ಎಷ್ಟು ಸರ್ಕಾರ ಬದಲಾದರೂ ಕರ್ನಾಟಕಕ್ಕೆ ಇವರೇ 'ಮುಖ್ಯಮಂತ್ರಿ'!
ಶಿವಮೊಗ್ಗ, ಸೆಪ್ಟೆಂಬರ್ 07 : ಕರ್ನಾಟಕದಲ್ಲಿ ಎಷ್ಟು ಸರ್ಕಾರ ಬರಲಿ, ಹೋಗಲಿ. ಕರ್ನಾಟಕಕ್ಕೆ ಇವರೇ ಮುಖ್ಯಮಂತ್ರಿ. ಸುಮಾರು 47 ವರ್ಷಗಳಿಂದ ಪ್ರದರ್ಶನ ಕಾಣುತ್ತಿರುವ 'ಮುಖ್ಯಮಂತ್ರಿ' ನಾಟಕ 700ನೇ ಪ್ರದರ್ಶನಕ್ಕೆ ಸಜ್ಜಾಗಿದೆ. ಏಳುನೂರನೇ ಪ್ರದರ್ಶನ ಬೆಂಗಳೂರಿನಲ್ಲಿ ಡಿಸೆಂಬರ್ 4ರಂದು ನಡೆಯಲಿದೆ.
ಶಿವಮೊಗ್ಗದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಈ ಕುರಿತು ಮಾಹಿತಿ ನೀಡಿದರು. 'ಮುಖ್ಯಮಂತ್ರಿ ನಾಟಕ ಕಲಾಗಂಗೋತ್ರಿಯವರಿಂದ ಸುಮಾರು 47 ವರ್ಷಗಳಿಂದ ಪ್ರದರ್ಶನವಾಗುತ್ತಿದೆ. ರಾಜ್ಯ, ದೇಶ, ವಿದೇಶಗಳಲ್ಲೂ ಕೂಡ ಪ್ರದರ್ಶನ ಕಂಡಿದೆ. ಮುಖ್ಯಮಂತ್ರಿ ಪಾತ್ರವನ್ನು ನಾನೇ ಮಾಡುತ್ತಿದ್ದೇನೆ' ಎಂದರು.
'ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲೂ ನಟಿಸಿದ್ದೇನೆ. ಆದರೆ, ರಂಗಭೂಮಿ ನನಗೆ ಅತ್ಯಂತ ತೃಪ್ತಿ ತಂದಿದೆ. ಅದರಲ್ಲೂ 'ಮುಖ್ಯಮಂತ್ರಿ' ನಾಟಕ ದಾಖಲೆಯತ್ತ ಸಾಗಿದೆ. ಇದು ಈಗ 700ನೇ ಪ್ರದರ್ಶನದತ್ತ ದಾಪುಗಾಲು ಹಾಕಿ ಒಬ್ಬರೇ ನಟಿಸಿದ ಗಿನ್ನಿಸ್ ದಾಖಲೆಗೂ ಸಿದ್ದವಾಗಿದೆ' ಎಂದು ಹೇಳಿದರು.
'ರಂಗಭೂಮಿ ಜೀವಂತ ಕಲೆಯಾಗಿದ್ದು, ಇದರಲ್ಲಿ ಸಿಗುವ ಆನಂದ ಮತ್ತೆ ಯಾವುದೇ ಕ್ಷೇತ್ರದಲ್ಲಿಯೂ ಸಿಗಲಾರದು. ಕಿರುತೆರೆ, ಸಿನೆಮಾ ಈ ಎಲ್ಲ ಕ್ಷೇತ್ರಗಳಿಗಿಂತ ನಾಟಕ ಕ್ಷೇತ್ರ ಬಹಳ ಮುಖ್ಯವಾದುದು. ಇದು ತಾಯಿ ಬೇರು ಇದ್ದಂತೆ. ಇದು ಬದುಕನ್ನು ಕಲಿಸಿಕೊಡುತ್ತದೆ. ಇದರಲ್ಲಿ ಸಿಗುವ ಆನಂದ ಅಪರಿಮಿತವಾದುದು' ಎಂದು ಮುಖ್ಯಮಂತ್ರಿ ಚಂದ್ರು ಬಣ್ಣಿಸಿದರು.
ಶಾಶ್ವತ ಮುಖ್ಯಮಂತ್ರಿಯಾದೆ
'ಮುಖ್ಯಮಂತ್ರಿ' ಎಂಬ ಹೆಸರು ಚಂದ್ರಶೇಖರನಾದ ನನಗೆ ಅಂಟಿಕೊಂಡ ಬಗೆಯೇ ಸ್ವಾರಸ್ಯಕರವಾದುದು. ವಿವಿಧ ಹೆಸರುಗಳನ್ನು ದಾಟಿ ಮುಖ್ಯಮಂತ್ರಿ ಎಂಬ ನಾಟಕದಲ್ಲಿ ಪಾತ್ರ ಮಾಡಿ ಜನಪ್ರೀಯವಾದ್ದರಿಂದ ಈ ಹೆಸರು ನನ್ನ ಹೆಸರಿನ ಜೊತೆಗೆ ಅಂಟಿಕೊಂಡು ಸದನದಲ್ಲಿ ಇದು ಪ್ರಸ್ತಾಪವಾಗಿತ್ತು. ಜೆ.ಹೆಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ಹೆಸರಿನ ಜೊತೆಗೆ ಮುಖ್ಯಮಂತ್ರಿ ಎಂಬುದನ್ನು ಸೇರಿಸಿ ಮುಖ್ಯಮಂತ್ರಿ ಚಂದ್ರು ಎಂದು ಗೆಜೆಟ್ ನೊಟಿಫಿಕೇಷನ್ ಮಾಡಿದರು. ನಂತರ ನಾನು ಶಾಶ್ವತ ಮುಖ್ಯಮಂತ್ರಿಯಾದೆ' ಎಂದು ಹೇಳಿದರು.
ಮುಖ್ಯಮಂತ್ರಿ ಪಾತ್ರ ಒಬ್ಬರೇ ಮಾಡಿದ್ದಾರೆ
'ಮುಖ್ಯಮಂತ್ರಿ' ನಾಟಕದಲ್ಲಿ ಸುಮಾರು 24 ಪಾತ್ರಗಳಿವೆ. ಆದರೆ, ಹಲವು ಪಾತ್ರಧಾರಿಗಳು ತೀರಿಹೋಗಿದ್ದಾರೆ. ಕೆಲವರಿಗೆ ವಯಸ್ಸಾಗಿದೆ. ಹೀಗಾಗಿ ಹಲವು ಪಾತ್ರಧಾರಿಗಳು ಬದಲಾಗಿದ್ದಾರೆ. 24 ಪಾತ್ರಗಳಿದ್ದರೂ ಸುಮಾರು 200ಕ್ಕೂ ಹೆಚ್ಚು ಜನರು ಈ ಪಾತ್ರಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಪಾತ್ರದಲ್ಲಿ ಮಾತ್ರ ಇನ್ನೂ ಮುಖ್ಯಮಂತ್ರಿ ಚಂದ್ರು ನಟಿಸುತ್ತಿದ್ದಾರೆ.
ಇದೊಂದು ರಾಜಕೀಯ ವಿಡಂಬನೆ ನಾಟಕವಾಗಿದ್ದು ಎಲ್ಲ ಕಾಲಕ್ಕೂ ಸಲ್ಲುತ್ತದೆ. ಈ ರಾಜ್ಯದ ಸುಮಾರು 13 ಮುಖ್ಯಮಂತ್ರಿಗಳು ಈ ನಾಟಕವನ್ನು ನೋಡಿ ಮೆಚ್ಚಿದ್ದಾರೆ. ಹಲವು ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನದನ್ನು ಸೇರಿಸಬೇಕಿತ್ತು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನಲ್ಲಿ ಪ್ರದರ್ಶನ
'ಮುಖ್ಯಮಂತ್ರಿ' ನಾಟಕ ಸೆ.8 ರಂದು ಶೃಂಗೇರಿಯಲ್ಲಿ, 9ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಡಾ.ಬಿ.ವಿ.ರಾಜಾರಾಂ ನಾಟಕವನ್ನು ನಿರ್ದೇಶನ ಮಾಡಿದ್ದು, ಮಂಜುನಾಥ್ ಹೆಗ್ಡೆ, ಶ್ರೀನಿವಾಸ್ ಮೇಸ್ಟ್ರು, ಮುರುಳೀಧರ್, ಗಂಗೋತ್ರಿ ಮಂಜು ಸೇರಿದಂತೆ ಹಲವರು ಅಭಿನಯಿಸಲಿದ್ದಾರೆ.
'ರಂಗಭೂಮಿಗೆ ಯಾವುದೇ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡಿಲ್ಲ. ಪ್ರವಾಸೋದ್ಯಮ ಇಲಾಖೆಯನ್ನು ಕಡೆಗಣಿಸಿದಂತೆ ಇದನ್ನು ಕಡೆಗಣಿಸಲಾಗಿದೆ. ಇದೊಂದು ಬೇಸರದ ಸಂಗತಿ. ಇನ್ನಾದರೂ ಸರ್ಕಾರ ರಂಗಭೂಮಿಗೆ ಆದ್ಯತೆ ಕೊಡಬೇಕು ಮತ್ತು ಕಲಾವಿದರ ನೆರವಿಗೆ ಬರಬೇಕೆಂದು' ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.
ಚುನಾವಣಾ ರಾಜಕಾರಣಕ್ಕೆ ಹೋಗಲಾರೆ
'ಬಿಜೆಪಿ ಬಿಡಲು ಹಲವು ಕಾರಣವಿದೆ. ಆದರೆ, ಅವೆಲ್ಲವನ್ನು ನಾನು ಹೇಳಲಾರೆ. ಯಾರನ್ನು ಟೀಕೆ ಮಾಡುವುದಿಲ್ಲ. ಭಿನ್ನಾಭಿಪ್ರಾಯ ಬಂತು ಮತ್ತು ಕೆಲವು ಸಿದ್ದಾಂತಗಳಿಂದ ನಾನು ಆಚೆ ಇದ್ದೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದೆನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಪೇಕ್ಷೆಪಟ್ಟರೆ ಪ್ರಚಾರಕ್ಕೂ ಹೋಗುತ್ತೇನೆ. ಆದರೆ, ಎಂದೂ ಚುನಾವಣಾ ರಾಜಕಾರಣಕ್ಕೆ ಹೋಗುವುದಿಲ್ಲ' ಎಂದು ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು.