ಶಿವಮೊಗ್ಗ: ಗಾಂಧಿ ಜಯಂತಿಯಂದು ಕಿಮ್ಮನೆ ರತ್ನಾಕರ್ ಉಪವಾಸ ಸತ್ಯಾಗ್ರಹ
ಶಿವಮೊಗ್ಗ, ಅಕ್ಟೋಬರ್ 1: ಕೇಂದ್ರ ಸರ್ಕಾರ ರೈತರ ವಿರೋಧಿ ಮಸೂದೆ ಜಾರಿಗೆ ತರುತ್ತಿದ್ದು, ಇದು ರೈತರ ವಿರೋಧಿ ಶಾಸನವಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ರೈತರ ಬದುಕಿಗೆ ಇದು ಮರಣ ಶಾಸನವಾಗಲಿದೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಗಾಂಧಿ ಜಯಂತಿಯಂದು ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಇದರ ಜೊತೆಗೆ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಮುಖ್ಯಮಂತ್ರಿ ನಡೆ ವಿರುದ್ಧ ಖಂಡನೆ ಕೂಡ ಹಮ್ಮಿಕೊಳ್ಳಲಾಗಿದ್ದು, ತೀರ್ಥಹಳ್ಳಿಯ ತಾಲೂಕು ಕಚೇರಿಯ ಮುಂಭಾಗ ಶುಕ್ರವಾರ ಬೆಳಗ್ಗೆ 9.30ಕ್ಕೆ ಉಪಸ್ಥಿತರಿರಲು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳನ್ನು ಕಿಮ್ಮನೆ ರತ್ನಾಕರ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ DRDO ಸಂಶೋಧನಾ ಕೇಂದ್ರ: ಉನ್ನತ ವಿಜ್ಞಾನಿಗಳ ತಂಡ ಭೇಟಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆಗಳಿಂದ ಮುಂಬರುವ ದಿನಗಳಲ್ಲಿ ರೈತರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುವುದರಲ್ಲಿ ಸಂಶಯವೇ ಇಲ್ಲ.
ಆದ್ದರಿಂದ ಈ ಕರಾಳ ಶಾಸನವನ್ನು ವಿರೋಧಿಸುವ ಸಲುವಾಗಿ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಖಾಸಗಿ ಸುದ್ದಿವಾಹಿನಿ ಒಂದು ಮುಖ್ಯಮಂತ್ರಿಗಳ ಕುಟುಂಬ ನಡೆಸಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ವರದಿ ಬಿತ್ತರಿಸಿದೆ ಎಂಬ ಕಾರಣಕ್ಕಾಗಿ ಆ ಮಾಧ್ಯಮದ ಕಚೇರಿಯ ಮೇಲೆ ತನ್ನ ಪ್ರಭಾವವನ್ನು ಬಳಸಿ ದಾಳಿ ನಡೆಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.
ಈ ಎಲ್ಲಾ ಧೋರಣೆ ಖಂಡಿಸಿ ಕಿಮ್ಮನೆ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಾಗೂ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಎಲ್ಲಾ ಮುಖಂಡರು ವಿವಿಧ ಘಟಕಗಳ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಹಾಜರಾಗಲು ಸೂಚಿಸಲಾಗಿದೆ.
ಪ್ರತಿಭಟನೆಗೆ ಪಾಲ್ಗೊಳ್ಳುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಟ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.