ಲಾಕ್ಡೌನ್ ಅಗತ್ಯವಿಲ್ಲ ಆದರೆ?: ಸಚಿವ ಈಶ್ವರಪ್ಪ ಮಾತು
ಶಿವಮೊಗ್ಗ, ಜುಲೈ 3: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಲಾಕ್ಡೌನ್ ಬಗ್ಗೆ ಹೇಳಿಕೆ ನೀಡಿರುವ ಅವರು, ಮತ್ತೊಂದು ಲಾಕ್ ಡೌನ್ ಅಗತ್ಯವಿಲ್ಲ. ಆದರೆ ಸ್ವೇಚ್ಛಾಚಾರದ ಸಂಚಾರಕ್ಕೆ ಅವಕಾಶ ಇಲ್ಲ ಎಂದಿದ್ದಾರೆ. ಜಿಲ್ಲೆಯಲ್ಲಿ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಕೊರೊನಾ ಪ್ರಕರಣಗಳು ಸಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ.
ಶಿವಮೊಗ್ಗ: ಕರ್ತವ್ಯದ ವೇಳೆ ಏಕಾಏಕಿ ಕುಸಿದು ಬಿದ್ದ ಆಶಾ ಕಾರ್ಯಕರ್ತೆ
ಕೊರೊನಾ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 150 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಗಾಜನೂರು ಮೊರಾರ್ಜಿ ಶಾಲೆಯಲ್ಲಿ 190 ಹಾಸಿಗೆ ವ್ಯವಸ್ಥೆ, ಭದ್ರಾವತಿಯಲ್ಲಿ 50 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಓಡಾಡುವ ಶೇ.95 ರಷ್ಟು ಜನರು ಮಾಸ್ಕ್ ಧರಿಸುತ್ತಿದ್ದಾರೆ. ಆದರೆ, ಗುಂಪು ಸೇರುವುದು, ಸಾಮಾಜಿಕ ಅಂತರ ಪಾಲಿಸದೇ ಇರುವದು ಕಂಡು ಬರುತ್ತಿದೆ. ಹೀಗೆ ಮಾಡಿದರೆ, ಕೊರೊನಾ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಗೆ 60 ಸಂಸ್ಥೆಗಳ ಪ್ರತಿನಿಧಿಗಳು ಬರಲಿದ್ದು, ಕೊರೊನಾ ಬಗ್ಗೆ ವಿವಿಧ ಸಂಘ ಸಂಸ್ಥೆಗಳ ಸಭೆ ನಡೆಸಿ ಇನ್ನಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ ಈಶ್ವರಪ್ಪ.