ಶಿವಮೊಗ್ಗ : 1 ಲಕ್ಷ ಲಡ್ಡು ವಿತರಣೆಗೆ ಚಾಲನೆ ಕೊಟ್ಟ ಈಶ್ವರಪ್ಪ
ಶಿವಮೊಗ್ಗ, ಮೇ 30 : ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜನರಿಗೆ ಸಿಹಿ ಹಂಚಲಾಯಿತು. ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಲಡ್ಡು ಹಂಚಿದರು.
ಗುರುವಾರ ಶಿವಮೊಗ್ಗ ನಗರದಲ್ಲಿ ಪಾದಯಾತ್ರೆ ಮೂಲಕ ಕೆ.ಎಸ್.ಈಶ್ವರಪ್ಪ ಅವರು ಜನರಿಗೆ ಲಡ್ಡು ಹಂಚಿದರು. ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜಾರ್ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ ವರೆಗೂ ಪಾದೆಯಾತ್ರೆಯಲ್ಲಿ ಹೋಗಿ ಲಡ್ಡು ವಿತರಣೆ ಮಾಡಿದರು.
ಬಿಜೆಪಿ ಪ್ರಚಂಡ ಬಹುಮತ, ಶಿವಮೊಗ್ಗದಲ್ಲಿ 1 ಲಕ್ಷ ಲಾಡು ಹಂಚಿಕೆ
ಶಿವಮೊಗ್ಗ ನಗರದ ಪ್ರತಿ ಮನೆಗೂ ಲಡ್ಡು ಹಂಚಲು ಬಿಜೆಪಿ ವ್ಯವಸ್ಥೆ ಮಾಡಿದೆ. ಅದಕ್ಕಾಗಿ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಲಡ್ಡು ತಯಾರು ಮಾಡಲಾಗಿದೆ. ನರೇಂದ್ರ ಮೋದಿ ಅವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಲಡ್ಡು ಹಂಚಲಾಗುತ್ತಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಅವರು, ' ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವನ್ನು ಜನ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಇಂದು ಇಡೀ ದೇಶದಲ್ಲಿ ಹಬ್ಬದ ವಾತಾವರಣವಿದೆ' ಎಂದರು.
ಮುಂಬೈ: ನರೇಂದ್ರ ಮೋದಿ 'ಮುಖವಾಡ' ಧರಿಸಿ ಲಡ್ಡು ತಯಾರಿ
'ಶಿವಮೊಗ್ಗ ನಗರದ 300 ಬೂತ್ ಗಳ ವ್ಯಾಪ್ತಿಯ ಎಲ್ಲ ಮನೆಗಳಿಗೂ ಸಿಹಿ ಹಂಚುತ್ತಿದ್ದೇವೆ. ಶಿವಮೊಗ್ಗದ ಒಂದು ಲಕ್ಷ ಮನೆಗಳಿಗೆ ಲಡ್ಡು ಹಂಚುತ್ತಿದ್ದೇವೆ. ನಾವು ಕರ್ನಾಟಕದಲ್ಲಿ 22 ಲೋಕಸಭಾ ಕ್ಷೇತ್ರ ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೆ ಜನ ನಮ್ಮನ್ನು 25 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಜನರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು' ಎಂದು ಸಂತಸ ವ್ಯಕ್ತಪಡಿಸಿದರು.