ಎಚ್ಡಿಕೆ ಜೊತೆ 'ಗಳಸ್ಯ ಕಂಠಸ್ಯ'ದಂತಿದ್ದ ಮಧು ಬಂಗಾರಪ್ಪ ಜೆಡಿಎಸ್ ಗೆ ವಿದಾಯ? ಕಾರಣವಾದ ಅಂಶ
Recommended Video
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯದಂತಿದ್ದ ಮಧು ಬಂಗಾರಪ್ಪ ಜೆಡಿಎಸ್ ಪಕ್ಷವನ್ನು ಬಿಟ್ಟು, ರಾಷ್ಟ್ರೀಯ ಪಕ್ಷವೊಂದನ್ನು ಸೇರುವುದು ಬಹುತೇಕ ಅಂತಿಮವಾಗಿದ್ದು, ಮಹೂರ್ತ ಮಾತ್ರ ಫಿಕ್ಸ್ ಆಗಬೇಕಿದೆ.
ಶಿವಮೊಗ್ಗ ರಾಜಕಾರಣದಲ್ಲಿ ಆಧಿಪತ್ಯ ಸ್ಥಾಪಿಸಿದ್ದ ಮಾಜಿ ಸಿಎಂ ಸಾರೇಕೊಪ್ಪ ಬಂಗಾರಪ್ಪನವರ ಇಬ್ಬರು ಮಕ್ಕಳು, ಒಬ್ಬೊಬ್ಬರದ್ದು ಒಂದೊಂದು ಕಡೆ ಮುಖ. ಹಿರಿಯ ಮಗ ಕುಮಾರ್ ಬಂಗಾರಪ್ಪ ಬಿಜೆಪಿಯ ಶಾಸಕನಾಗಿದ್ದರೆ, ಮಧು ಬಂಗಾರಪ್ಪ ಜೆಡಿಎಸ್ ನಲ್ಲಿ ಗುರುತಿಸಿಕೊಂಡವರು.
ಕಾಂಗ್ರೆಸ್ಸಿನ ಬಣ ರಾಜಕೀಯ, ಬಿಜೆಪಿಯ ಸಂಪುಟ ವಿಸ್ತರಣೆ ಕಿರಿಕಿರಿ: ಲಾಭ ಕುಮಾರಣ್ಣನಿಗೆ?
ಹಲವು ವರ್ಷಗಳಿಂದ ಕುಮಾರಸ್ವಾಮಿಗೆ ಅತ್ಯಂತ ಅಪ್ತರಾಗಿದ್ದ ಮಧು ಬಂಗಾರಪ್ಪ ಮತ್ತು ಗೌಡ್ರ ಕುಟುಂಬದ ನಡುವೆ ಲೋಕಸಭಾ ಉಪಚುನಾವಣೆಯ ಫಲಿತಾಂಶದ ನಂತರ ಸಂಬಂಧ ಹಳಸಲು ಆರಂಭವಾಗಿದ್ದು ಎಂದು ಹೇಳಲಾಗುತ್ತಿದೆ.
ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟರೆ ಅಭ್ಯಂತರವಿಲ್ಲ ಎಂದ ಎಚ್ಡಿಕೆ
ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ಸಿನ ಜಂಟಿ ಅಭ್ಯರ್ಥಿಯಾಗಿದ್ದರು. ಆ ವೇಳೆ ಎಲ್ಲೋ ವಿದೇಶ ಪ್ರವಾಸದಲ್ಲಿದ್ದ ಮಧು ಬಂಗಾರಪ್ಪ ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿದು, ಬಿಜೆಪಿಯ, ಬಿ.ವೈ. ರಾಘವೇಂದ್ರ ವಿರುದ್ದ ಸೋಲುಂಡಿದ್ದರು.
ಮಧು ಬಂಗಾರಪ್ಪ ಅವರಿಗೆ ವಿಧಾನಪರಿಷತ್ ಸದಸ್ಯತ್ವ
ಉಪಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ ಅವರನ್ನು ವಿಧಾನಪರಿಷತ್ ಸದಸ್ಯತ್ವ ಕೊಡಿಸುವ ಮೂಲಕ ಸಂಪುಟಕ್ಕೆ ಅಥವಾ ನಿಗಮ ಮಂಡಳಿ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ಚರ್ಚೆಗಳಾಗುತ್ತಿಲ್ಲ ಎಂದು ಮಧು ಬೇಸರಗೊಂಡಿದ್ದರು. ಈ ಕಾರಣದಿಂದಾಗಿ ಪಕ್ಷದ ಸಭೆ ಹಾಗೂ ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸದೆ ಮಧು ದೂರವೇ ಉಳಿದಿದ್ದರು.
ಜಂಟಿ ಅಭ್ಯರ್ಥಿಯಾಗಿ ಮಧು
ಇದಾದ ನಂತರ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಂಟಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನನ್ನು ಮತ್ತೆ ಜೆಡಿಎಸ್ ಕಣಕ್ಕಿಳಿಸಿತು. ಮತ್ತೆ ಬಿಜೆಪಿಯಿಂದ ರಾಘವೇಂದ್ರ ಸ್ಪರ್ಧಿಯಾಗಿದ್ದರು. ಮಧು ಬಂಗಾರಪ್ಪ ಮತ್ತೆ ಸುಮಾರು 2.2 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು. ಒಂದು ವರ್ಷದಲ್ಲಿ ಮಧು ಬಂಗಾರಪ್ಪ ಸೋತ ಮೂರನೇ ಚುನಾವಣೆ ಇದಾಗಿತ್ತು. ಗೌಡ್ರ ಕುಟುಂಬ ಮತ್ತು ಕಾಂಗ್ರೆಸ್ಸಿನ ಹಿರಿಯ ಮುಖಂಡರು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೂ ಮಧುಗೆ ಸೋಲಾಗಿತ್ತು. ಇದರಿಂದ, ಮಧು ಇನ್ನಷ್ಟು ಕುಗ್ಗಿಹೋಗಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ
ಕಳೆದ ಜೂನ್ ತಿಂಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎಚ್. ವಿಶ್ವನಾಥ್ ರಾಜೀನಾಮೆ ನೀಡಿದ ನಂತರ, ಆ ಹುದ್ದೆಗೆ ಮಧು ಬಂಗಾರಪ್ಪ ಅವರ ಹೆಸರು ಕೇಳಿಬರಲಾರಂಭಿಸಿತು. ಖುದ್ದು ವಿಶ್ವನಾಥ್ ಅವರೇ, ತಮ್ಮ ಉತ್ತರಾಧಿಕಾರಿಯ ಸ್ಥಾನಕ್ಕೆ ಮಧು ಬಂಗಾರಪ್ಪ ಹೆಸರನ್ನು ಸೂಚಿಸಿದ್ದರು. ಈಡಿಗ ಸಮುದಾಯದವರಾದ ಮಧು ಅವರು ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರವಿತ್ತು.
ದೇವೇಗೌಡ್ರೂ, ರಾಜ್ಯಾಧ್ಯಕ್ಷ ಹುದ್ದೆಗೆ ಮಧು ಪರ ಒಲವು ತೋರಿದ್ದರು
ಒಂದು ಹಂತದಲ್ಲಿ ದೇವೇಗೌಡ್ರೂ, ರಾಜ್ಯಾಧ್ಯಕ್ಷ ಹುದ್ದೆಗೆ ಮಧು ಪರ ಒಲವು ತೋರಿದ್ದರು. ಆದರೆ, ಯುವ ಘಟಕದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದ ಮಧು ಬಂಗಾರಪ್ಪನವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯೂ ಲಭಿಸಲಿಲ್ಲ. ಎಚ್.ಕೆ ಕುಮಾರಸ್ವಾಮಿಯವರು ಆ ಹುದ್ದೆಗೆ ಏರಿದರು. ಅಲ್ಲಿಂದ, ಮಧು ಬಂಗಾರಪ್ಪ, ಜೆಡಿಎಸ್ ಮತ್ತು ಕುಮಾರಸ್ವಾಮಿಯವರಿಂದ ಅಂತರ ಕಾಯ್ಡುಕೊಂಡರು.
ಹೋಗುವವರು ಹೋಗಲಿ, ಎಚ್.ಡಿ.ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ
ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಬಹುತೇಕ ಅಂತಿಮವಾಗಿದೆ ಮತ್ತು ಡಿ.ಕೆ. ಶಿವಕುಮಾರ್ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. "ಈಗಾಗಲೇ ಹಲವಾರು ಬಾರಿ ಕರೆದು ಮಾತನಾಡಿದ್ದೇನೆ. ಇನ್ನೂ ಎಷ್ಟು ಬಾರಿ ಕರೆದು ಮಾತನಾಡಲಿ? ದೊಡ್ಡ ಪಕ್ಷಕ್ಕೆ ಸೇರಿ ಏನೋ ಸಾಧನೆ ಮಾಡುತ್ತೇನೆಂಬ ಭ್ರಮೆ ಅವರಲ್ಲಿದೆ. ನಮ್ಮ ಪಕ್ಷ ಅವರನ್ನು ಚೆನ್ನಾಗಿ ನೋಡಿಕೊಂಡಿತ್ತು. ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ" ಇದು ಮಧು ಬಂಗಾರಪ್ಪ ಜೆಡಿಎಸ್ ಬಿಡುವ ಬಗ್ಗೆ ಕೇಳಿಬಂದ ಪ್ರಶ್ನೆಗೆ ಎಚ್.ಡಿ.ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ.