ಸಚಿವ ಕೆ.ಎಸ್.ಈಶ್ವರಪ್ಪ ಮನೆ ಕೆಲಸದವರಿಗೆ ಕೊರೊನಾ ಸೋಂಕು
ಶಿವಮೊಗ್ಗ, ಜುಲೈ 14: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರ ಶಿವಮೊಗ್ಗದ ಮನೆಯ ಕೆಲಸದವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಸ ಗುಡಿಸುವ, ಪೇಪರ್ ತಂದು ಕೊಡುವ ಕೆಲಸದವನಿಗೆ ನಿನ್ನೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ವಿಷಯ ಜನರಲ್ಲಿ ಆತಂಕ ಮೂಡಿಸಿದೆ. ಈತ ಗುಂಡಪ್ಪಶೇಡ್ ನಿವಾಸಿಯಾಗಿದ್ದು, ಸೋಂಕು ಹೇಗೆ ತಗುಲಿದೆ ಎಂಬುದು ತಿಳಿದುಬಂದಿಲ್ಲ. ಸೋಂಕಿತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ.
ಗಾಂಧಿ ಬಜಾರ್ ವ್ಯಾಪಾರಿಗಳಿಂದ ಸ್ವಯಂ ಲಾಕ್ ಡೌನ್
ಈತ ಕಳೆದ ನಾಲ್ಕೈದು ದಿನಗಳಿಂದ ಮನೆ ಕೆಲಸಕ್ಕೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲಿ ನಿನ್ನೆ 21 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 29 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆಯಾಗಿದ್ದು, 331 ಸಕ್ರಿಯ ಪ್ರಕರಣಗಳಿವೆ. 227 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಈವರೆಗೂ ಜಿಲ್ಲೆಯಲ್ಲಿ 10 ಜನ ಮೃತಪಟ್ಟಿದ್ದಾರೆ.