ಜಾತಕದಲ್ಲಿ ಕುಜ ದೋಷ, ಮದುವೆಗೆ ವಿರೋಧ; ವಿಷ ಸೇವಿಸಿದ್ದ ಮಹಿಳಾ ಪೊಲೀಸ್ ಸಾವು
ಶಿವಮೊಗ್ಗ, ಜೂ. 18: ಮದುವೆಗೆ ಕುಟುಂಬದವರು ವಿರೋಧ ಮಾಡುತ್ತಿರುವುದಕ್ಕೆ ಪ್ರಿಯಕರನೊಂದಿಗೆ ಭದ್ರಾವತಿಯಲ್ಲಿ ವಿಷ ಸೇವಿಸಿದ್ದ ಯುವತಿ ಮೃತಪಟ್ಟಿದ್ದಾಳೆ. ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ. ಈಕೆಯ ಸಾವಿಗೆ ಕುಜ ದೋಷ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭದ್ರಾವತಿ ತಾಲೂಕು ಕಲ್ಲಹಳ್ಳಿಯ ಸುಧಾ (29) ಮೃತರು. ಈಕೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆರು ವರ್ಷದ ಪರಿಚಯ, ಪ್ರೀತಿ ಸುಧಾ ಅವರು ಪ್ರವೀಣ್ ಸದಾಶಿವ ಮೊಕಾಶಿ ಎಂಬಾತನನ್ನು ಪ್ರೀತಿಸುತ್ತಿದ್ದರು. ಆರು ವರ್ಷದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು. ಆರಂಭದಲ್ಲಿ ಎರಡು ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಅಡ್ಡಿಯಾಯ್ತು ಕುಜ ದೋಷ
ಪ್ರವೀಣ್ ಅವರ ಮನೆಯವರು ಸುಧಾಳ ಜಾತಕವನ್ನು ಜ್ಯೋತಿಷ್ಯರಲ್ಲಿ ತೋರಿಸಿದ್ದರು. ಜಾತಕದಲ್ಲಿ ಕುಜ ದೋಷವಿದೆ. ಮದುವೆಯಾದರೆ ನಿಮ್ಮ ಮಗ ಸಾಯುತ್ತಾನೆ ಎಂದು ಜ್ಯೋತಿಷಿ ತಿಳಿಸಿದ್ದಾರೆ. ಹಾಗಾಗಿ ಪ್ರವೀಣನ ತಾಯಿ ಲಕ್ಷ್ಮಿ, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರವೀಣ್ ಮತ್ತು ಸುಧಾ ಮಧ್ಯೆ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರವೀಣ್ ಸದಾಶಿವ ಮೊಕಾಶಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಉಬ್ರಾಣಿಯಲ್ಲಿ ಆತನ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸುಧಾ ಪ್ರವೀಣನನ್ನು ಭೇಟಿಯಾಗಿದ್ದಳು. ಈ ವೇಳೆ ನಿನಗೆ ಸಾವು ಎಂದರೆ ಏನೆಂದು ತೋರಿಸುತ್ತೇನೆ ಎಂದು ತಿಳಿಸಿದ ಪ್ರವೀಣ್, ಸುಧಾಳನ್ನು ಬೈಕಿನಲ್ಲಿ ಕೂರಿಸಿಕೊಂಡು ವೇಗವಾಗಿ ಚಲಾಯಿಸಿದ್ದಾನೆ. ಅಲ್ಲದೆ ಭದ್ರಾವತಿ ಆರ್.ಎಂ.ಸಿ ಯಾರ್ಡ್ ಬಳಿ ಬೈಕ್ ನಿಲ್ಲಿಸಿ ವಿಷದ ಬಾಟಲಿ ಕೈಗಿಟ್ಟಿದ್ದಾನೆ.
'ಆತ ವಿಷ ಕುಡಿದನೋ ಇಲ್ಲವೋ ಗೊತ್ತಿಲ್ಲ'
ಸುಧಾಳ ಕೈಗೆ ವಿಷದ ಬಾಟಲಿ ಕೊಟ್ಟು ಕುಡಿಯುವಂತೆ ಪ್ರವೀಣ್ ತಿಳಿಸಿದ್ದಾನೆ. ಮೊದಲು ವಿಷ ಸೇವಿಸಿದ ಸುಧಾ, ನಂತರ ಆತನಿಗೆ ನೀಡಿದ್ದಾಳೆ. ಆದರೆ ಆತ ವಿಷ ಸೇವಿಸಿದ್ದನೋ ಇಲ್ಲವೋ ಗೊತ್ತಿಲ್ಲ ಎಂದು ದೂರಿನಲ್ಲಿ ಸುಧಾ ತಿಳಿಸಿದ್ದಾಳೆ. ವಿಚಾರ ತಿಳಿಯುತ್ತಿದ್ದ ಹಾಗೆ ಇಬ್ಬರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸುಧಾಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸುಧಾ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಭದ್ರಾವತಿಯ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರವೀಣ್ ಮತ್ತು ಆತನ ತಾಯಿ ಲಕ್ಷ್ಮೀ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
(ಒನ್ಇಂಡಿಯಾ ಸುದ್ದಿ)
ನಿಮ್ಹಾನ್ಸ್,
ರೋಟರಿ
ಸಂಸ್ಥೆ
ಹಾಗೂ
ಮೆಡಿಕೊ
ಪ್ಯಾಸ್ಟೊರಾಲ್
ಅಸೋಸಿಯೇಷನ್
ನೆರವಿನಿಂದ
ಬೆಂಗಳೂರಿನಲ್ಲಿ
ಆತ್ಮಹತ್ಯೆ
ತಡೆಗಟ್ಟಲು,
ಮಾನಸಿಕ
ಖಿನ್ನತೆಯಿಂದ
ಬಳಲುವವರಿಗಾಗಿ
SAHAI
ಸಹಾಯವಾಣಿ
ಇಂತಿದೆ:
080
-
25497777