ಶರಾವತಿ ಭೂಗರ್ಭ ಸರ್ವೇ ಕಾರ್ಯಕ್ಕೆ ನ.4ರವರೆಗೂ ಮತ್ತೆ ತಡೆ
ಶಿವಮೊಗ್ಗ, ಅಕ್ಟೋಬರ್ 23: ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ಭೂಗರ್ಭ ಸಮೀಕ್ಷೆ ನಡೆಸಲು, ಭೂಮಿ ಕೊರೆಯಲು ಆರಂಭಿಸಿದ್ದ ರಾಜ್ಯ ವಿದ್ಯುತ್ ನಿಗಮಕ್ಕೆ ಹೈಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿದ್ದು, ಇದೀಗ ಪುನಃ ಗಡುವನ್ನು ಮುಂದುವರಿಸಿರುವುದು ಪರಿಸರ ಪ್ರೇಮಿಗಳಿಗೆ ಸಂತಸ ತಂದಿದೆ.
ಗೇರುಸೊಪ್ಪ ಹಿನ್ನೀರಿನಿಂದ ತಲಕಳಲೆ ಡ್ಯಾಂಗೆ ಪೈಪ್ ಮೂಲಕ ನೀರನ್ನು ಮೇಲೆತ್ತಿ, ಅಲ್ಲಿಂದ ಹಿರೇಹೆನ್ನಿ ಬಳಿ ಪವರ್ ಸ್ಟೇಷನ್ ನಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ನೀರನ್ನು ಪುನಃ ಪಂಪ್ ಮಾಡಿಕೊಂಡು ಸಂಗ್ರಹಿಸಿಡುವ ವಿಶಿಷ್ಟ ಯೋಜನೆಗಾಗಿ ಕೆಪಿಸಿಎಲ್ ಅಧಿಕಾರಿಗಳು ಭಾರದ ಎಂಜಿನ್ಗಳನ್ನು ಹಿರೇಹೆನ್ನಿ ಕಾಡಲ್ಲಿಳಿಸಿ ಡ್ರಿಲ್ ಮಾಡಲು ಆರಂಭಿಸಿದ್ದರು.
ಶರಾವತಿ 'ಭೂಗರ್ಭ ಜಲವಿದ್ಯುತ್ ಯೋಜನೆ' ವಿರೋಧಿಸಲು ಕಾರಣಗಳೇನು?
ಯೋಜಿತ ಸ್ಥಳ 1400 ಅಡಿಯಷ್ಟು ಆಳದಲ್ಲಿರುವುದರಿಂದ ಕಲ್ಲಿನ ರಚನೆ ತಿಳಿಯಲು ಅಧಿಕಾರಿಗಳು ಡ್ರಿಲ್ ಮಾಡಲು ಮುಂದಾಗಿದ್ದರು. ಸಿಂಹಬಾಲದ ಸಿಂಗಳೀಕಗಳನ್ನು ಹೊಂದಿರುವ ಶರಾವತಿ ಕಣಿವೆ ಇಂತಹ ಯೋಜನೆಗಳಿಂದ ಅವಸಾನದತ್ತ ಸಾಗಿದೆ. ತಕ್ಷಣ ಡ್ರಿಲ್ಲಿಂಗ್ ಕೆಲಸ ನಿಲ್ಲಿಸಬೇಕು ಎಂದು ಎಡ್ವರ್ಡ್ ಸಂತೋಷ್ ಮಾರ್ಟಿನ್ ಎಂಬುವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಈ ಹಿಂದೆ ಕೆಪಿಸಿಎಲ್ ಅಧಿಕಾರಿಗಳು ಡ್ರಿಲ್ಲಿಂಗ್ ಕೆಲಸವನ್ನು ಅಕ್ಟೋಬರ್ 16ರವರೆಗೆ ನಿಲ್ಲಿಸುವುದಾಗಿ ಹೇಳಿದ್ದರು. ಈಗ ಈ ಗಡುವನ್ನ ನವೆಂಬರ್ 4ರವರೆಗೆ ವಿಸ್ತರಿಸಿ ಹೈಕೋರ್ಟ್ ಮತ್ತೊಮ್ಮೆ ಮಧ್ಯಂತರ ಆದೇಶ ನೀಡಿದೆ. ರಾಜ್ಯ ಸರ್ಕಾರ 2x2 ಅಳತೆಯ 12 ಬೋರ್ ಹೋಲ್ಗಳನ್ನು ತೆಗೆಯಲು ಕೆಪಿಸಿಎಲ್ ಅಧಿಕಾರಿಗಳಿಗೆ ಸೂಚಿಸಿತ್ತು. ಈ ಹಿಂದೆ ಎರಡು ಬಾರಿ ಹೈಕೋರ್ಟ್ ತಡೆ ಆದೇಶ ನೀಡಿದೆ.