ಈಶ್ವರಪ್ಪ ರಾಜೀನಾಮೆ; ಶಿವಮೊಗ್ಗದ ತ್ರಿಮೂರ್ತಿಗಳ ಸಕ್ರಿಯ ರಾಜಕಾರಣದ ಯುಗಾಂತ್ಯವೇ?
ಶಿವಮೊಗ್ಗ, ಏಪ್ರಿಲ್ 15: ಗ್ರಾಮೀಣಾಭಿವೃದ್ಧಿ ಮತ್ತ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯ ತ್ರಿಮೂರ್ತಿಗಳ ಸಕ್ರಿಯ ರಾಜಕಾರಣದ ಯುಗಾಂತ್ಯವಾಗುತ್ತಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಮತ್ತು ಡಿ.ಎಚ್. ಶಂಕರಮೂರ್ತಿ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ತ್ರಿಮೂರ್ತಿಗಳು. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಿದ ಶಿವಮೊಗ್ಗ ಜಿಲ್ಲೆಯ ಈ ಮೂವರು ನಾಯಕರು ಈಗ ಮಾರ್ಗದರ್ಶಿ ಮಂಡಳಿ ಸೇರುವಂತಾಗಿದೆ. ಮಲೆನಾಡು ಭಾಗದ ರಾಜಕಾರಣದ ಮತ್ತೊಂದು ಅಧ್ಯಾಯ ಮುಗಿದಂತಾಯಿತಾ ಎಂದು ಬಿಜೆಪಿ ಕಾರ್ಯಕರ್ತರು ಯೋಚಿಸುವಂತಾಗಿದೆ.
ಬಿಜೆಪಿ ಕಾರ್ಯಕಾರಿಣಿ ಸಭೆ ಹಿಂದಿನ ರಾತ್ರಿಯೇ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ; ಏಕೆ?
75 ವರ್ಷ ಮೇಲ್ಪಟ್ಟವರಿಗಿಲ್ಲ ಸ್ಥಾನಮಾನ
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇದು ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಬಿಜೆಪಿ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳ ರಾಜಕಾರಣದ ಯುಗಾಂತ್ಯವಾಗುತ್ತಾ ಎಂಬ ಸಂಶಯಕ್ಕೆ ಕಾರಣವಾಗಿದೆ.
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂಬ ನಿಯಮವಿದೆ. ಈಗಾಗಲೇ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿ.ಎಚ್. ಶಂಕರಮೂರ್ತಿ ಅವರು ಕೂಡ ಚುನಾವಣೆ ರಾಜಕಾರಣದಿಂದ ದೂರ ಉಳಿದಿದ್ದಾರೆ.
ಕೆ.ಎಸ್. ಈಶ್ವರಪ್ಪಗೆ ಈಗಾಗಲೇ 74 ವರ್ಷ
ಈಗ ಸಚಿವ ಸ್ಥಾನದಿಂದ ಕೆಳಗಿಳಿದಿರುವ ಕೆ.ಎಸ್. ಈಶ್ವರಪ್ಪ ಅವರಿಗೆ ಈಗಾಗಲೇ 74 ವರ್ಷ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ 75 ವರ್ಷ ಪೂರೈಸುತ್ತಾರೆ. ಪಕ್ಷದ ನಿಯಮದ ಪ್ರಕಾರ ಟಿಕೆಟ್ ವಂಚಿತರಾಗುವ ಸಂಭವವಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಚರ್ಚೆ ಜೋರಾಗಿತ್ತು. ಕೊನೆ ಕ್ಷಣದಲ್ಲಿ ಸಂಪುಟ ಸೇರಿ ಮತ್ತೆ ಅದೇ ಖಾತೆಗೆ ಸಚಿವರಾದರು. ಆದರೆ ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತಳಕು ಹಾಕಿಕೊಂಡಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ಸಿಗುವುದು ಕಷ್ಟ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ರಾಜಕೀಯ ಮುನ್ನೆಲೆಗೆ ನಾಯಕರ ಮಕ್ಕಳು
ಬಿಜೆಪಿಯ ತ್ರಿಮೂರ್ತಿಗಳು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೂ ತಮ್ಮ ಮಕ್ಕಳನ್ನು ರಾಜಕೀಯವಾಗಿ ಉತ್ತಮ ಸ್ಥಾನದಲ್ಲಿ ಕೂರಿಸಲು ಯಶಸ್ವಿಯಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಪುತ್ರರಾದ ಬಿ.ವೈ. ರಾಘವೇಂದ್ರ ಅವರು ಸಂಸದರಾಗಿದ್ದು, ಬಿ.ವೈ. ವಿಜಯೇಂದ್ರ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಡಿ.ಎಚ್. ಶಂಕರಮೂರ್ತಿ ಮಗ ಡಿ.ಎಸ್. ಅರುಣ್ ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾಗಿದ್ದರು. ಈಗ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ರಾಜಕೀಯವಾಗಿ ದೊಡ್ಡಮಟ್ಟದ ಸ್ಥಾನಮಾನ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಒಮ್ಮೆ ಜಿ.ಪಂ. ಸದಸ್ಯರಾಗಿದ್ದ ಕೆ.ಈ. ಕಾಂತೇಶ್ ಈಗ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಕೆ.ಎಸ್. ಈಶ್ವರಪ್ಪ ನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದು ಕೆ.ಈ. ಕಾಂತೇಶ್ ಅವರ ಹಾದಿ ಅಷ್ಟು ಸಲೀಸಾಗಿಲ್ಲ.
ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ದುರಂತ ನಿರ್ಗಮನ
ಕಾಂಗ್ರೆಸ್ನಿಂದ ಬೇಲಿಗೂಟ ನಿಲ್ಲಿಸಿದರೂ ಮತ ಹಾಕುತ್ತಾರೆ ಎಂಬಂತಿದ್ದ ಕಾಲದಲ್ಲಿ ಶಿವಮೊಗ್ಗದ ತ್ರಿಮೂರ್ತಿಗಳು ಭಾರತೀಯ ಜನತಾ ಪಕ್ಷವನ್ನು ಸಂಘಟನೆ ಮಾಡಿದ್ದರು. ಇವರು ಸವೆಸಿರುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬಿಜೆಪಿ ಹೆಸರೇ ಗೊತ್ತಿಲ್ಲದಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತಂದು ಜನಮಾನಸಕ್ಕೆ ಹತ್ತಿರವಾದರು. ಸೈಕಲ್ನಲ್ಲಿ ಊರೂರು ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು. ಆದರೆ ರಾಜಕೀಯದ ಕೊನೆಗಾಲದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ದುರಂತ ನಿರ್ಗಮನ ಶಿವಮೊಗ್ಗ ಜಿಲ್ಲೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಆಗಬೇಕೆಂಬ ಕನಸು ಕೊನೆಗೂ ನನಸಾಗಲಿಲ್ಲ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್. ಈಶ್ವರಪ್ಪ ಮತ್ತೆ ಸಂಪುಟ ಸೇರುವುದು ಅನುಮಾನ. ಬಿಜೆಪಿಯ ಕಾರ್ಯಕಾರಿಣಿ ನಂತರ ನಡೆಯಲಿದ್ದ ಸಂಪುಟ ಪುನಾರಚನೆ ಕೆ.ಎಸ್. ಈಶ್ವರಪ್ಪ ಅವರನ್ನು ಕೈಬಿಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೂ ಮುನ್ನವೇ ನಿರ್ಗಮನವಾಗಿದ್ದು, ಬಿಜೆಪಿ ವಲಯದಲ್ಲಿ ಬೇಸರ ಮೂಡಿಸಿದೆ.
ಕೆ.ಎಸ್. ಈಶ್ವರಪ್ಪ ಅವರ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕೊನೆಗೂ ನನಸಾಗಲಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ನಂತರ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದ ಕೆ.ಎಸ್. ಈಶ್ವರಪ್ಪ ಮತ್ತೆ ರಾಜಕೀಯದ ಉತ್ತುಂಗ ಸ್ಥಾನಕ್ಕೇರುವುದು ಕಷ್ಟ. ಬಿಜೆಪಿ ಶಕ್ತಿ ಕೇಂದ್ರದಂತಿರುವ ಶಿವಮೊಗ್ಗ ಮತ್ತೊಂದು ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
Recommended Video