ಸಾಯಬೇಕೋ, ವ್ಯಾಪಾರ ಮಾಡಬೇಕೋ ತೀರ್ಮಾನಿಸಿ: ಸಚಿವ ಈಶ್ವರಪ್ಪ
ಶಿವಮೊಗ್ಗ, ಏಪ್ರಿಲ್ 23: ಶಿವಮೊಗ್ಗದಲ್ಲಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಇಂದು ಮಾಸ್ಕ್ ಜಾಗೃತಿ ಪಾದಯಾತ್ರೆ ನಡೆಸಲಾಯಿತು.
ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಗಾಂಧಿ ಬಜಾರ್ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ವರೆಗೆ ಸಚಿವ ಈಶ್ವರಪ್ಪ ಪಾದಯಾತ್ರೆ ನಡೆಸಿದರು. ಈ ವೇಳೆ ಮಾಸ್ಕ್ ಧರಿಸದೆ ಗಾಂಧಿ ಬಜಾರ್ನಲ್ಲಿ ಓಡಾಡುತ್ತಿದ್ದವರಿಗೆ ಸಚಿವ ಈಶ್ವರಪ್ಪ ಮಾಸ್ಕ್ ವಿತರಿಸಿದರು. ಅಲ್ಲದೆ ಮಾಸ್ಕ್ ಧರಿಸಿಕೊಂಡು ಓಡಾಡುವಂತೆ ಮನವಿ ಮಾಡಿದರು.
ಸಾಯಬೇಕೋ, ವ್ಯಾಪಾರ ಬೇಕೋ ತೀರ್ಮಾನಿಸಿ:
''ಸಾಯಬೇಕೋ, ವ್ಯಾಪಾರ ಮಾಡಬೇಕೋ ತೀರ್ಮಾನಿಸಲಿ, ಬದುಕಿದ್ದರೆ ತಾನೆ ವ್ಯಾಪಾರ ಮಾಡಲು ಆಗುವುದು. ದೆಹಲಿ, ಬೆಂಗಳೂರು ಮಟ್ಟಕ್ಕೆ ಉಳಿದ ಜಿಲ್ಲೆಗಳು ಹೋಗಬಾರದು ಅನ್ನುವುದು ಸರ್ಕಾರದ ಉದ್ದೇಶವಾಗಿದೆ'' ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗಾಂಧಿ ಬಜಾರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಲಾಕ್ ಡೌನ್ ಬೇಡ ಅನ್ನುವುದು ರಾಜ್ಯ ಸರ್ಕಾರದ ನಿಲುವು. ವ್ಯತಿರಿಕ್ತ ಪರಿಣಾಮ ಆಗಬಾರದು ಅನ್ನುವ ಕಾರಣಕ್ಕೆ ಲಾಕ್ ಡೌನ್ ಮಾಡಿಲ್ಲ. ಆದರೆ ಎಲ್ಲರೂ ಜಾಗೃತರಾಗಿರಬೇಕು ಎಂದರು.
ಮನೆಯವರ ಜೊತೆ ಸಂತೋಷವಾಗಿರಬೇಕು:
ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿರುವ ಕುರಿತು ಕೇಳಿದ ಪ್ರಶ್ನೆಗೆ, ಸ್ವಲ್ಪ ದಿನ ವ್ಯಾಪಾರ ನಿಲ್ಲಿಸಿ. ಮನೆಯವರ ಜೊತೆಗೆ ಸಂತೋಷವಾಗಿ ಇರೋದು ಒಳ್ಳೆಯದು. ಕೋವಿಡ್ ಆಗಿ ಆಸ್ಪತ್ರೆಗೆ ಹೋಗಿ ಸತ್ತರೆ ಯಾರು ಜವಾಬ್ದಾರಿ. ದೆಹಲಿಯಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಆದರೂ ಅಲ್ಲಿ ಭದ್ರತೆ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್ ಇಲ್ಲ. ಇಂಥ ಸಂದರ್ಭದಲ್ಲಿ ನಾವು ಜಾಗೃತರಾಗಬೇಕು ಎಂದು ನಿರ್ಬಂಧ ವಿಧಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಮೇಯರ್ ಸುನೀತಾ ಅಣ್ಣಪ್ಪ, ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಸೇರಿದಂತೆ ಹಲವರು ಈ ವೇಳೆ ಇದ್ದರು.