ಪಠ್ಯ ಪರಿಷ್ಕರಣೆ ವಿರುದ್ಧ ಆಕ್ರೋಶ; ತೀರ್ಥಹಳ್ಳಿಯಲ್ಲಿ ಪಾದಯಾತ್ರೆ
ಶಿವಮೊಗ್ಗ, ಜೂನ್ 15; "ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಆದರೆ ಪಠ್ಯ ಪುಸ್ತಕವನ್ನು ವಿಸರ್ಜನೆ ಮಾಡಿಲ್ಲ. ಈ ಸರ್ಕಾರ ನಮ್ಮ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದೆ. ಇದನ್ನು ನಾವು ತಡೆಗಟ್ಟದೇ ಹೋದರೆ ಇಡಿ ಬದುಕನ್ನೆ ಹಾಳು ಮಾಡುತ್ತಾರೆ" ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿರುವ ಪಠ್ಯವನ್ನ ವಜಾಗೊಳಿಸಬೇಕು ಎಂದು ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಬುಧವಾರ ಪಾದಯಾತ್ರೆ ನಡೆಯಿತು. ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದ ಎದುರು ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬಿ. ಸಿ. ನಾಗೇಶ್ ಮಂತ್ರಿಯಾಗಲು ನಾಲಾಯಕ್; ಸಿದ್ದರಾಮಯ್ಯ
"ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ನಡದ ಮನಸುಗಳು ಹೋರಾಟ ಮಾಡಬೇಕಿದೆ. ರಾಜಕೀಯೇತರವಾಗಿ ಈ ಹೋರಾಟ ನಡೆಯಬೇಕಿದೆ. ದೇಶದಲ್ಲಿ ಅನೇಕ ಭಾರೀ ಚರಿತ್ರೆಯನ್ನು ತಿದ್ದಿದ್ದಾರೆ. ಈಗ ಪುನಃ ಚರಿತ್ರೆಯನ್ನು ತಿದ್ದಲು ಮುಂದಾಗಿದ್ದಾರೆ" ಎಂದು ಸಿದ್ದರಾಮಯ್ಯ ದೂರಿದರು.
ಭಾಷೆ ವಿಷಯದಲ್ಲಿ ತಮಿಳಿಗರನ್ನು ಅನುಸರಿಸುವ ಅಗತ್ಯವಿದೆ: ಹಂಸಲೇಖ
"ನಮ್ಮ ಮಕ್ಕಳಿಗೆ ಎಂಥಹ ಜ್ಞಾನ ತಿಳಿಸಬೇಕು ಅನ್ನುವುದು ಮುಖ್ಯ. ಮತ್ತೆ ವೈದಿಕ ಧರ್ಮದ ಕಡೆಗೆ ಜನರನ್ನು ಎಳೆದು ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಎಲ್ಲರೂ ಎಚ್ಚರ ವಹಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಯಾವ ಕಾರಣಕ್ಕೂ ಪರಿಷ್ಕೃತ ಪಠ್ಯ ಕೈ ಬಿಡುವುದಿಲ್ಲ: ಸಚಿವ ಬಿ. ಸಿ ನಾಗೇಶ್
ಮನುವಾದಿಗಳಿಗೆ ಸಮಾನತೆ ಇಷ್ಟವಿಲ್ಲ
"ಭಾರತದ ಸಂವಿಧಾನ ಸಮಾನತೆಯನ್ನು ಹೇಳುತ್ತದೆ. ಜಾತ್ಯತೀತ ತತ್ವ ಬೋಧಿಸುತ್ತದೆ. ಇದು ಮನವಾದಿಗಳಿಗೆ ಇಷ್ಟವಾಗುವುದಿಲ್ಲ. ಆರ್ಎಸ್ಎಸ್ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಒಪ್ಪಿಗೆ ಇಲ್ಲ. ಸಾವಿರಾರು ವರ್ಷದಿಂದ ಮೇಲ್ವರ್ಗದ ಜನರು ಕೆಳವರ್ಗದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿಕೊಂಡು ಬಂದಿದ್ದಾರೆ. ಇದು ಮುಂದುವರೆಯಬೇಕು ಎಂಬುದು ಮನುವಾದಿಗಳ ಬಯಕೆಯಾಗಿದೆ" ಎಂದು ಸಿದ್ದರಾಮಯ್ಯ ಟೀಕಿಸಿದರು.
ಮಾನಸಿಕ ಕೊಳಚೆ ತುಂಬಲಾಗುತ್ತಿದೆ
ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ಸಾಹಿತಿ ಪ್ರೊ. ಸಿದ್ದರಾಮಯ್ಯ ಮಾತನಾಡಿ, "ನಾಡಗೀತೆಗೆ ಅಣಕ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿ ವಿಕಾರ ಮನಸಿನ ವ್ಯಕ್ತಿಗೆ ಪಠ್ಯ ಪಸ್ತಕ ಪರಿಷ್ಕರಣೆ ಮಾಡಲು ಹೊಣೆ ಹೊರಿಸಿದ್ದು ನಾಚಿಕೆಗೇಡಿನ ಸಂಗತಿ. ದೇಶ ಪ್ರೇಮದ ಹೆಸರಿನಲ್ಲಿ ಪಠ್ಯದಲ್ಲಿ ಮಾನಸಿಕ ಕೊಳಚೆ ತುಂಬಲಾಗುತ್ತಿದೆ" ಎಂದು ಟೀಕಿಸಿದರು.
ಜ್ಞಾನವಿಲ್ಲದ ಗೃಹ ಸಚಿವ
"ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜ್ಞಾನವಿಲ್ಲದ ಸಚಿವ. ಪೊಲೀಸ್ ಇಲಾಖೆಯಲ್ಲಿನ ದುಸ್ಥಿತಿ ಗಮನಿಸಿದರೆ ಸಚಿವರಿಗೆ ಜ್ಞಾನವಿಲ್ಲ ಅನ್ನುವುದು ಗೊತ್ತಾಗುತ್ತದೆ. ಇನ್ನು ಶಿಕ್ಷಣ ಸಚಿವ ನಾಗೇಶ್ ಅವರು ಆರ್ಎಸ್ಎಸ್ ಸೇರಿಕೊಂಡು ಅವರು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
"ರಾಷ್ಟ್ರಕವಿ ಕುವೆಂಪು ಅವರು ತೀರ್ಥಹಳ್ಳಿಯವರು. ಅವರಿಗೆ ಅವಮಾನ ಆದಾಗ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ಕೊಟ್ಟು ಬರಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರನ್ನು ಸೋಲಿಸಿ ಎಂತಹವನ್ನು ಆಯ್ಕೆ ಮಾಡಿದ್ದೀರಿ?" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಪ್ರಶ್ನಿಸಿದರು.
ಗಾಂಧಿ ಕೊಲ್ಲುವಾಗಲೂ ನಮಸ್ಕಾರ ಮಾಡಿದ್ದರು
"ಮಹಾತ್ಮ ಗಾಂಧೀಜಿ ಅವರನ್ನು ಕೊಲ್ಲುವ ಮೊದಲು ನಾಥೋರಾಮ್ ಗೋಡ್ಸೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದ. ಆ ಬಳಿಕ ಗುಂಡು ಹೊಡೆದಿದ್ದ. ನಮ್ಮ ಪ್ರಧಾನಿ ಕೂಡ ಹಾಗೆ ಮಾಡಿದ್ದಾರೆ. ಮೊದಲು ಸಂಸತ್ತಿಗೆ ತಲೆ ಬಾಗಿ ನಮಸ್ಕಾರ ಮಾಡಿದ್ದರು. ಈಗ ಹಲವರನ್ನು ಬಿಟ್ಟು ಸಂವಿಧಾನದ ಕಗ್ಗೊಲೆ ಮಾಡಲು ಹೊರಟಿದ್ದಾರೆ" ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಕಿಸಿದರು.
ಕುಪ್ಪಳ್ಳಿಯಿಂದ ಪಾದಯಾತ್ರೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ಬುಧವಾರ ಪಾದಯಾತ್ರೆ ನಡೆಸಲಾಯಿತು. ಸಾಹಿತಿಗಳು, ಪ್ರಗತಿಪರರು, ವಿವಿಧ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಶ್ವಮಾನವ ವೇದಿಕೆಯ ಸಂಚಾಲಕ ಕಡಿದಾಳು ದಯಾನಂದ್, ಡಾ. ನಾ. ಡಿಸೋಜಾ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ರೈತ ಮುಖಂಡರಾದ ಕೆ. ಟಿ. ಗಂಗಾಧರ್ ಹಾಗೂ ಬಸವರಾಜಪ್ಪ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಎಚ್. ಎಸ್. ಸುಂದರೇಶ್ ಮುಂತಾದವರು ವೇದಿಕೆಯಲ್ಲಿದ್ದರು.