ಜೀವ ಬೆದರಿಕೆ ಕರೆ:ದೂರು ನೀಡುವಾಗ ಎಡವಟ್ಟು ಮಾಡಿಕೊಂಡರಾ ಈಶ್ವರಪ್ಪ?
ಶಿವಮೊಗ್ಗ, ಏಪ್ರಿಲ್ 07:ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪರಿಗೆ ವಾಯ್ಸ್ ಕಾಲ್ ಮೂಲಕ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಈಶ್ವರಪ್ಪ ಇಂದು ಭಾನುವಾರ ಶಿವಮೊಗ್ಗ ಜಿಲ್ಲಾರಕ್ಷಣಾಧಿಕಾರಿ ಕಚೇರಿಗೆ ತೆರಳಿ ಸೂಕ್ತ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ನಾನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಏ.5 ರಂದು ಇಂಟರ್ ಸಿಟಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಂಟರ್ ನ್ಯಾಷನಲ್ ಕರೆ ಮಾಡಿದ ಓರ್ವ ಅಪರಿಚಿತ ವ್ಯಕ್ತಿ "ಮುಸ್ಲಿಮರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡಲ್ಲ. ಮುಸ್ಲಿಂ ವಿರೋಧಿ ನೀವು" ಎಂದು ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾನೆ. ಜೀವ ಬೆದರಿಕೆವೊಡ್ಡಿದ್ದಾನೆ. ಇದಕ್ಕೆ ತಕ್ಕಹಾಗೆ ನಾನು ಪ್ರತ್ಯುತ್ತರ ನೀಡಿರುವುದಾಗಿ ಈಶ್ವರಪ್ಪ ತಿಳಿಸಿದರು.
ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ, ಉರ್ದುವಿನಲ್ಲಿ ನಿಂದನೆ
ಆದರೆ ಜೀವಬೆದರಿಕೆ ಕರೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಮನವಿ ಪತ್ರದಲ್ಲಿ ಬಾಗಲಕೋಟೆಯಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಬರುವಾಗ ಎಂದು ಉಲ್ಲೇಖಿಸಿದ್ದಾರೆ. ಆದರೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹಾಗೂ ಎಸ್ಪಿಗೆ ದೂರು ನೀಡುವಾಗ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಎಂದು ತಿಳಿಸಿದ್ದಾರೆ.
ತಮ್ಮ ಹೇಳಿಕೆ ಮತ್ತು ಬರವಣಿಗೆಯಲ್ಲಿ ವಿಭಿನ್ನವಾಗಿ ಹೇಳಿಕೆ ನೀಡಿರುವುದು ತಮ್ಮ ರಕ್ಷಣೆಗೆ ಎಸ್ಕಾರ್ಟ್ ಪಡೆಯುವುದಕ್ಕಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ವಿಧಾನಸಭಾ ಚುನಾವಣೆ ಘೋಷಣೆ ಆಗಲು ಕೆಲವು ದಿನಗಳು ಇರುವಾಗ ಬೆದರಿಕೆ ಕರೆ ಬಂದಿದೆ ಎಂದು ಮನವಿ ಸಲ್ಲಿಸಿದ್ದರು. ಆಗ ಈಶ್ವರಪ್ಪ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದರು.