ಗೆದ್ದವರಿಗೆ ಸ್ಥಾನಮಾನ ಖಚಿತ ಎಂದ ಈಶ್ವರಪ್ಪ
ಶಿವಮೊಗ್ಗ, ಜನವರಿ 02: ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಚಿವ ಈಶ್ವರಪ್ಪ, "ಸಂಕ್ರಾಂತಿ ನಂತರ ಸರ್ಕಾರ ಸಚಿವ ಸಂಪುಟಕ್ಕೆ ಮುಂದಾಗಲಿದೆಯೋ ಅಥವಾ ಪುನರ್ ರಚನೆ ಆಗಲಿದೆಯೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ರಾಜೀನಾಮೆ ನೀಡಿ ಬಂದ ಶಾಸಕರು, ಉಪಚುನಾವಣೆಯಲ್ಲಿ ಗೆದ್ದವರಿಗೆ ಸ್ಥಾನಮಾನ ನೀಡಲಾಗುವುದು" ಎಂದು ಹೇಳಿದ್ದಾರೆ.
ಬಿಜೆಪಿಗೆ ಮೋದಿ ನಾಯಕ, ಸಿದ್ದರಾಮಯ್ಯ ಅಲ್ಲ: ಜಾರಕಿಹೊಳಿಗೆ ಈಶ್ವರಪ್ಪ ಕ್ಲಾಸ್
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತಾರಣೆ ನಿರ್ಧಾರ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಆರ್.ಶಂಕರ್ ಅವರನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಅವರು, "ಆರ್.ಶಂಕರ್ ಕುರಿತು ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನ ನೀಡಿದೆ. 6 ತಿಂಗಳಲ್ಲಿ ಶಾಸಕರಾಗಿ ಬರಬೇಕೆಂಬ ನಿರ್ದೇಶನವಿದೆ. ಅದರಂತೆ ನಡೆದುಕೊಳ್ಳುವುದು ಸಹ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಷಯ" ಎಂದರು.
"ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವುದು ಸರಿಯಿಲ್ಲ. ನ್ಯಾಯಾಲಯದಲ್ಲಿ ಈಗಾಗಲೇ ಈ ವಿಚಾರವಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆ ಗಡಿ ವಿಚಾರದಲ್ಲಿ ತಗಾದೆ ತೆಗೆದಿದೆ. ಇದನ್ನು ಖಂಡಿಸಲಾಗುವುದು" ಎಂದರು.