ಶಿವಮೊಗ್ಗ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸುದ್ದಿ ಠುಸ್!
Recommended Video
ಶಿವಮೊಗ್ಗ, ಏಪ್ರಿಲ್ 12 : ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸುದ್ದಿಯೊಂದು ಠುಸ್ ಆಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಈ ಸುದ್ದಿ ಬೇಜಾರು ಉಂಟು ಮಾಡಿರಬಹುದು. ಆದರೆ, ಬಿಜೆಪಿ ಪಾಳಯದಲ್ಲಿ ನಗು ಮೂಡಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು....ಶಿವಮೊಗ್ಗ ಲೋಕಸಭಾ ಚುನಾವಣೆಗೆ 12 ದಿನಗಳು ಬಾಕಿ ಇರುವಂತೆ ಈ ಸುದ್ದಿ ಹೊರಬಿದ್ದಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಬೇಸರಗೊಂಡಿದ್ದಾರೆ.
ಶಿವಮೊಗ್ಗ : ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆ ಶಿವಕುಮಾರ್ ಹೆಗಲಿಗೆ!
ಏಪ್ರಿಲ್ 23ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್-ಜೆಡಿಎಸ್ನಿಂದ ಮಧು ಬಂಗಾರಪ್ಪ ಅವರು ಅಭ್ಯರ್ಥಿ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಚುನಾವಣೆಯಲ್ಲಿ ಎದುರಾಳಿಗಳು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ವಹಿಸಲಾಗಿದೆ. ಕಾಂಗ್ರೆಸ್ನ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಉಸ್ತುವಾರಿಯಾಗಿ ಬರಲಿದ್ದಾರೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ...
ಕೆಪಿಸಿಸಿ ಅಧ್ಯಕ್ಷರ ಘೋಷಣೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಉಸ್ತುವಾರಿ ಎಂದು ಘೋಷಣೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಸೋಲು-ಗೆಲುವಿನ ಕಿಮ್ಮನೆ ರತ್ನಾಕರ ಅವರೇ ಹೊಣೆ ಎಂದು ಎಲ್ಲಾ ಜವಾಬ್ದಾರಿಗಳನ್ನು ಅವರ ಹೆಗಲಿಗೆ ಹಾಕಿದ್ದಾರೆ.
ಹಬ್ಬಿದ್ದ ಸುದ್ದಿ ಠುಸ್
ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗದ ಉಸ್ತುವಾರಿಯನ್ನು ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿತ್ತು. ಆದರೆ, ಈ ಸುದ್ದಿ ಈಠ ಠುಸ್ ಆಗಿದೆ. ಇದರಿಂದ ಹಲವು ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಅಪ್ಪ-ಮಗನನ್ನು ಕಟ್ಟಿ ಹಾಕಲು ಬರ್ತಾರೆ
ಶಿವಮೊಗ್ಗ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರು ಅಭ್ಯರ್ಥಿ. ಡಿ.ಕೆ.ಶಿವಕುಮಾರ್ ಅವರು ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವ ಮೂಲಕ ಅಪ್ಪ-ಮಗನನ್ನು ಕಟ್ಟಿಹಾಕಲಿದ್ದಾರೆ ಎಂಬ ಮಾತುಗಳು ಹಬ್ಬಿದ್ದವು. ಆದರೆ, ಈಗ ಉಸ್ತುವಾರಿ ಬದಲಾಗಿದೆ.
ಬಳ್ಳಾರಿಯಲ್ಲಿ ಮ್ಯಾಜಿಕ್ ಮಾಡಿದ್ದ ಡಿಕೆಶಿ
2018ರಲ್ಲಿ ನಡೆದ ಬಳ್ಳಾರಿ ಲೋಕಸಭಾ ಉಪ ಚುನಾವಣೆ ಹೊಣೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲಾಗಿತ್ತು. ಬಿ.ಶ್ರೀರಾಮುಲು ಕೋಟೆಗೆ ಲಗ್ಗೆ ಇಟ್ಟಿದ್ದ ಅವರು ಮ್ಯಾಜಿಕ್ ಮಾಡಿದ್ದರು. ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತ ಅವರು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದ ಡಿ.ಕೆ.ಶಿವಕುಮಾರ್ ವಿ.ಎಸ್.ಉಗ್ರಪ್ಪ ಅವರನ್ನು 2.40 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದರು.
ಶಿವಮೊಗ್ಗ ಮೇಲೆ ಎಲ್ಲರ ಕಣ್ಣು
ಶಿವಮೊಗ್ಗ ಲೋಕಸಭಾ ಚುನಾವಣೆ ಮೇಲೆ ಎಲ್ಲರ ಕಣ್ಣಿದೆ. ಕಾರಣ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ. ಹೌದು, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರು ಈ ಬಾರಿ ಗೆಲ್ಲಬೇಕು ಎಂಬುದು ಕುಮಾರಸ್ವಾಮಿ ಅವರ ಆಶಯವಾಗಿದೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.