ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆಗೆ ಕಿಮ್ಮನೆ ವಿರೋಧ!
ಶಿವಮೊಗ್ಗ, ಫೆಬ್ರವರಿ 23: "ಆರ್. ಎಂ. ಮಂಜುನಾಥ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಮ್ಮ ಪ್ರಬಲ ವಿರೋಧವಿದೆ" ಎಂದು ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಮಂಗಳವಾರ ಶಿವಮೊಗ್ಗದಲ್ಲಿ ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿ ನಡೆಸಿದರು. "ಮಂಜುನಾಥ ಗೌಡ ಅವರು ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ" ಎಂದು ಟೀಕಿಸಿದರು. ಮಂಜುನಾಥ ಗೌಡರು ಸದ್ಯ ಜೆಡಿಎಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್
"ಅವರು ಕಾಂಗ್ರೆಸ್ನಲ್ಲಿದ್ದಾಗ ಬಿಜೆಪಿಗೆ, ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ಗೆ ಒಳಗಿನಿಂದ ಬೆಂಬಲಿಸುತ್ತಾರೆ. ಅಂತಹವರ ಅಗತ್ಯ ಪಕ್ಷಕ್ಕಿಲ್ಲ" ಎಂದು ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಾಲ ಕೊಟ್ಟ ಬಗ್ಗೆ ಸಿಬಿಐ ತನಿಖೆ!
"ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣದ ಬಗ್ಗೆ ಇನ್ನೂ ಇಲಾಖಾ ತನಿಖೆ ನಡೆಯುತ್ತಿದೆ. ಆದರೆ, ಹಗರಣದ ಆಳ ಬಹಳಷ್ಟಿದೆ, ಈ ಕುರಿತು ಸಿಬಿಐ ತನಿಖೆ ನಡೆಯಬೇಕು. ಈಗ ಡಿಸಿಸಿ ಬ್ಯಾಂಕ್ನಲ್ಲಿ ಬಿಜೆಪಿ ಬೆಂಬಲಿತರು ಇದ್ದು, ಅವರೇ ಸಿಬಿಐ ತನಿಖೆಗಾಗಿ ಪತ್ರ ಬರೆಯಬೇಕು" ಎಂದರು.
ಮಂಜುನಾಥ ಗೌಡರಿಗೆ ಹಿನ್ನಡೆ; ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹೊಸ ಅಧ್ಯಕ್ಷರು
ಮಧು ಬಂಗಾರಪ್ಪ ಸೇರ್ಪಡೆ; ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಕುರಿತು ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ ನೀಡಿದರು. "ಅವರ ಕಾಂಗ್ರೆಸ್ ಸೇರ್ಪಡೆಗೆ ನನ್ನ ಸ್ವಾಗತವಿದೆ. ಅವರಿಗೆ ಪಕ್ಷ ಸೇರುವಂತೆ ನಾನೂ ಕೂಡ ಸಲಹೆ ನೀಡಿದ್ದೆ" ಎಂದು ಹೇಳಿದರು.
ಆರ್. ಎಂ. ಮಂಜುನಾಥ ಗೌಡ ಪ್ರಸ್ತುತ ಶಿವಮೊಗ್ಗ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು. ಭಾನುವಾರ ನಡೆದ ಕಾರ್ಯಕರ್ತರ ಸಭೆಗೆ ಅವರು ಗೈರಾಗಿದ್ದರು. ಆಗ ವಿವಿಧ ಮುಖಂಡರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರಿಗೆ ಜಿಲ್ಲಾ ಜೆಡಿಎಸ್ನ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದ್ದರು.
2018ರ ಚುನಾವಣೆಯಲ್ಲಿ ಆರ್. ಎಂ. ಮಂಜುನಾಥ ಗೌಡ ತೀರ್ಥಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. 40,127 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿದ್ದರು. ಬಿಜೆಪಿಯ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರು.