ಶಿವಮೊಗ್ಗದಲ್ಲಿ ಪ್ರಯಾಣಿಕರಿಗೆ ಸರ್ಕಾರಿ ಬಸ್ ಮುಷ್ಕರದ ಬಿಸಿ
ಶಿವಮೊಗ್ಗ, ಏಪ್ರಿಲ್ 06: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಪ್ರಯಾಣಿಕರಿಗೆ ಮಂಗಳವಾರವೇ ಮುಷ್ಕರದ ಬಿಸಿ ತಟ್ಟಿದೆ.
ಸಾರಿಗೆ ನೌಕರರ ಮುಷ್ಕರದ ಮುನ್ನದಿನವೇ ಶಿವಮೊಗ್ಗದಲ್ಲಿ ಶೇ.50ರಷ್ಟು ಬಸ್ ಸಂಚಾರ ಕಡಿತವಾಗಿದೆ. ಶಿವಮೊಗ್ಗ ವಿಭಾಗದ ನಾಲ್ಕು ಘಟಕಗಳಿಂದ 205 ಬಸ್ಸುಗಳ ಪೈಕಿ ಈತನಕ 107 ಬಸ್ಸುಗಳಷ್ಟೇ ಹೊರ ಊರುಗಳಿಗೆ ಸಂಚರಿಸಿವೆ ಎಂದು ತಿಳಿದು ಬಂದಿದೆ. ವಿವಿಧೆಡೆಯಿಂದ ಜಿಲ್ಲೆಗೆ ಬರುವ ಬಸ್ಸುಗಳ ಸಂಖ್ಯೆಯೂ ತಗ್ಗಿದೆ.
ಕೊರೊನಾ 2ನೇ ಅಲೆಗೆ ಶಿವಮೊಗ್ಗದಲ್ಲಿ ಮೊದಲ ಬಲಿ; ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ
ಶಿವಮೊಗ್ಗ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಮತ್ತು ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ ನಿಲ್ದಾಣಗಳಿಗೆ ಆಗಮಿಸಿದ ಪ್ರಯಾಣಿಕರು ಬಸ್ಸುಗಳಿಲ್ಲದೇ ಕಾದು ನಿಲ್ಲುವಂತಾ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಜಿಲ್ಲೆಯೊಳಗೆ ತಟ್ಟುವುದಿಲ್ಲ ಬಿಸಿ:
ಕೆಎಸ್ಆರ್ ಟಿಸಿ ನೌಕರರು ಮುಷ್ಕರ ನಡೆಸಿದರೂ ಜಿಲ್ಲೆಯೊಳಗೆ ಪ್ರಯಾಣಿಕರಿಗೆ ಅದರ ಬಿಸಿ ತಟ್ಟುವುದಿಲ್ಲ. ಜಿಲ್ಲೆಯ ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಈ ಹಿನ್ನೆಲೆ ಬಹುತೇಕ ಪ್ರಯಾಣಿಕರು ಖಾಸಗಿ ಬಸ್ಸುಗಳ ಮೇಲೆ ಅವಲಂಬಿಸಿದ್ದಾರೆ. ಶಿವಮೊಗ್ಗ-ಭದ್ರಾವತಿ, ಶಿವಮೊಗ್ಗ-ಹೊನ್ನಾಳಿ ಮಾರ್ಗಗಳಲ್ಲಿ ಮಾತ್ರ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಯೋಜಿಸಿದೆ.
ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ:
ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಅನನುಕೂಲವಾಗದಂತೆ ತಡೆಯಲು ಖಾಸಗಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಚಿಂತಿಸಿದೆ. ಈ ಹಿನ್ನೆಲೆ ಕೆಎಸ್ಆರ್ಟಿಸಿಯಿಂದ ಜಿಲ್ಲಾಡಳಿತ ವರದಿ ಪಡೆದುಕೊಂಡಿದೆ. ಶಿವಮೊಗ್ಗ ವಿಭಾಗದಿಂದ ಎಷ್ಟು ಬಸ್ಸುಗಳು ಸಂಚಾರ ಮಾಡುತ್ತವೆ. ಯಾವೆಲ್ಲ ಮಾರ್ಗಗಳಲ್ಲಿ ಸರ್ಕಾರಿ ಬಸ್ಸುಗಳು ಸಂಚರಿಸುತ್ತಿವೆ ಅನ್ನುವದರ ಮಾಹಿತಿ ಪಡೆಯಲಾಗಿದೆ. ಬುಧವಾರ ಬೆಳಗ್ಗೆಯಿಂದ ಅನಿವಾರ್ಯತೆ ಉಂಟಾದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.