ಶಿವಮೊಗ್ಗ ರಾಜಕೀಯ : ಕಾಂಗ್ರೆಸ್ಗೆ ಬೇಳೂರು, ಬಿಜೆಪಿ ನಾಯಕರಿಗೆ ಚಿಂತೆ
Recommended Video
ಶಿವಮೊಗ್ಗ, ಏಪ್ರಿಲ್ 22 : ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.
ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡದಿದ್ದರೆ ಅವರು ಬಂಡಾಯವೇಳಬಹುದು? ಎಂಬ ನಿರೀಕ್ಷೆ ಇತ್ತು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಅಥವ ಜೆಡಿಎಸ್ ಸೇರಬಹುದು ಎಂಬ ಲೆಕ್ಕಾಚಾರಗಳಿತ್ತು. ಆದರೆ, ಕಾಂಗ್ರೆಸ್ ಸೇರಿರುವುದು ಬಿಜೆಪಿ ನಾಯಕರ ಚಿಂತೆಗೆ ಕಾರಣವಾಗಿದೆ.
2013ರ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು. ಆಗ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 23,217 ಮತಗಳನ್ನು ಪಡೆದು, ಚುನಾವಣೆಯಲ್ಲಿ 3ನೇ ಸ್ಥಾನ ಪಡೆದಿದ್ದರು.
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ
ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಟಿಕೆಟ್ ಬೇಳೂರು ಗೋಪಾಲಕೃಷ್ಣ ಅವರ ಕೈ ತಪ್ಪಿದೆ. ಅವರು ಕಾಂಗ್ರೆಸ್ ಸೇರಿದ್ದು, ಮಾವ ಕಾಗೋಡು ತಿಮ್ಮಪ್ಪ ಗೆಲ್ಲಿಸುವುದೇ ಗುರಿ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಹತರಾಳು ಹಾಲಪ್ಪ ಅವರನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆ.
ಕಾಂಗ್ರೆಸ್ ಸೇರಿದ ಬೇಳೂರು ಗೋಪಾಲಕೃಷ್ಣ
ಶನಿವಾರ ಬೇಳೂರು ಗೋಪಾಲಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷ ಸೇರುವ ಕುರಿತು ಮಾತುಕತೆ ನಡೆಸಿದ್ದರು. ಸಾಗರ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಗೆ ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್ ಸೇರಿದ್ದು, ಈ ಬಾರಿಯ ಚುನಾವಣೆ ಟಿಕೆಟ್ ಸಿಗುವುದಿಲ್ಲ. ಆದರೆ, ಮಾವ ಕಾಗೋಡು ತಿಮ್ಮಪ್ಪ ಅವರ ಜೊತೆ ಸೇರಿ ಹೆಚ್ಚಿನ ಮತಗಳನ್ನು ಸೆಳೆಯಲಿದ್ದಾರೆ. ಆದ್ದರಿಂದ, ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ಗೆಲುವು ಕಷ್ಟವಾಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ಸೇರುವುದಿಲ್ಲ ಎಂಬ ನಂಬಿಕೆ
ಸಾಗರ ಕ್ಷೇತ್ರದ ಟಿಕೆಟ್ ನಿರಾಕರಿಸಿದರೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕರೇ ಆಲೋಚಿಸಿರಲಿಲ್ಲ. ಒಂದೂವರೆ ವರ್ಷದಿಂದ ಮಾವನ ವಿರುದ್ಧ ರಾಜಕೀಯ ಮಾಡಿಕೊಂಡು ಬಂದಿದ್ದ ಬೇಳೂರು ಅವರು ಕಾಗೋಡು ತಿಮ್ಮಪ್ಪ ಜೊತೆ ಕೈ ಜೋಡಿಸಿರುವುದು ಬಿಜೆಪಿ ನಾಯಕರಿಗೆ ಅಚ್ಚರಿ ತಂದಿದೆ.
ಕೆಲವು ದಿನಗಳ ಹಿಂದೆ ಬೇಳೂರು ಮತ್ತು ಹರತಾಳು ಹಾಲಪ್ಪ ನಡುವೆ ಸಾಗರ ಕ್ಷೇತ್ರದ ಟಿಕೆಟ್ಗೆ ಪೈಪೋಟಿ ನಡೆದಿತ್ತು. ಬಿಜೆಪಿ ಬೇಳೂರು ಬಿಟ್ಟು ಹಾಲಪ್ಪಗೆ ಮಣೆ ಹಾಕಿತ್ತು. ಆಗಲೇ ಬೇಳೂರು ಮುಂದಿನ ನಡೆ ಏನು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿಗೆ ನಿಷ್ಠರಾಗಿಲ್ಲ ಬೇಳೂರು
ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿಗೆ ನಿಷ್ಠರಾಗಿಲ್ಲ ಎಂಬುದು ಅವರಿಗೆ ಟಿಕೆಟ್ ಕೈ ತಪ್ಪಲು ಕಾರಣ ಎಂಬುದು ಹಲವು ನಾಯಕರ ಅಭಿಪ್ರಾಯ. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬೇಳೂರು ಗೋಪಾಲಕೃಷ್ಣ ರೆಸಾರ್ಟ್ ರಾಜಕೀಯದ ಸಂದರ್ಭದಲ್ಲಿ ಯಡಿಯೂರಪ್ಪ ವಿರೋಧ ಬಣದಲ್ಲಿ ಗುರುತಿಸಿಕೊಂಡಿದ್ದರು.
2013ರ ಚುನಾವಣೆಯ ಸಮಯದಲ್ಲೂ ಅವರನ್ನು ನಾಯಕರು ನಂಬದೆ ಟಿಕೆಟ್ ಕೊಟ್ಟಿರಲಿಲ್ಲ. ಆಗ ಬೇಳೂರು ಗೋಪಾಲಕೃಷ್ಣ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಈ ಬಾರಿ ಪುನಃ ಬಿಜೆಪಿ ಅವರಿಗೆ ಟಕೆಟ್ ನಿರಾಕರಿಸಿದೆ. ಇದರಿಂದಾಗಿ ಬೇಳೂರು ಕಾಂಗ್ರೆಸ್ ಸೇರಿದ್ದಾರೆ.
ಮೊದಲ ಬಾರಿ ಕಾಂಗ್ರೆಸ್ಗೆ
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಶಿಷ್ಯರಾಗಿ ಬೇಳೂರು ಗೋಪಾಲಕೃಷ್ಣ ರಾಜಕೀಯ ಪ್ರವೇಶ ಮಾಡಿದರು. ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದರು. ನಂತರ ಜೆಡಿಎಸ್ ಸೇರಿದರು. ಇದೇ ಮೊದಲ ಬಾರಿಗೆ ಅವರು ಕಾಂಗ್ರೆಸ್ ಸೇರಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ಮಾತ್ರ ಅಂತಿಮವಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಅವರು ಸೇರಿ ಹರತಾಳು ಹಾಲಪ್ಪಗೆ ಸೋಲಿನ ರುಚಿ ತೋರಿಸಲಿದ್ದಾರೆಯೇ? ಕಾದು ನೋಡಬೇಕು.
ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆ
ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ ಮುಂದೇನಾಗಲಿದೆ? ಎಂಬ ಲೆಕ್ಕಾಚಾರ ಆರಂಭವಾಗಿತ್ತು. ಇದರ ಪರಿಣಾಮವೆಂಬಂತೆ ಹಾಲಪ್ಪ ಅವರು ಸೊರಬ ಕ್ಷೇತ್ರ ಬಿಟ್ಟು, ಸಾಗರಕ್ಕೆ ವಲಸೆ ಬಂದರು.
ಹಾಲಪ್ಪ ಮತ್ತು ಬೇಳೂರು ನಡುವೆ ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿತ್ತು. ಅಂತಿಮವಾಗಿ ಹಾಲಪ್ಪ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ಬೇಳೂರು ಕಾಂಗ್ರೆಸ್ ಸೇರಿದ್ದಾರೆ.