ಶಿವಮೊಗ್ಗ ವಿಮಾನ ನಿಲ್ದಾಣ ವೀಕ್ಷಣೆ ಮಾಡಿದ ಕೆಎಸ್ಐಐಡಿಸಿ ಅಧ್ಯಕ್ಷರು
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಕೆಎಸ್ಐಐಡಿಸಿ ನಿಗಮದ ಅಧ್ಯಕ್ಷರಾದ ಡಾ. ಕೆ. ಶೈಲೇಂದ್ರ ಬೆಲ್ದಾಳೆ ಬುಧವಾರ ವಿಮಾನ ನಿಲ್ದಾಣ ವೀಕ್ಷಣೆ ಮಾಡಿದರು.
ಶಿವಮೊಗ್ಗ, ಫೆಬ್ರವರಿ 01; ಶಿವಮೊಗ್ಗ ನಗರದ ಹೊರವಲಯದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್ಐಐಡಿಸಿ) ಅಧ್ಯಕ್ಷರಾದ ಡಾ. ಕೆ. ಶೈಲೇಂದ್ರ ಬೆಲ್ದಾಳೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದರು. ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವುದರಿಂದ ಸೋಗಾನೆಯ ವಿಮಾನ ನಿಲ್ದಾಣದ ಕಾಮಗಾರಿಗಳ ಪರಿಶೀಲನೆ ನಡೆಸಿದರು.
Shimoga airport; ಸಿವಿಲ್ ಏವಿಯೇಷನ್ ಕಾರ್ಯದರ್ಶಿಗಳ ಭೇಟಿ
ವಿಮಾನ ನಿಲ್ದಾಣದ 3050 ಮೀಟರ್ ಉದ್ದ, 45 ಮೀ ಅಗಲದ ರನ್ವೇ, ಆರ್ಇಎಸ್ಎ, ಬಾಹ್ಯ (ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಪ್ರದೇಶ, ಇತರೆ ಕಾಮಗಾರಿಗಳನ್ನು ವೀಕ್ಷಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜನರ ಪ್ರವೇಶ ನಿರ್ಬಂಧ
4340 ಚದುರ ಮೀಟರ್ ಅಳತೆಯಲ್ಲಿನ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 2 ಎಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈರ್ ಸ್ಟೇಷನ್ ಹಾಗೂ ಇತರೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದರು.
ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ದಿನಾಂಕ ಮುಂದೂಡಿಕೆ, ಇಲ್ಲಿದೆ ವಿವರ
ಅಧಿಕಾರಿಗಳಿಗೆ ಸೂಚನೆ; ಪ್ರಧಾನಮಂತ್ರಿಗಳು ವಿಮಾನ ನಿಲ್ದಾಣ ಉದ್ಘಾಟನೆಗೆ ದಿನಾಂಕ ನಿಗದಿಯಾಗಿರುವ ಕಾರಣದಿಂದ ವಿಮಾನ ಹಾರಾಟದ ಅನುಮತಿಗೆ ಬೇಕಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಡಾ. ಕೆ. ಶೈಲೇಂದ್ರ ಬೆಲ್ದಾಳೆ ಸೂಚಿಸಿದರು.
ಅತ್ಯಂತ ಶೀಘ್ರ ಗತಿಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಶ್ರಮಿಸಿದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಹಾಗೂ ಸಂಸದರಾದ ಬಿ. ವೈ. ರಾಘವೇಂದ್ರರಿಗೆ ಡಾ. ಕೆ. ಶೈಲೇಂದ್ರ ಬೆಲ್ದಾಳೆ ಅಭಿನಂದನೆಗಳನ್ನು ತಿಳಿಸಿದರು.
ಡಾ. ಕೆ. ಶೈಲೇಂದ್ರ ಬೆಲ್ದಾಳೆ ಅವರ ಜೊತೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಕೆಎಸ್ಐಐಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ. ಆರ್. ರವಿ, ನಿಗಮದ ನಿರ್ದೇಶಕರಾದ ಸಿ. ಎನ್. ಗಾಯತ್ರಿ ದೇವಿ, ಭಾರತಿ ಮಲ್ಲಿಕಾರ್ಜುನಪ್ಪ ಅಲವಂಡಿ, ಎಸ್. ಮಹಾದೇವಿಸ್ವಾಮಿ ಉಪಸ್ಥಿತರಿದ್ದರು.
ಡಿಜಿಸಿಎ ಅಧಿಕಾರಿಗಳ ಪರಿಶೀಲನೆ; ನಾಗರೀಕ ವಿಮಾನಯಾನ ಮಂತ್ರಾಲಯದ ಕಾರ್ಯದರ್ಶಿಗಳಾದ ರಾಜೀವ್ ಬನ್ಸಾಲ್ ಕಳೆದ ವಾರ ಸೋಗಾನೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಪರಿಶೀಲಿಸಿದ್ದರು.
ವಿಮಾನ ನಿಲ್ದಾಣದ ಕಾಮಗಾರಿಗಳು, ನಿಲ್ದಾಣದ ಅಂತಿಮ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದ್ದರು. ಡಿಜಿಸಿಎಯ ಮತ್ತೊಂದು ತಂಡ ಇನ್ನೊಮ್ಮೆ ವಿಮಾನ ನಿಲ್ದಾಣದ ಪರಿಶೀಲನೆ ನಡೆಸಿ, ಪ್ರಾಯೋಗಿಕ ಸಂಚಾರವನ್ನು ಸಹ ವೀಕ್ಷಣೆ ಮಾಡಲಿದೆ.
ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಕೆ. ಸಿ. ನಾರಾಯಣ ಗೌಡ ಅವರು ಕಳೆದ ವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದರು.
ಸಚಿವರು ಮೊದಲು ಪ್ಯಾಸೆಂಜರ್ ಟರ್ಮಿನಲ್ ಕಟ್ಟಡಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ವೀಕ್ಷಿಸಿದ್ದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಕಟ್ಟಡಕ್ಕೆ ಭೇಟಿ ನೀಡಿದ್ದರು. ಅಂತಿಮವಾಗಿ ರನ್ ವೇ ಯನ್ನು ವೀಕ್ಷಿಸಿದ್ದರು.
ಜನರ ಭೇಟಿಗೆ ನಿರ್ಬಂಧ; ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸುರಕ್ಷತಾ ಕಾರಣಗಳ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಕೇಂದ್ರದಿಂದ ಡಿಜಿಸಿಎ ತಂಡ ಪರಿಶೀಲನೆಗೆ ಆಗಮಿಸಲಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿರುವ ಸೂಕ್ಷ್ಮ ಉಪಕರಣಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮತ್ತು ಕಾಮಗಾರಿಗಳಿಗೆ ತೊಡಕಾಗದಂತೆ ಜನರ ಭೇಟಿ ನಿರ್ಬಂಧಿಸಲಾಗಿದೆ.
ಸಾರ್ವಜನಿಕರ ಪ್ರವೇಶವನ್ನು ಉದ್ಘಾಟನೆ ಆಗುವವರೆಗೆ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ವಿಮಾನ ನಿಲ್ದಾಣ ವೀಕ್ಷಣೆಗೆ ನೂರಾರು ಜನರು ಆಗಮಿಸಿ, ರನ್ವೇಯಲ್ಲಿ ವಾಹನ ಚಲಾಯಿಸುತ್ತಿರುವ ಬಗ್ಗೆಯೂ ದೂರುಗಳು ಬಂದಿತ್ತು.