ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್; ಲಾಂಛನ ಬಿಡುಗಡೆ
ಶಿವಮೊಗ್ಗ, ಮಾರ್ಚ್ 05: ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ನಡೆಯಲಿರುವ ಮಾರ್ಚ್ 20ರಂದು ರೈತ ಮಹಾ ಪಂಚಾಯತ್ ನಡೆಯಲಿದೆ. ಮಹಾ ಪಂಚಾಯತ್ನ ಲಾಂಛನವನ್ನು ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು.
ಶುಕ್ರವಾರ ಲಾಂಛನ ಬಿಡುಗಡೆ ಮಾಡಿದ ಮಾತನಾಡಿದ ಕಡಿದಾಳು ಶಾಮಣ್ಣ, "ರೈತ, ದಲಿತ ಸಂಘಟನೆಗಳು ಒಗ್ಗೂಡಿ ಸಮಾವೇಶ ಮಾಡಲಾಗುತ್ತಿದೆ. ನನ್ನ ಕನಸು ಈಡೇರಿದೆ, ಚಳವಳಿ ಯಶಸ್ವಿ ಆಗಲಿ. ಹೋರಾಟಕ್ಕೆ ಜಯವಾಗಲಿ" ಎಂದು ಆಶಯ ವ್ಯಕ್ತಪಡಿಸಿದರು.
ರೈತ ಹೋರಾಟಕ್ಕೆ ಕೊರೊನಾ ಕಾಟ: ಮಹಾರಾಷ್ಟ್ರದಲ್ಲಿ ಕಿಸಾನ್ ಮಹಾಪಂಚಾಯತ್ ಗೆ ತಡೆ!?
ರೈತ ಮುಖಂಡ ಕೆ. ಟಿ. ಗಂಗಾಧರ್ ಮಾತನಾಡಿ, "ರಾಜಕೀಯ ಪಕ್ಷಗಳು ರೈತರನ್ನು ಮತಬ್ಯಾಂಕ್ ಆಗಿ ಪರಿವರ್ತಸಿಕೊಂಡಿದ್ದಾರೆ. ಭೂಮಿ, ಆಹಾರ, ಸಂಗ್ರಹಣೆಯನ್ನು ಖಾಸಗೀಕರಣ ಮಾಡಿ, ಈ ವಿಚಾರಗಳನ್ನು ಭಾರತ ಸರ್ಕಾರ ಚುನಾವಣಾ ವಸ್ತುವನ್ನಾಗಿ ಮಾಡಿಕೊಳ್ಳುತ್ತಿದೆ. ಸರ್ಕಾರ ಬೀಳಿಸಬೇಕು ಅಂತಾ ಹೋರಾಟ ಮಾಡುತ್ತಿಲ್ಲ. ನಮ್ಮ ಹಕ್ಕುಗಳನ್ನು ಜೋಪಾನ ಮಾಡಿಕೊಳ್ಳುತ್ತಿದ್ದೇವೆ. ಆರ್ಎಸ್ಎಸ್ ಕೂಡ ನಮ್ಮ ಪರವಾಗಿದೆ" ಎಂದರು.
ಶಿವಮೊಗ್ಗ: ಮಾ.20ಕ್ಕೆ ರೈತ ಸಮಾವೇಶ, ರಾಕೇಶ್ ಟಿಕಾಯತ್ ಭಾಗಿ
ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಮಾತನಾಡಿ, "ಮೋದಿ ಅವರಿಗೆ ಧನ್ಯವಾದ ಹೇಳುತ್ತಿದ್ದೇನೆ. ದೇಶದಲ್ಲಿ ಮತ್ತೊಂದು ರೈತ ಚಳವಳಿ ಹುಟ್ಟಲು ಅವರು ಕಾರಣವಾಗಿದ್ದಾರೆ. ಗುಂಡೂರಾವ್ ಅವರ ಸರ್ಕಾರದ ಅವಧಿಯಲ್ಲಿ ನರಗುಂದ, ನವಲಗುಂದ ಘಟನೆಯಿಂದ ರೈತ ಚಳವಳಿ ಆರಂಭಕ್ಕೆ ಕಾರಣವಾಗಿದ್ದರು. ಆದರೆ ಇವತ್ತು ನಡೆಯುತ್ತಿರುವುದು ಬರೀ ರೈತ ಚಳವಳಿಯಲ್ಲ. ಸಾಮಾನ್ಯ ಜನರೂ ಹೋರಾಟಕ್ಕೆ ಇಳಿದಿದ್ದಾರೆ" ಎಂದು ಹೇಳಿದರು.
ಕರ್ನಾಟಕದಲ್ಲಿ ಸತತ ಮೂರು ದಿನ ರಾಕೇಶ್ ಟಿಕಾಯತ್ ಭಾಷಣ
"ಈಗ ಮೂರು ಕಾಯ್ದೆಗಳು ಜಾರಿಯಾದರೆ ಜನರು ಅನ್ನ ಇಲ್ಲದೆ ಸಾಯುವಂತಾಗುತ್ತದೆ. ಹಾಗಾಗಿ ಎಲ್ಲಾ ಸಮುದಾಯದ ಮಠಗಳು, ಸ್ವಾಮೀಜಿಗಳು, ಜನಪರ ಇರುವವರು ಹೋರಾಟಕ್ಕೆ ಬೆಂಬಲ ನೀಡಬೇಕು. ಈ ಚಳವಳಿಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ. ದರ್ಶನ್ ಪಾಲ್, ಜಗಮೋಹನ್ ಸಿಂಗ್ ಸೇರಿದಂತೆ ಹಲವರು ಮಹಾ ಪಂಚಾಯತ್ನಲ್ಲಿ ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.
ಕೆ. ಎಲ್. ಅಶೋಕ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್, ಕೆ. ಪಿ. ಶ್ರೀಪಾಲ್, ಡಿಎಸ್ಎಸ್ ಮುಖಂಡ ಹಾಲೇಶಪ್ಪ, ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್. ಸಿ. ಯೋಗೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.