ಶಿವಮೊಗ್ಗದ ಸಿಎಂಗಳಿಗೆ ಸಿಗಲಿಲ್ಲ ಪೂರ್ಣಾವಧಿ ಅಧಿಕಾರ; ಯಾರೆಲ್ಲ ಎಷ್ಟು ದಿನ ಅಧಿಕಾರದಲ್ಲಿದ್ದರು?
ಶಿವಮೊಗ್ಗ, ಜುಲೈ 26: ಅಧಿಕ ಸಂಖ್ಯೆಯ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ ಈ ಜಿಲ್ಲೆಯಿಂದ ಆಯ್ಕೆಯಾಗಿ ಹೋಗಿ, ಸಿಎಂ ಆದ ಯಾರೊಬ್ಬರೂ ಪೂರ್ಣಾವಧಿ ಅಧಿಕಾರ ನಡೆಸಲು ಆಗಲಿಲ್ಲ ಎನ್ನುವುದು ಖೇದಕರ. ಇಂದು ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೊಮ್ಮೆ ಅರ್ಧಕ್ಕೆ ಸಿಎಂ ಸ್ಥಾನ ಮೊಟಕಾದಂತಾಗಿದೆ.
ಶಿವಮೊಗ್ಗ ಜಿಲ್ಲೆಯಿಂದ ಕಡಿದಾಳು ಮಂಜಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಕೊಡುಗೆಯೇ ಶಿವಮೊಗ್ಗದ ಹೆಸರಿನಲ್ಲಿದೆ. ಆದರೆ, ಯಾರೂ ಅವಧಿ ಪೂರ್ಣಗೊಳಿಸಿಲ್ಲ.
ಯಡಿಯೂರಪ್ಪ ರಾಜೀನಾಮೆ; ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತ ಬಂದ್
73 ದಿನಕ್ಕಷ್ಟೆ ಸಿಎಂ ಆಗಿದ್ದ ಕಡಿದಾಳು ಮಂಜಪ್ಪ
ಮೈಸೂರು ರಾಜ್ಯವಾಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳು ಮಂಜಪ್ಪ ಮುಖ್ಯಮಂತ್ರಿ ಗಾದಿಗೆ ಏರಿದರು. 1956ರ ಆಗಸ್ಟ್ 19ರಂದು ಸಿಎಂ ಪದವಿಗೇರಿದ ಕಡಿದಾಳು ಮಂಜಪ್ಪ 1956ರ ಅಕ್ಟೋಬರ್ 31ಕ್ಕೆ ಅಧಿಕಾರ ಕಳೆದುಕೊಂಡರು. ಕೇವಲ 73 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದರು.
ಬಂಗಾರಪ್ಪಗೆ ಪೂರ್ಣಾವಧಿ ಅಧಿಕಾರ ಸಿಗಲಿಲ್ಲ
ಸೊರಬ ಶಾಸಕರಾಗಿದ್ದ ಎಸ್. ಬಂಗಾರಪ್ಪ 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾದರು. 1992ರ ನವೆಂಬರ್ 19ರಂದು ರಾಜೀನಾಮೆ ಸಲ್ಲಿಸಿದರು. 2 ವರ್ಷ 33 ದಿನಗಳಷ್ಟೆ ಬಂಗಾರಪ್ಪ ಅವರು ಸಿಎಂ ಗಾದಿಯಲ್ಲಿದ್ದರು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ ಎಸ್. ಬಂಗಾರಪ್ಪ ಅಧಿಕಾರ ತ್ಯಜಿಸಬೇಕಾಯಿತು. ನಿಧನರಾಗುವ ಸ್ವಲ್ಪ ದಿನ ಮುಂಚೆ, ಹಗರಣದ ಆರೋಪದಿಂದ ಬಂಗಾರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.
ಜೆ.ಎಚ್. ಪಟೇಲ್ರಿಗೂ ಸಿಗಲಿಲ್ಲ ಪೂರ್ಣಾವಧಿ
ಕರ್ನಾಟಕದ ವರ್ಣರಂಜಿತ ರಾಜಕಾರಣಿ ಅನಿಸಿಕೊಂಡಿದ್ದ ಜೆ.ಎಚ್. ಪಟೇಲ್ ಚನ್ನಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರು. ಆಗಿನ್ನೂ ಚನ್ನಗಿರಿ ತಾಲೂಕು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. 1996ರ ಮೇ 31ರಂದು ಜೆ.ಎಚ್. ಪಟೇಲ್ ಸಿಎಂ ಆಗಿ ಅಧಿಕಾರ ಆರಂಭಿಸಿದರು. 3 ವರ್ಷ 129 ದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ 7 ಅಕ್ಟೋಬರ್ 1999ರಂದು ಪದತ್ಯಾಗ ಮಾಡಬೇಕಾಯಿತು.
ನಾಲ್ಕು ಬಾರಿ ಸಿಎಂ ಗಾದಿಗೇರಿದ್ದರು ಯಡಿಯೂರಪ್ಪ
ಅತ್ಯಧಿಕ ಭಾರಿ ಸಿಎಂ ಗದ್ದುಗೆ ಮೇಲೆ ಕುಳಿತ ಹಿರಿಮೆ ಬಿ.ಎಸ್.ಯಡಿಯೂರಪ್ಪರದ್ದು. 2007ರ ನವೆಂಬರ್ 12ರಿಂದ 2007ರ ನವೆಂಬರ್ 19ರವರೆಗೆ ಏಳು ದಿನ ಸಿಎಂ ಆಗಿದ್ದರು. ಜೆಡಿಎಸ್ ಪಕ್ಷ ಬೆಂಬಲ ಹಿಂಪಡೆದಿದ್ದರಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದರು.
2008ರಲ್ಲಿ ಬಿಜೆಪಿಗೆ ಬಹುಮತ ಲಭಿಸಿ, ಯಡಿಯೂರಪ್ಪ ಮತ್ತೆ ಸಿಎಂ ಆದರು. 2008ರ ಮೇ 30ರಿಂದ ಮೂರು ವರ್ಷ 66 ದಿನ ಯಡಿಯೂರಪ್ಪ ಅಧಿಕಾರದಲ್ಲಿದ್ದರು. ಆದರೆ ಭ್ರಷ್ಟಾಚಾರ ಆರೋಪ ಸಂಬಂಧ 2011ರ ಆಗಸ್ಟ್ 4ರಂದು ರಾಜೀನಾಮೆ ಸಲ್ಲಿಸಬೇಕಾಯಿತು.
2018ರ ಮೇ 17ರಂದು ಮತ್ತೆ ಸಿಎಂ ಆದ ಬಿ.ಎಸ್. ಯಡಿಯೂರಪ್ಪ ಬಹುಮತ ಇಲ್ಲದೆ ಆರು ದಿನದಲ್ಲಿ, ಅಂದರೆ, 2018ರ ಮೇ 23ರಂದು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಬಳಿಕ 2019ರ ಜುಲೈ 26ರಂದು ಮತ್ತೆ ಅಧಿಕಾರಕ್ಕೇರಿದ ಯಡಿಯೂರಪ್ಪ 2021ರ ಜುಲೈ 26ರಂದು ಪದತ್ಯಾಗ ಮಾಡಬೇಕಾಯಿತು. ಈ ಮೂಲಕ ರಾಜ್ಯಕ್ಕೆ ಅತ್ಯಧಿಕ ಸಿಎಂಗಳನ್ನು ಕೊಟ್ಟರೂ, ಶಿವಮೊಗ್ಗ ಜಿಲ್ಲೆಯವರು ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ ಅನ್ನುವ ಕೊರಗು ಮುಂದುವರೆದಿದೆ.