ಅಭ್ಯರ್ಥಿಗಳು ಅಂತಿಮ : ಶಿಕಾರಿಪುರದ ಚುನಾವಣಾ ಕಣದ ಚಿತ್ರಣ
ಶಿವಮೊಗ್ಗ, ಏಪ್ರಿಲ್ 17 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಚುನಾವಣಾ ಕಣ ಅಂತಿಮಗೊಂಡಿದೆ. ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಸ್ಪರ್ಧೆಯಿಂದಾಗಿ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಶಿಕಾರಿಪುರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ. 8 ವಿಧಾನಸಭಾ ಚುನಾವಣೆಗಳ ಪೈಕಿ ಯಡಿಯೂರಪ್ಪ ಅವರು ಒಮ್ಮೆ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಹಾಲಿ ಶಿವಮೊಗ್ಗ ಸಂಸದರಾಗಿರುವ ಅವರು ಶಿಕಾರಿಪುರದಿಂದ 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಶಿಕಾರಿಪುರ ಕ್ಷೇತ್ರ ಪ್ರತಿಷ್ಠೆಯ ಕಣವಾಗುತ್ತದೆ. ಆದರೆ, ಈ ಬಾರಿ ಯಡಿಯೂರಪ್ಪ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಬಳಿಕ ಯಡಿಯೂರಪ್ಪ ಅವರ ಗೆಲುವು ಮತ್ತಷ್ಟು ಸುಲಭವಾಗಿದೆ.
ಶಿವಮೊಗ್ಗ ರಾಜಕೀಯ : ಶಿಕಾರಿಪುರದಿಂದ ಬಂದ ಹೊಸ ಸುದ್ದಿ!
ಯಡಿಯೂರಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅವರು ತಂದೆಯ ಗೆಲುವಿನ ಹೊಣೆ ಹೊತ್ತುಕೊಂಡಿದ್ದಾರೆ. ಕ್ಷೇತ್ರದಲ್ಲಿನ ಪ್ರಚಾರದ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಅವರು ರಾಜ್ಯದ ಇತರ ಕ್ಷೇತ್ರಗಳತ್ತ ಗಮನಹರಿಸಬಹುದಾಗಿದೆ. ಶಿಕಾರಿಪುರದ ಚಿತ್ರಣ ಹೇಗಿದೆ ನೋಡಿ...
ಗೋಣಿ ಮಾಲತೇಶ್ ಕಣಕ್ಕೆ
ಶಿಕಾರಿಪುರ ಕ್ಷೇತ್ರಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಅಭ್ಯರ್ಥಿ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಹೆಸರುಗಳು ಕೇಳಿಬರುತ್ತಿತ್ತು. ಅಂತಿಮವಾಗಿ ಸ್ಥಳೀಯರಿಗೆ ಪಕ್ಷ ಆದ್ಯತೆ ನೀಡಿದೆ.
ಶಿಕಾರಿಪುರ ಕ್ಷೇತ್ರದ ಜನರು ವಲಸಿಗರನ್ನು ಒಪ್ಪುವುದು ಕಷ್ಟ. ಹಿಂದೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರನ್ನೇ ಜನರು ಸೋಲಿಸಿದ್ದರು. ಆದ್ದರಿಂದ, ಸ್ಥಳೀಯರಿಗೆ ಟಿಕೆಟ್ ನೀಡಲಾಗಿದೆ. ಹಿಂದೆ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕರೆಲ್ಲಾ ಈಗ ಬಿಜೆಪಿಯಲ್ಲಿದ್ದಾರೆ.
ಎಚ್.ಟಿ.ಬಳಿಗಾರ್
ಶಿಕಾರಿಪುರ ಕ್ಷೇತ್ರಕ್ಕೆ ಎಚ್.ಟಿ.ಬಳಿಗಾರ್ ಅವರು ಜೆಡಿಎಸ್ ಅಭ್ಯರ್ಥಿ. 2013ರ ಚುನಾವಣೆಗೂ ಸ್ಪರ್ಧಿಸಿದ್ದ ಅವರು 15007 ಮತಗಳನ್ನು ಪಡೆದು ಸೋತಿದ್ದರು. 2014ರಲ್ಲಿ ನಡೆದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.
2018ರ ಚುನಾವಣೆ ಪ್ರಚಾರಕ್ಕಾಗಿ ಶಿಕಾರಿಪುರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ, ಕರೆ ನೀಡಿದ್ದಾರೆ. ಎಚ್.ಟಿ.ಬಳಿಗಾರ್ ಅವರು ಈ ಬಾರಿ ಪ್ರಬಲ ಪೈಪೋಟಿ ನೀಡಲಿದ್ದಾರೆಯೇ? ಕಾದು ನೋಡಬೇಕು.
ಚಂದ್ರಕಾಂತ್ ರೇವಂಕರ್
ಶಿಕಾರಿಪುರ ಕ್ಷೇತ್ರದಲ್ಲಿ ಆಮ್ಮ ಆದ್ಮಿ ಪಕ್ಷದಿಂದ ಚಂದ್ರಕಾಂತ್ ರೇವಂಕರ್ ಅವರು ಸ್ಪರ್ಧಿಸುತ್ತಿದ್ದಾರೆ. 65ವರ್ಷದ ಚಂದ್ರಕಾಂತ್ ಅವರಿಗೆ ಇದು ಮೊದಲ ಚುನಾವಣೆ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರು ಮುನ್ಸಿಪಲ್ ಚುನಾವಣೆಗೆ ನಿಂತಾಗ ಅವರ ಪರವಾಗಿ ಕೆಲಸ ಮಾಡಿದ್ದ ಚಂದ್ರಕಾಂತ್ ಅವರು ಈ ಬಾರಿ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
'ಶಿಕಾರಿಪುರ ಭ್ರಷ್ಟಾಚಾರದ ಕೂಪವಾಗಿದೆ. ಪುರಸಭೆ ಯಡಿಯೂರಪ್ಪ ಅವರ ಕುಟುಂಬದ ಹಿಡಿತದಲ್ಲಿದೆ. ಜನ ಸಮಾನ್ಯರ ಮಾತಿಗೆ, ದೂರಿಗೆ ಬೆಲೆಯೇ ಇಲ್ಲದಂತಾಗಿದೆ' ಎಂದು ಚಂದ್ರಕಾಂತ್ ಆರೋಪ ಮಾಡಿದ್ದು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಬಿ.ವೈ.ರಾಘವೇಂದ್ರಗೆ ಹೊಣೆ
ಶಿಕಾರಿಪುರದ ಚುನಾವಣೆಯ ಹೊಣೆಯನ್ನು ಯಡಿಯೂರಪ್ಪ ಅವರು ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ವಹಿಸಿದ್ದಾರೆ. ಪ್ರಚಾರ ಕಾರ್ಯದಿಂದ ಹಿಡಿದು ಎಲ್ಲಾ ಕೆಲಸಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ತಂದೆಗಾಗಿ ಕ್ಷೇತ್ರ ಬಿಟ್ಟುಕೊಟ್ಟ ರಾಘವೇಂದ್ರ ಅವರು ತಂದೆಯನ್ನು ಗೆಲ್ಲಿಸುವ ಹೊಣೆ ಹೊತ್ತುಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಇತರ ಕ್ಷೇತ್ರಗಳತ್ತ ಗಮನವಹಿಸಿದ್ದಾರೆ. ಮುಖ್ಯವಾಗಿ ವರುಣಾ ಕ್ಷೇತ್ರದಲ್ಲಿ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಗೆಲ್ಲಿಸುವ ಸವಾಲು ಯಡಿಯೂರಪ್ಪ ಅವರ ಮುಂದಿದೆ.
ಯಡಿಯೂರಪ್ಪ ಗೆಲುವಿನ ಅಂತರ
ಶಿಕಾರಿಪುರ ಕ್ಷೇತ್ರದಲ್ಲಿ 8 ವಿಧಾನಸಭಾ ಚುನಾವಣೆಗಳ ಪೈಕಿ ಯಡಿಯೂರಪ್ಪ ಅವರು ಒಮ್ಮೆ ಮಾತ್ರ ಸೋಲು ಕಂಡಿದ್ದಾರೆ. ಈ ಬಾರಿ ಎಷ್ಟು ಅಂತರದಿಂದ ಗೆಲ್ಲಬಹುದು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.
2013ರಲ್ಲಿ ಕಾಂಗ್ರೆಸ್ನ ಶಾಂತವೀರಪ್ಪ ಗೌಡ ವಿರುದ್ಧ 24,425 ಮತಗಳ ಅಂತರದಿಂದ, 2008ರ ಚುನಾವಣೆಯಲ್ಲಿ ಎಸ್. ಬಂಗಾರಪ್ಪ ವಿರುದ್ಧ 45,927 ಮತಗಳ ಅಂತರದಿಂದ, 2004ರ ಚುನಾವಣೆಯಲ್ಲಿ ಕೆ.ಶೇಖರಪ್ಪ ವಿರುದ್ಧ 19,953 ಮತಗಳ ಅಂತರದಿಂದ ಯಡಿಯೂರಪ್ಪ ಅವರು ಗೆಲುವು ಸಾಧಿಸಿದ್ದಾರೆ.