ತೀರ್ಥಹಳ್ಳಿಯಲ್ಲೀಗ ಚಿರತೆ ದಾಳಿಯದೇ ಸುದ್ದಿ
ತೀರ್ಥಹಳ್ಳಿ, ಜೂನ್ 7: ಇದು ತೀರ್ಥಹಳ್ಳಿ ತಾಲೂಕಿನಲ್ಲಿ ಆತಂಕಕ್ಕೆ ಹಾಗೂ ಚರ್ಚೆಗೆ ಕಾರಣವಾಗಿರುವ ಸುದ್ದಿ. ತಾಲೂಕಿನ ದತ್ತರಾಜಪುರ ಹತ್ತಿರದ ಹುಲ್ಲತ್ತಿಯಲ್ಲಿ ಬೈಕ್ ಸವಾರರ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.
ಈ ವೇಳೆ ಪೊರಲುಕೊಪ್ಪ ಮಂಜುನಾಥ ಎಂಬುವವರಿಗೆ ಗಾಯಗಳಾಗಿದ್ದು, ಕೋಣಂದೂರು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗ ಹದಿನೈದು ವರ್ಷದ ಚೇತನ್ ಈ ಘಟನೆಯಿಂದ ಗಾಬರಿಯಾಗಿದ್ದಾನೆ.
ರಾತ್ರಿ ಬೈಕ್ ನಲ್ಲಿ ಹೋಗುವಾಗ ಇವರಿಬ್ಬರ ಮೇಲೆ ಚಿರತೆ ಎರಗಿದೆ. ಆಗ ಬೈಕ್ ಏನಾದರೂ ಕೆಳಗೆ ಬಿದ್ದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇರುತ್ತಿತ್ತು. ಹಾಗೆ ಬೀಳದ ಕಾರಣಕ್ಕೆ ಬಚಾವಾಗಿ ಬಂದಿದ್ದಾರೆ. ಆ ನಂತರ ಚಿರತೆಯು ಸಮೀಪದಲ್ಲೇ ಒಂದು ದನ ಹಾಗೂ ನಾಯಿಯನ್ನು ಕೊಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.[ಸ್ವಂತ ಮಗನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಶಿವಮೊಗ್ಗದ ತಾಯಿ!]
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಅಗ್ರಹಾರ, ಕನ್ನಂಗಿ, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಮನೆ, ಬಂಡಿಕೊಪ್ಪ, ಲಿಂಗನಕೊಪ್ಪ ಮತ್ತಿತರ ಕಡೆ ಚಿರತೆ ಹಾವಳಿ ಹೆಚ್ಚಾಗಿದೆ. ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರು ಭಯದಲ್ಲೇ ಸಂಚರಿಸುವ ಸನ್ನಿವೇಶ ಎದುರಾಗಿದೆ.