"ಬಜೆಟ್ ನಲ್ಲಿ ನನ್ನ ಇಲಾಖೆಗೆ ಸಾಕಷ್ಟು ಅನುದಾನ ಸಿಕ್ಕಿದೆ"; ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಫೆಬ್ರುವರಿ 01: "ಹೊಸ ತೆರಿಗೆ ವಿಧಿಸದ ಹಣಕಾಸು ಸಚಿವರ ಕೇಂದ್ರ ಬಜೆಟ್ ಅನ್ನು ಸ್ವಾಗತಿಸುತ್ತೇನೆ. ಕಳೆದ ಸಾಲಿನಂತೆ ಈ ಸಾಲಿನಲ್ಲೂ ಮೂಲ ಸೌಲಭ್ಯ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಕ್ಷೇತ್ರ, ಹಿಂದುಗಳಿದ ವರ್ಗಗಳ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಸೃಷಿಗೆ ಹೆಚ್ಚಿನ ಮಹತ್ವ ನೀಡಿ ಭರವಸೆಯ ಬೆಳಕನ್ನು ನೀಡಿದೆ" ಎಂದು ಪ್ರತಿಕ್ರಿಯಿಸಿದ್ದಾರೆ ಸಚಿವ ಕೆ.ಎಸ್ ಈಶ್ವರಪ್ಪ.
ಶಿವಮೊಗ್ಗದಲ್ಲಿ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ವಿಶೇಷವಾಗಿ ನನ್ನ ಇಲಾಖೆಗೆ, ಅಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ಈ ಸಾಲಿನಲ್ಲಿ 1.23 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ನೀರಾವರಿ, ಜಲಸಂರಕ್ಷಣೆ, ಅಂತರ್ಜಲ, ಕುಡಿಯುವ ನೀರು ಮತ್ತು ನೈರ್ಮಲ್ಯ, ಸೋಲಾರ್, ವಿದ್ಯುತ್, ರಸ್ತೆಗಳ ಅಭಿವೃದ್ಧಿಗೆ ಪ್ರಾಮುಖ್ಯ ನೀಡಲಾಗಿದೆ. ಕಸವಿಲೇವಾರಿ, ಶೌಚಾಲಯ ನಿರ್ಮಾಣ ಕಾರ್ಯಕ್ರಮಗಳನ್ನು ಮುಂದುವರೆಸಿದ್ದು, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 12,300 ಕೋಟಿಗಳನ್ನು ಒದಗಿಸಲಾಗಿದೆ" ಎಂದರು.
ಬಜೆಟ್: ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿಗೆ ಹೇಳಿದ್ದೇನೂ?
"ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಸರಬರಾಜು ಕೊಟ್ಟು ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ 3.6 ಲಕ್ಷ ಕೋಟಿ ಒದಗಿಸಲಾಗಿದೆ. ಕೈಗಾರಿಕಾ ಉತ್ಪಾದನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ (ರಸ್ತೆ, ರೈಲ್ವೆ ಮುಂತಾದವುಗಳು) 100 ಲಕ್ಷ ಕೋಟಿ ಅನುದಾನ ನಿಗದಿಪಡಿಸಿರುವುದು ಸ್ವಾಗತಾರ್ಹ" ಎಂದು ಹೇಳಿದರು. ಇನ್ನು ಗ್ರಾಮೀಣ ಪ್ರದೇಶದ ತಂತ್ರಜ್ಞಾನ ಅಭಿವೃದ್ಧಿಗೂ ಒತ್ತು ಕೊಟ್ಟಿರುವುದು ಸಂತೋಷ ವಿಷಯ ಎಂದರು.