ಶಿವಮೊಗ್ಗದಲ್ಲಿ ರಾಜ್ಯಪಾಲರು; ಜೋಗ ಜಲಪಾತಕ್ಕೆ ಭೇಟಿ
ಶಿವಮೊಗ್ಗ, ನವೆಂಬರ್ 25; ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಂಡರು. ಎರಡು ದಿನದ ಶಿವಮೊಗ್ಗ ಪ್ರವಾಸ ಕೈಗೊಂಡಿರುವ ರಾಜ್ಯಪಾಲರು ಬೆಳಗ್ಗೆ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಂಡು ಸಂತಸಪಟ್ಟರು.
ಗುರುವಾರ ಬೆಳಗ್ಗೆ ಜೋಗದ ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳನ್ನು ವೀಕ್ಷಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಜೋಗ ಜಲಪಾತ, ಶರಾವತಿ ನದಿ, ಲಿಂಗನಮಕ್ಕಿ ಜಲಾಶಯದ ಕುರಿತು ಮಾಹಿತಿ ಪಡೆದರು. ಅಲ್ಲದೆ ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣದ ಕುರಿತು ತಿಳಿದುಕೊಂಡರು.
ಜೋಗ ವೀಕ್ಷಣೆಗೆ ಷರತ್ತು; ಪ್ರವಾಸಿಗರ ಸಂಖ್ಯೆ ಭಾರಿ ಕುಸಿತ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಗೆ ಆಮಿಸಿದ್ದರು. ರಾತ್ರಿ ಜೋಗದ ಬಾಂಬೆ ಗೆಸ್ಟ್ ಹೌಸ್ನಲ್ಲಿ ರಾಜ್ಯಪಾಲರು ತಂಗಿದ್ದರು. ಸಾಗರ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಪ್ರಮುಖರು ಸ್ವಾಗತ ಕೋರಿದರು. ಈ ಸಂದರ್ಭದಲ್ಲೂ ಜೋಗದ ವೈಭವದ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಹಿತಿ ಪಡೆದಿದ್ದರು.
ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ
ಕನ್ನಡ ಕಲಿಕೆ ಬಗ್ಗೆ ರಾಜ್ಯಪಾಲರ ಮಾತು; ಬುಧವಾರ ರಾಜ್ಯಪಾಲರು ಶಿವಮೊಗ್ಗದಲ್ಲಿ ಪ್ರೇರಣಾ ಎಜುಕೇಷನ್ ಟ್ರಸ್ಟ್ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ್ದ ಅವರು, "ಅಧಿಕಾರವಹಿಸಿಕೊಂಡ ಕ್ಷಣದಿಂದ ಕನ್ನಡ ಕಲಿಯಲು ಆರಂಭಿಸಿರುವೆ. ಮುಂದೆ ಕನ್ನಡದಲ್ಲಿಯೇ ವ್ಯವಹರಿಸುವ ಇಚ್ಛೆ ಇದೆ" ಎಂದು ಹೇಳಿದ್ದರು.
ಅಧಿಕಾರಿಗಳ ಜೊತೆ ಫೋಟೊ ಸೆಷನ್
ಗುರುವಾರ ಬೆಳಗ್ಗೆ ಜೋಗದ ವೈಭವ ಕಣ್ತುಂಬಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕಾರಿಗಳ ಜೊತೆಗೆ ಫೋಟೋ ಸೆಷನ್ ನಡೆಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಕುಮುಟ ಉಪ ವಿಭಾಗಾಧಿಕಾರಿ ರಾಹುಲ್ ಪಾಂಡೆ ಸೇರಿದಂತೆ ಹಲವರು ಇದ್ದರು. ಎಲ್ಲರೊಂದಿಗೂ ರಾಜ್ಯಪಾಲರು ಫೋಟೊ ಕ್ಲಿಕ್ಕಿಸಿಕೊಂಡರು.
ಪ್ರವಾಸಿಗರಿಗೆ ಜೋಗಕ್ಕೆ ನಿರ್ಬಂಧ
ರಾಜ್ಯಪಾಲರು ಜೋಗಕ್ಕೆ ಭೇಟಿ ನೀಡಿದ ಹಿನ್ನೆಲೆ ಬೆಳಗ್ಗೆ ಸ್ವಲ್ಪ ಹೊತ್ತು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಯಿಂದಲೇ ಜೋಗ ಜಲಾಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯಪಾಲರ ಭೇಟಿ ಹಿನ್ನೆಲೆ ಇವತ್ತು ಸ್ವಲ್ಪ ತಡವಾಗಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತ್ತೊಂದೆಡೆ ಬಾಂಬೆ ಗೆಸ್ಟ್ ಹೌಸ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಸಫಾರಿಗೂ ಭೇಟಿ ನೀಡಿದ್ದರು
ಬುಧವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ತೆರಳಿದ್ದರು. ಅಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಕಣ್ತುಂಬಿಕೊಂಡರು. ಪ್ರತಿ ಪ್ರಾಣಿ ಮತ್ತು ಪಕ್ಷಿಯ ಬಳಿಗೆ ತೆರಳಿ ಅದರ ಕುರಿತು ಮಾಹಿತಿ ಪಡೆದುಕೊಂಡರು.
ಹುಲಿ ಮತ್ತು ಸಿಂಹಧಾಮದಲ್ಲಿನ ಸಫಾರಿಗೆ ತೆರಳಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಹುಲಿಗಳು ಮತ್ತು ಸಿಂಹಗಳನ್ನು ವೀಕ್ಷಿಸಿದರು. ಇತ್ತೀಚೆಗೆಷ್ಟೆ ಸಿಂಹಧಾಮಕ್ಕೆ ಬನ್ನೇರುಘಟದಿಂದ ನೀರು ಕುದುರೆಯನ್ನು ತರಿಸಲಾಗಿದೆ.
ನೀರು ಕುದುರೆ ಬಗ್ಗೆ ಮಾಹಿತಿ
ಮೈಸೂರು ಮತ್ತು ಬನ್ನೇರುಘಟ್ಟ ಬಿಟ್ಟರೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ, ಸಿಂಹಧಾಮದಲ್ಲಿ ಮಾತ್ರ ಈ ನೀರು ಕುದುರೆ ಇದೆ. ಇದರ ಕುರಿತು ಮಾಹಿತಿ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಂತಸ ವ್ಯಕ್ತಪಡಿಸಿದರು. ಅದರ ಸಂತಾನಭಿವೃದ್ಧಿಗೆ ಪೂರಕ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.
ಇನ್ನು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಹಿನ್ನೆಲೆ ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರಾಜ್ಯಪಾಲರು ತೆರಳುವ ಮಾರ್ಗದುದ್ದಕ್ಕೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.