ಕೆಜೆಪಿ-ಜೆಡಿಎಸ್ ಸರ್ಕಾರ; ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ನಾಯಕ!
ಶಿವಮೊಗ್ಗ, ಅಕ್ಟೋಬರ್ 01; 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದೆ. 'ಮಿಷನ್ 123 ನಮ್ಮ ಗುರಿಯಲ್ಲ, ಅದು ಛಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ' ಘೋಷಣೆ ಮಾಡಿದ್ದಾರೆ. ಆದರೆ ಮೈತ್ರಿ ಸರ್ಕಾರದ ಮಾತು ರಾಜ್ಯ ರಾಜಕೀಯದಲ್ಲಿ ಮತ್ತೆ ಕೇಳಿ ಬಂದಿದೆ.
ಕೆಪಿಸಿಸಿ ವಕ್ತಾರ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಜ್ಯ ರಾಜಕೀಯದ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. "ರಾಜ್ಯದಲ್ಲಿ ಕೆಜೆಪಿ ಪಕ್ಷ ಮತ್ತೆ ಉದಯಿಸಲಿದೆ. ಜೆಡಿಎಸ್ ಆ ಪಕ್ಷದ ಜೊತೆ ಜೈ ಜೋಡಿಸಲಿದೆ" ಎಂದು ಹೇಳಿದರು.
ಶಿವಮೊಗ್ಗ ಜೆಡಿಎಸ್ನಲ್ಲಿ ಸಂಚಲನ ಮೂಡಿಸಿದ ಕುಮಾರಣ್ಣ!
"ಸದ್ಯದಲ್ಲೇ ಕೆಜೆಪಿ ಪುನರ್ ಸ್ಥಾಪನೆಯಾಗಲಿದೆ. ಜೆಡಿಎಸ್ ಸಹಯೋಗದಲ್ಲಿ ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆದಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಚೆಗೆ ಕಾಂಗ್ರೆಸ್ ಸೇರಿದ ರಾಜಕೀಯ ಅಲೆಮಾರಿಗಳು ಕೆಜೆಪಿ ಸೇರಲಿದ್ದಾರೆ" ಎಂದು ಕಿಮ್ಮನೆ ರತ್ನಾಕರ್ ಭವಿಷ್ಯ ನುಡಿದರು.
ಶಿವಮೊಗ್ಗ ಡಿಸಿ ಕಚೇರಿ ಉದ್ಯೋಗಿ ನಾಪತ್ತೆ ಪ್ರಕರಣಕ್ಕೆ ತಿರುವು!
ಒಂದು ಕಡೆ ಕೆಜೆಪಿ ಬಗ್ಗೆ ಮಾಜಿ ಸಚಿವರು ಮಾತನಾಡಿದರೆ ಮತ್ತೊಂದು ಕಡೆ ರಾಜಕೀಯ ಅಲೆಮಾರಿಗಳು ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮೂಲಕ ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸೂಚನೆಯನ್ನು ರವಾನೆ ಮಾಡಿದರು.
ಜೆಡಿಎಸ್ ಕಾರ್ಯಾಗಾರ; ನಿಖಿಲ್, ಪ್ರಜ್ವಲ್ ಭಾಷಣದ ಮುಖ್ಯಾಂಶಗಳು
ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕರು
ಮಾಜಿ ಸಚಿವ ಕಿಮ್ಮನೆ ರತ್ನಾಕರ್, "ತೀರ್ಥಹಳ್ಳಿ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಮುಖಂಡರು ಕಾಣಿಸಿಕೊಳ್ಳುತ್ತಿದ್ದಾರೆ. ಈಚೆಗೆ ನಡೆದ ಶರಾವತಿ ಮುಳುಗಡೆ ಸಂತ್ರಸ್ತರ ಪಾದಯಾತ್ರೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಭಾಗಿಯಾಗಿದ್ದರು. ಬಿದರಗೋಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡರು, ಕುಮಾರಸ್ವಾಮಿ ಭಾವಚಿತ್ರ ಬಳಸಲಾಗಿತ್ತು" ಎಂದು ಹೇಳಿದರು.
ಬೇರೆ ಪಕ್ಷದವರನ್ನು ಆಹ್ವಾನಿಸಿದರೆ ಸಹಿಸುವಿರಾ?
"ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದ ಬೇರೆ ಪಕ್ಷದವರಿಗೆ ಮಣೆ ಹಾಕುವುದರ ಹಿಂದಿನ ಮರ್ಮವೇನು?. ನಾನು ಸಭೆಯನ್ನು ಆಯೋಜನೆ ಮಾಡಿ ಬೇರೆ ಪಕ್ಷದ ಮುಖಂಡರನ್ನು ಸಭೆಗೆ ಆಹ್ವಾನಿಸಿದರೆ ಸುಮ್ಮನಿರುತ್ತೀರಾ?" ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. "ಯಾರನ್ನೋ ರಾಜಕೀಯಕ್ಕೆ ಕರೆತಂದು ನನ್ನನ್ನು ಮುಗಿಸಲು ಸಾಧ್ಯವಿಲ್ಲ" ಎಂದು ಕಿಮ್ಮನೆ ರತ್ನಾಕರ್ ಸಭೆಯಿಂದ ಹೊರ ಹೋದರು.
ಶಿವಮೊಗ್ಗ ಕಾಂಗ್ರೆಸ್ ಭಿನ್ನಮತ
ಶಿವಮೊಗ್ಗ ಕಾಂಗ್ರೆಸ್ನಲ್ಲಿ ಹಲವಾರು ಬದಲಾವಣೆಗಳಾಗಿವೆ. ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದಾರೆ. ತೀರ್ಥಹಳ್ಳಿಯಲ್ಲಿ ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಲು ಕಿಮ್ಮನೆ ರತ್ನಾಕರ್ ವಿರೋಧ ವ್ಯಕ್ತಪಡಿಸಿದ್ದರು. ಈಗ ಅವರು "ತೀರ್ಥಹಳ್ಳಿ ಕ್ಷೇತ್ರದಲ್ಲಿ ಈಚೆಗೆ ಕಾಂಗ್ರೆಸ್ ಸೇರಿದ ರಾಜಕೀಯ ಅಲೆಮಾರಿಗಳು ಕೆಜೆಪಿ ಸೇರಲಿದ್ದಾರೆ" ಎನ್ನುವ ಮೂಲಕ ಅಸಮಾಧಾನ ಇನ್ನೂ ತಣ್ಣಗಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
Recommended Video
ಕಾಂಗ್ರೆಸ್ ಪ್ರಬಲವಾಗುತ್ತಿದೆಯೇ?
ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇರುವುದು ಭದ್ರಾವತಿಯಲ್ಲಿ ಮಾತ್ರ. ಶಿಕಾರಿಪುರ (ಬಿ. ಎಸ್. ಯಡಿಯೂರಪ್ಪ), ಶಿವಮೊಗ್ಗ ನಗರ (ಕೆ. ಎಸ್. ಈಶ್ವರಪ್ಪ), ತೀರ್ಥಹಳ್ಳಿ (ಆರಗ ಜ್ಞಾನೇಂದ್ರ), ಸೊರಬ (ಕುಮಾರ್ ಬಂಗಾರಪ್ಪ), ಸಾಗರ (ಹರತಾಳು ಹಾಲಪ್ಪ), ಶಿವಮೊಗ್ಗ ಗ್ರಾಮಾಂತರ (ಅಶೋಕ ನಾಯ್ಕ್) ಬಿಜೆಪಿ ಶಾಸಕರಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಬಿ. ವೈ. ರಾಘವೇಂದ್ರ ಗೆಲುವು ಸಾಧಿಸಿದ ಬಳಿಕ ಜಿಲ್ಲೆಯ ಕಾಂಗ್ರೆಸ್ ಚಿತ್ರಣ ಬದಲಾಗಿದೆ. ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವೂ ಹೆಚ್ಚಿದೆ. ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಪ್ರಸನ್ನ ಕುಮಾರ್, ಬಿ. ಕೆ. ಸಂಗಮೇಶ್ವರ್ ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ದೊಡ್ಡ ಪಡೆಯೇ ಇದೆ. ಆದರೆ ನಾಯಕರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಸಹ ಈಗ ಬಹಿರಂಗವಾಗಿದೆ.