹಳ್ಳಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಅಕ್ರಮಕ್ಕೆ ತಡೆಯೊಡ್ಡಲು ಆಗದಿದ್ದರೆ ಗೌರವಯುತವಾಗಿ ವರ್ಗಾವಣೆ ಪಡೆದುಕೊಂಡು ಹೋಗಿ" ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
"ಮದ್ಯದಂಗಡಿಯವರ ಜೊತೆಗೆ ಅಬಕಾರಿ ಇಲಾಖೆ, ಪೊಲೀಸರು ಶಾಮೀಲಾಗಿದ್ದಾರೆ. ಹಾಗಾಗಿಯೇ ಮದ್ಯದಂಗಡಿಯವರ ವಿರುದ್ಧ ಕೇಸ್ ಹಾಕುತ್ತಿಲ್ಲ. ಲೀಟರ್ ಗಟ್ಟಲೆ ಮದ್ಯ ಹಳ್ಳಿ ಹಳ್ಳಿಗೆ ತಲುಪಲು ಮದ್ಯದಂಗಡಿಯವರೆ ಕಾರಣ" ಎಂದು ಆಪಾದಿಸಿದರು.
ಹಿರಿಯ ಅಧಿಕಾರಿಗಳಿಗೆ ಫೋನ್; ಸಭೆ ವೇಳೆಯಲ್ಲೇ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಅಬಕಾರಿ ಇಲಾಖೆ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ಗೆ ಕರೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಿಎಂ ಭೇಟಿ, ದೂರು; ಇದೆ ವೇಳೆ ಜೂನ್ 9ರಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗುವುದಾಗಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು. ಸಿಎಂ ಭೇಟಿ ವೇಳೆ ಅಕ್ರಮ ಮದ್ಯ ಮಾರಾಟ ದಂಧೆ ವಿರುದ್ಧ ದೂರು ನೀಡುವುದಾಗಿ ಎಚ್ಚರಿಸಿದರು.