ರಿಪ್ಪನ್ ಪೇಟೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ
ರಿಪ್ಪನ್ ಪೇಟೆ (ಶಿವಮೊಗ್ಗ): ರಿಪ್ಪನ್ ಪೇಟೆ ಪಟ್ಟಣದ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಯುವಕರ ಗುಂಪೊಂದು ಇಬ್ಬರು ಯುವಕರನ್ನು ಚಾಕುವಿನಿಂದ ಇರಿದಿದೆ. ಕುಮಾರ್ ಹಾಗೂ ಸೂರ್ಯ ಇರಿತಕ್ಕೆ ಒಳಗಾದವರು. ಧನುಷ್, ಸುಚಿತ್, ಜೋಸೆಫ್ ಆರೋಪಿಗಳು.
ಗಣಪತಿ ಮೂರ್ತಿ ಮೆರವಣಿಗೆ ಮಂಗಳವಾರ ರಾತ್ರಿ ವೇಳೆಗೆ ಪಟ್ಟಣದ ಶಿವಮಂದಿರ ಬಳಿ ಬಂದಿದ್ದು, ನೃತ್ಯ ಮಾಡುತ್ತಿದ್ದ ಕುಮಾರ್ ಹಾಗೂ ಸೂರ್ಯ ಅವರಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಇಬ್ಬರಿಗೂ ಬೆನ್ನು, ಪಕ್ಕೆ ಹಾಗೂ ಕುತ್ತಿಗೆಗೆ ಗಾಯಗಳಾಗಿವೆ. ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲರೂ ರಿಪ್ಪನ್ ಪೇಟೆ ನಿವಾಸಿಗಳಾಗಿದ್ದು, ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಹಿಳೆಯ ಗುಂಪಿನ ನಡುವೆ ಆರೋಪಿಗಳು ನೃತ್ಯಕ್ಕೆ ಮುಂದಾದರು. ಅದನ್ನು ತಡೆದು, ಗಣಪತಿ ಸಮಿತಿಯವರು ಆರೋಪಿಗಳನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಧನುಷ್, ಸುಚಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೋಸೆಫ್ ನಾಪತ್ತೆಯಾಗಿದ್ದಾನೆ.