ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿ ಚಿರತೆ ಸಾವು
ಶಿವಮೊಗ್ಗ, ಫೆಬ್ರವರಿ 07: ತಾಲೂಕಿನ ಕೊನಗನಹಳ್ಳಿಯ ಬಳಿ ಚಿರತೆಯ ಶವವೊಂದು ಕಂಡುಬಂದಿದ್ದು, ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಿಗ್ಗೆ ಮಂಜು ಹೆಚ್ಚಾಗಿದ್ದರಿಂದ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಹೋಗುವ ರೈಲಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಕೊನಗನಹಳ್ಳಿ ರೈಲ್ವೆ ಹಳಿ ಪಕ್ಕ ಚಿರತೆಯ ಶವ ಕಂಡುಬಂದಿದೆ. ಇಲ್ಲಿನ ರೈತರ ಪ್ರಕಾರ, ನಿನ್ನೆ ಮಂಜು ಹೆಚ್ಚಾದ ಕಾರಣ ರೈಲು ಬಹಳ ಹೊತ್ತು ಹಾರ್ನ್ ಹೊಡೆದುಕೊಂಡು ಚಲಿಸುತ್ತಿತ್ತು. ಚಿರತೆ ರೈಲಿಗೆ ಸಿಲುಕುವ ಮುನ್ಸೂಚನೆ ದೊರೆತು ಹೀಗೆ ಶಬ್ದ ಮಾಡಿರಬಹುದು ಎಂದು ಈ ಭಾಗದ ಜನ ತಿಳಿಸಿದ್ದಾರೆ.
ಕುಮಟಾ; ಬೆಳ್ಳಂಬೆಳಿಗ್ಗೆ ಬಾವಿಯಲ್ಲಿ ಬಗ್ಗಿ ನೋಡಿದವರಿಗೆ ಕಾದಿತ್ತು ಆಶ್ಚರ್ಯ
ಶಂಕರ ವಲಯದ ಆರ್ ಎಫ್ ಒ ಜಯೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ. ಇದು ಚಿರತೆ ಓಡಾಡುವ ಸ್ಥಳವಲ್ಲ, ಆಹಾರ ಹುಡುಕಿಕೊಂಡು ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ತಲೆಗೆ ಹೊಡೆತ ಬಿದ್ದಿದೆ. ಹಲ್ಲು ಮತ್ತು ಉಗುರನ್ನು ತೆಗೆಯದೆ ಇರುವುದರಿಂದ ಕೊಲೆ ಮಾಡಿರುವ ಶಂಕೆ ಕಂಡುಬರುತ್ತಿಲ್ಲ ಎಂದು ಜಯೇಶ್ ತಿಳಿಸಿದ್ದಾರೆ.