ಶಿವಮೊಗ್ಗ; ಮಳೆಯಿಂದ ನೆಲೆ ಕಳೆದುಕೊಂಡ ಕವಲಗುಂದಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ?
ಶಿವಮೊಗ್ಗ, ಸೆಪ್ಟೆಂಬರ್ 22: ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದ ಜನರ ಬದುಕು ಅಸ್ತವ್ಯಸ್ತವಾಗಿದೆ. ಶಿವಮೊಗ್ಗದಲ್ಲೂ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಜನರ ಜೀವನವನ್ನು ಅನಿಶ್ಚಿತತೆಗೆ ದೂಡಿದೆ.
ಜೊತೆಗೆ ಪ್ರತಿ ಮಳೆಗಾಲದಲ್ಲೂ ಪ್ರವಾಹ ಪೀಡಿತವಾಗುವ ಜಿಲ್ಲೆಯ ಕವಲಗುಂದಿಯ ಗ್ರಾಮದಲ್ಲಿ ಈ ಬಾರಿಯೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ಇದೀಗ ಒಕ್ಕಲಿಗರ ಭವನದಲ್ಲಿನ ಕಾಳಜಿ ಕೇಂದ್ರದಲ್ಲಿರುವ ಕವಲಗುಂದಿಯ ಗ್ರಾಮಸ್ಥರು ತಮಗೆ ಸುರಕ್ಷಿತವಾದ ಶಾಶ್ವತ ನೆಲೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಎದುರಾಗುವ ಈ ಕಷ್ಟವನ್ನು ನೀಗುವಂತೆ ಮನವಿ ಮಾಡಿದ್ದಾರೆ.
"ಪ್ರವಾಹದೊಂದಿಗೆ ಮೊಸಳೆ ಕಾಟವೂ ಇದೆ"
ಕಾಳಜಿ ಕೇಂದ್ರದಲ್ಲಿರುವ, ಕವಲಗುಂದಿಯ ಪ್ರವಾಹ ಸಂತ್ರಸ್ತೆ ಭಾಗ್ಯಶ್ರೀ, ಈ ಕುರಿತು ಅಳಲು ತೋಡಿಕೊಂಡಿದ್ದು, "ಪ್ರತಿ ಮಳೆಗಾಲದಲ್ಲೂ ನಮ್ಮದು ಇದೇ ಪರಿಸ್ಥಿತಿಯಾಗಿದೆ. ಈಗ ನಾವು ವಾಸವಿದ್ದ ಪ್ರದೇಶದಲ್ಲಿ ಮೊಸಳೆ ಕಾಟವೂ ಇದೆ. ನಾವು ಹುಟ್ಟುವ ಮುಂಚೆಯಿಂದಲೂ ಇದೇ ಪರಿಸ್ಥಿತಿಯಿದೆ. ಹೀಗೆ ಎಷ್ಟು ವರ್ಷ ಎಂದು ನಾವು ಇದೇ ರೀತಿ ಅತಂತ್ರ ಪರಿಸ್ಥಿತಿ ಅನುಭವಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಇನ್ನೆರಡು ದಿನ ಭಾರಿ ಮಳೆ: ಹೈ ಅಲರ್ಟ್ ಘೋಷಣೆ..!
ಕವಲಗುಂದಿ ಸಂತ್ರಸ್ತರಿಗೆ ನಿವೇಶನದ ಭರವಸೆ
"ಒಂದು ಸೂಕ್ತ ಜಾಗ ತೋರಿಸಿ, ಮನೆ ಕಟ್ಟಿಕೊಳ್ಳಲು ಸಾಲದ ಅನುಕೂಲ ಕಲ್ಪಿಸಬೇಕು. ಕಡೆಯ ಪಕ್ಷ, ಜಾಗ ಕೊಟ್ಟರೆ ಗುಡಿಸಲು ಹಾಕಿಕೊಂಡಾದರೂ ಜೀವನ ಮಾಡುತ್ತೇವೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಕವಲಗುಂದಿ ಸಂತ್ರಸ್ತರಿಗೆ ಜೇಡಿಕಟ್ಟೆಯಲ್ಲಿ ನಿವೇಶನ, ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ ನೀಡುವುದಾಗಿ ನಗರ ಸಭೆ ಆಯುಕ್ತ ಮನೋಹರ್ ಭರವಸೆ ನೀಡಿದ್ದಾರೆ.
3 ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಕವಲಗುಂದಿ ಸಂತ್ರಸ್ತರ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತತ್ ಕ್ಷಣದ ಪರಿಹಾರ ನೀಡಲು ಮುಂದಾಗಿದ್ದು, ಪ್ರತಿ ವರ್ಷವೂ ಪ್ರವಾಹದಿಂದ ತತ್ತರಿಸುವ ಕವಲಗುಂದಿ ಪ್ರದೇಶದ 30 ಕುಟುಂಬಗಳಿಗೆ ಶಾಶ್ವತ ಪರಿಹಾರವಾಗಿ ಜೇಡಿಕಟ್ಟೆಯಲ್ಲಿ ನಿವೇಶನ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮನೋಹರ್ ತಿಳಿಸಿದರು.
ಮಲೆನಾಡಿನ ಭಾಗಗಳಲ್ಲಿ ಮಳೆ; ಮತ್ತೆ ತುಂಗಾ ನದಿ ಮಂಟಪ ಮುಳುಗಡೆ
ಈ ಕುರಿತಂತೆ ಒನ್ ಇಂಡಿಯಾದೊಂದಿಗೆ ಮಾತನಾಡಿದ ಅವರು, ಕವಲಗುಂದಿಯ 30 ಕುಟುಂಬಗಳಿಗೆ ಜೇಡಿಕಟ್ಟೆಯಲ್ಲಿ ನಿವೇಶನ ನೀಡಿ, ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ನೀಡುವ ಕುರಿತಾಗಿ ಮೂರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿಯೇ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ. ಒಪ್ಪಿಗೆ ದೊರೆತ ತಕ್ಷಣವೇ ಅವರಿಗೆಲ್ಲಾ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ನಿಗಾ ವಹಿಸಲು ಏಳು ತಂಡಗಳ ರಚನೆ
30 ಕುಟುಂಬಗಳಿಗೆ ತತ್ ಕ್ಷಣದ ಪರಿಹಾರವಾಗಿ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಒಂದೆರಡು ದಿನದಲ್ಲಿ ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗುವುದು. ಈ ಕುರಿತಂತೆ ತಹಶೀಲ್ದಾರ್ ಅವರೊಂದಿಗೆ ಈಗಾಗಲೇ ಚರ್ಚಿಸಿ ನಿರ್ಧರಿಸಲಾಗಿದೆ. ಇನ್ನು, ಚಾಮೇಗೌಡ ಪ್ರದೇಶ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾದರೆ ಅವರಿಗೆಲ್ಲಾ ಕಾಳಜಿ ಕೇಂದ್ರ ಆರಂಭಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಏಳು ತಂಡಗಳನ್ನು ರಚನೆ ಮಾಡಲಾಗಿದ್ದು, ಈ ತಂಡ ನಿರಂತರ ಗಮನ ಹರಿಸಲಿದೆ ಎಂದರು.
ಶಿವಮೊಗ್ಗದಲ್ಲಿ ಹೈ ಅಲರ್ಟ್
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಇಂದು ಮತ್ತು ನಾಳೆ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೊರಡಿಸಿದೆ. ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿರುವುದರಿಂದ ಈಗಾಗಲೇ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಭದ್ರಾವತಿ ಪಟ್ಟಣದ ಸಿದ್ಧರೂಢ ನಗರ, ಹುತ್ತಾ ಕಾಲೋನಿ, ಬಿ.ಹೆಚ್ ರಸ್ತೆ, ತರಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದ್ದು, ಅಲ್ಲಲ್ಲಿ ರಕ್ಷಣಾ ಕೇಂದ್ರ ಹಾಗೂ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ ಇದೆ.