ಕೊಡಚಾದ್ರಿ ಬೆಟ್ಟಕ್ಕೂ ತಟ್ಟಿದ ಕೊರೊನಾ ಬಿಸಿ; ಚಾರಣ ರದ್ದು, ಎಲ್ಲಾ ಮಾರ್ಗಗಳು ಬಂದ್
ಶಿವಮೊಗ್ಗ, ಮಾರ್ಚ್ 21: ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿಗೆ ಸಾಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿರುವ ವನ್ಯ ಜೀವಿ ವಿಭಾಗ, ಜೀಪ್ ಸಂಚಾರ ಮತ್ತು ಚಾರಣವನ್ನು ಸಂಪೂರ್ಣ ನಿಷೇಧಿಸಿದೆ.
ಕೊರೊನಾ ವೈರಸ್ ವ್ಯಾಪಿಸಬಹುದಾದ ಭೀತಿಯಿಂದ ಕೊಲ್ಲೂರು ವನ್ಯಜೀವಿ ವಿಭಾಗ ಈ ಹಿಂದೆ ಕೊಡಚಾದ್ರಿ ಗಿರಿಗೆ ಚಾರಣವನ್ನು ನಿಷೇಧ ಮಾಡಿತ್ತು. ಇದೀಗ ಜೀಪ್ ಸಂಚಾರವನ್ನೂ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ.
ರಾಜ್ಯದ ಎಲ್ಲ ಗಡಿಗಳನ್ನು ಬಂದ್ ಮಾಡಲು ಪ್ರತಾಪ ಸಿಂಹ ಮನವಿ
ಪ್ರವಾಸೋದ್ಯಮ ನಂಬಿಕೊಂಡು ಬದುಕುತ್ತಿರುವ ಕೊಲ್ಲೂರು, ನಿಟ್ಟೂರು, ಸಂಪೇಕಟ್ಟೆ, ಕಟ್ಟಿನಹೊಳೆ ಭಾಗದ ಜೀಪ್ ಚಾಲಕರು ಮತ್ತು ಮಾಲೀಕರು, ಸಣ್ಣ-ಪುಟ್ಟ ಹೋಟೆಲ್, ಅಂಗಡಿ, ರಸ್ತೆಬದಿ ವ್ಯಾಪಾರಿಗಳು ಇದರಿಂದಾಗಿ ಪರದಾಡುವಂತಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಾರಣಕ್ಕಾಗಿ ಪ್ರವಾಸಿಗಳು ದಂಡು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕೊಲ್ಲೂರಿನ ಮೇಲೂ ಪರಿಣಾಮ: ರಾಜ್ಯದ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕೊಡಚಾದ್ರಿ ಬೆಟ್ಟವನ್ನು ಹತ್ತಿಪೂಜೆ ಸಲ್ಲಿಸಿದರೆ ಸಾರ್ಥಕ ಎನ್ನುವ ಪ್ರತೀತಿ ಇದೆ. ಇದೀಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದರ್ಶನವನ್ನೂ ನಿಷೇಧಿಸಲಾಗಿದೆ.