ಒಂದೇ ಗುಡಿಯಲ್ಲಿ ಕಾಳಿ, ಈಶ್ವರ; ಶಿವಮೊಗ್ಗದಲ್ಲಿದೆ ಈ ಅಪರೂಪದ ದೇಗುಲ
ಶಿವಮೊಗ್ಗ, ಜನವರಿ 14: ನಿಸರ್ಗದ ಮಡಿಲಲ್ಲಿ ನೆಲೆಸಿರುವ ಕಾಳಿಕಾಂಬ ಕಮಟೇಶ್ವರ ದೇವಸ್ಥಾನ ತನ್ನ ಇತಿಹಾಸದಿಂದಷ್ಟೇ ಅಲ್ಲ, ಭಕ್ತರ ಸಂಕಷ್ಟ ನಿವಾರಣೆಗೂ ಪ್ರಸಿದ್ಧಿ. ಕಾಳಿ ದೇವಿ, ಈಶ್ವರ ಒಂದೇ ಕಡೆ ಇರುವುದು ಈ ದೇಗುಲದ ವೈಶಿಷ್ಟ್ಯ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶ್ಯಾಡಲಕೊಪ್ಪ ಎಂಬ ಗ್ರಾಮದ ಬೆಟ್ಟದ ಬಳಿ ಇರುವ ಈ ಪುರಾತನ ಪ್ರಸಿದ್ಧ ಶಿಲಾಯುಗ ಕಾಲದ ಕಾಳಿಕಾಂಬ ಕಮಟೇಶ್ವರ ದೇವಸ್ಥಾನ ಹತ್ತು ಹಲವು ವಿಶೇಷತೆಗಳನ್ನು ಪಡೆದುಕೊಂಡಿದೆ.
ಶ್ಯಾಡಲಕೊಪ್ಪ ಹೆಸರೇಕೆ ಬಂತು?
ಮಲೆನಾಡಿನ ಶಿವಮೊಗ್ಗ ಅನೇಕ ರಾಜ ಮಹಾರಾಜರ ಆಳ್ವಿಕೆಯನ್ನು ಕಂಡಿದೆ. ಕೆಳದಿ ಶಿವಪ್ಪನಾಯಕ ಚನ್ನಮ್ಮ ದೇವಿ, ಮಯೂರ ವರ್ಮನ ಜನ್ಮಸ್ಥಳ ಕೂಡ. ಹತ್ತು ಹಲವಾರು ರಾಜರ ಸಣ್ಣ ಸಣ್ಣ ಸಂಸ್ಥಾನಗಳನ್ನು ಕಂಡಿದೆ. ಶಿಲಾಯುಗದಲ್ಲಿ ಚಿತ್ತ ಅರಸ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದು, ಶ್ಯಾಡಲ ಎಂಬ ಋಷಿಗೆ ಚಿತ್ತ ಅರಸ ಈ ದೇವಾಲಯ ಕಟ್ಟಿಸಿಕೊಟ್ಟ ಎಂಬ ಪ್ರತೀತಿ ಇದೆ. ಹೀಗಾಗೇ ಈ ಗ್ರಾಮಕ್ಕೆ ಶ್ಯಾಡಲಕೊಪ್ಪ ಎಂಬ ಹೆಸರು ಬಂದಿದೆ. ಚಿತ್ತ ಅರಸ ಆಳ್ವಿಕೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಿಟ್ಟೂರು ಎಂಬ ಹೆಸರು ಬಂದಿದೆ ಎಂದು ಮಾಹಿತಿ ನೀಡುತ್ತಾರೆ ಗ್ರಾಮಸ್ಥರು. ಆದರೆ ಯಾರೂ ಈ ಬಗ್ಗೆ ಅಧ್ಯಯನ ನಡೆಸಿಲ್ಲ.
ಕೊರಳಿಗೆ ಹಾವು ಸುತ್ತಿಕೊಂಡು ದೇವಸ್ಥಾನ ಪ್ರವೇಶಿಸಿದ ಮಹಿಳೆ
ಊರಿಗೆ ತಟ್ಟಿದ್ದ ಭೀಕರ ಬರಗಾಲ
ಸುಮಾರು 60-70 ವರ್ಷಗಳ ಹಿಂದೆ ಭೀಕರ ಬರಗಾಲದಿಂದ ಈ ಗ್ರಾಮದಲ್ಲಿ ವಾಸವಿದ್ದ ನೂರಾರು ಜನರು ಊರನ್ನು ಬಿಟ್ಟು ಹೋದರು. ದೇವಸ್ಥಾನ ಪೂಜೆ ಕೂಡ ನಿಂತುಹೋಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ದೇವಿಯನ್ನು ಬೇಡಿಕೊಂಡು ಪೂಜಾ ಕಾರ್ಯವನ್ನು ಆರಂಭಿಸಿದ ಮೇಲೆ ಬಂಜರು ಭೂಮಿಯಲ್ಲೂ ನೀರು ಉಕ್ಕಲು ಆರಂಭವಾಯಿತು. ಇದರಿಂದ ದೇವಿಯ ಭಕ್ತರು ಹೆಚ್ಚಾದರು. ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನರು ದೇವಸ್ಥಾನಕ್ಕೆ ಬರಲು ಆರಂಭಿಸಿದರು.
ಕಾಳಿ, ಕಮಟೇಶ್ವರ ಒಟ್ಟಿಗೆ ಇರುವುದೇ ಅಪರೂಪ
ಕಾಳಿಯ ರೌದ್ರತೆ ಮುಂದೆ ಸಾಕ್ಷಾತ್ ಪರಮೇಶ್ವರನೇ ತಲೆಬಾಗುತ್ತಾನೆ ಎಂಬ ಕಥೆಯನ್ನು ಓದಿದ್ದೇವೆ. ಆದರೆ ಈ ಕ್ಷೇತ್ರದಲ್ಲಿ ಕಾಳಿಕಾಂಬ ದೇವಿಯ ಜೊತೆಯಲ್ಲಿ ಕಮಟೇಶ್ವರ ದೇವರು ಇರುವುದು ಅಪರೂಪವೆನಿಸಿದೆ. ಈ ರೀತಿಯ ದೇವಾಲಯ ಎಲ್ಲಿಯೂ ಸಿಗುವುದಿಲ್ಲ ಎನ್ನುತ್ತಾರೆ ದೇವಿಯ ಆರ್ಚಕರು.
ಒಂದೇ ದಿನ ಶಿರಡಿ ಸಾಯಿ ಬಾಬಾ ದೇವಸ್ಥಾನದ ಹುಂಡಿಗೆ 16 ಕೋಟಿ
ಇಲ್ಲಿನ ಅರ್ಚಕರು 15 ವರ್ಷಗಳಿಂದ ದೇವಿಯ ಪೂಜೆಯಲ್ಲಿ ನಿರತರಾಗಿದ್ದು, ಒಂದು ರೂಪಾಯಿ ಹಣವನ್ನು ಕೈಯಿಂದ ಮುಟ್ಟುವುದಿಲ್ಲ ಹಾಗೂ ದೇವಾಲಯವನ್ನು ಬಿಟ್ಟು ಹೊರಗೆ ಎಲ್ಲೂ ಹೋಗುವುದಿಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ರಥ ಊರಿನ ಒಳಗೆ ಹೋಗುವುದರಿಂದ ಅದರ ಜೊತೆ ಹೋಗುತ್ತಾರೆ.
ದೇವಿಯ ಅರಣ್ಯ ಇಂದಿಗೂ ಹಸಿರು
ಮಲೆನಾಡಿನ ಬಹುತೇಕ ಅರಣ್ಯ ಬೆಟ್ಟಗುಡ್ಡಗಳು ಬಗರ್ ಹುಕಂ ಹೆಸರಿನಲ್ಲಿ ನಾಶವಾಗುತ್ತಿವೆ. ಈ ಗ್ರಾಮವೂ ಇದಕ್ಕೆ ಹೊರತಲ್ಲ. ಆದರೆ ಕಾಳಿ ದೇವಿಯ ಆಸ್ಥಾನ ಇರುವ ಈ ಕಾಡನ್ನು ಯಾರೂ ಕಡಿಯುವ ಧೈರ್ಯ ಮಾಡಿಲ್ಲ. ದೇವಿಯ ಮೇಲಿನ ಭಕ್ತಿಯಿಂದಲೋ ಭಯದಿಂದಲೋ ಕಾಡು ಮಾತ್ರ ಇಂದಿಗೂ ಹಚ್ಚ ಹಸಿರಾಗೇ ಇದೆ. ದೇವಸ್ಥಾನ ಮುಂಭಾಗದ ಪುಷ್ಕರಣಿಗೆ ಇಂದಿಗೂ ಹುಲಿ, ಚಿರತೆ, ಕರಡಿ, ನವಿಲು ಹೀಗೆ ಅನೇಕ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತವೆ ಎನ್ನುತ್ತಾರೆ ಗ್ರಾಮಸ್ಥರು.
ಈ ಅಪರೂಪದ ದೇವಸ್ಥಾನದ ಅಭಿವೃದ್ಧಿಗೆ ಆಡಳಿತ ಮಂಡಳಿ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಇಂದಿಗೂ ಈ ಗ್ರಾಮ ಡಾಂಬರ್ ರಸ್ತೆ ಕಂಡಿಲ್ಲ. ದೇವಸ್ಥಾನದ ಕಟ್ಟಡವೂ ಶಿಥಿಲವಾಗಿದ್ದು, ಇದರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.