"ಡಿಕೆ ಶಿವಕುಮಾರ್ ಫೋನ್ ಟ್ಯಾಪ್ ಮಾಡಿ ದೇಶ ಉದ್ಧಾರ ಮಾಡ್ಬೇಕಾ?"
ಶಿವಮೊಗ್ಗ, ಆಗಸ್ಟ್ 25: ಸರ್ಕಾರದಿಂದ ನನ್ನ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಇದು ಪ್ರಚಾರದ ತಂತ್ರ ಅಷ್ಟೆ. ಅವರ ಫೋನ್ ಟ್ಯಾಪ್ ಮಾಡಿ ದೇಶ ಉದ್ಧಾರ ಮಾಡ್ಬೇಕಾ ಅಂತ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಚೆಗೆ ತಮ್ಮ ಫೋನನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಶೀವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಫೋನ್ ಟ್ಯಾಪ್ ಮಾಡಿ, ಏನ್ ದೇಶದ ಉದ್ಧಾರ ಮಾಡ್ಬೇಕಾ? ನನಗೇನು ಅರ್ಥ ಆಗುತ್ತಿಲ್ಲ, ಅವರೇನು ಮಾಡುತ್ತಿದ್ದಾರೆ ಎಂದು ಅವರ ಫೋನ್ ಟ್ಯಾಪ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಇದೊಂದು ಪ್ರಚಾರದ ತಂತ್ರ. ಈ ಮೂಲಕ ನಾನು ಡೊಡ್ಡವನಾಗುತ್ತೇನೆ ಎಂದುಕೊಂಡಿದ್ದಾರೆ. ಇದು ಅರ್ಥವಿಲ್ಲದ ಆರೋಪ ಎಂದು ತಿರುಗೇಟು ನೀಡಿದರು.
"ಬಿಜೆಪಿಯಲ್ಲಿ ಕಾರ್ಯಕರ್ತರ ಪಡೆಯಿದ್ದು ಸೈದಾಂತಿಕವಾಗಿ ದೇಶ ಮುನ್ನೆಡಸುವ ಗುರಿ ಎಲ್ಲರ ಮುಂದಿದೆ. ಇಂದು ಎಲ್ಲರೂ ಬಿಜೆಪಿ ಪಕ್ಷಕ್ಕೆ ಬಂದು ಸೇರುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿ ಸೇರಿದ್ದಾರೆ. ಅವರು ಬಿಜೆಪಿ ಸೇರಿರುವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದರು.
"ಕಾಂಗ್ರೆಸ್ ಪಕ್ಷ ಒಡೆದ ಕನ್ನಡಿಯಂತೆ ಅಗಿದೆ. ಒಮ್ಮೆ ಒಡೆದ ಕನ್ನಡಿ ಮತ್ತೆ ಸೇರುವುದಕ್ಕೆ ಸಾಧ್ಯವಿಲ್ಲ. ಅದು ಚೂರು ಚೂರಾಗಿ ಹೋಗಿದೆ. ಪಕ್ಷದ ನಾಯಕರ ವಿರುದ್ಧ ಹಿರಿಯ ನಾಯಕರುಗಳೇ ಪತ್ರ ಬರೆಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಇಲ್ಲ. ಸಿದ್ದಾಂತ ಹಾಗೂ ಸಂಘಟನೆಯ ಕಾರ್ಯಕರ್ತರ ಗುಂಪೂ ಇಲ್ಲ ಎಂದರು.