ಮುಂದೆ ಸಾಗದ ಕಡತ: ಸರ್ವ ಋತು ಜೋಗ ಜಲಪಾತ ಯೋಜನೆಗೆ ಹಿನ್ನಡೆ?
ಬೆಂಗಳೂರು, ಜೂನ್ 25: ಜೋಗವನ್ನು ಸರ್ವ ಋತು ಜಲಪಾತವನ್ನಾಗಿಸುವ ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತೀವ್ರ ಹಿನ್ನಡೆಯುಂಟಾಗಿದೆ.
ಜೋಗ ಜಲಪಾತದ ಕಡೆಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು ವರ್ಷದ 365 ದಿನವೂ ಜೋಗ ತನ್ನ ವೈಭವವನ್ನು ಉಳಿಸಿಕೊಳ್ಳುವಂತಹ 'ಸರ್ವ ಋತು ಜಲಪಾತ' ಯೋಜನೆಯನ್ನು ರೂಪಿಸಿತ್ತು.
ವರ್ಷಪೂರ್ತಿ ಜೋಗ ವೈಭವ : ಏನಿದು ಯೋಜನೆ?
ಆದರೆ, ಈ ಯೋಜನೆಯ ನಿರ್ವಹಣೆ ಮಾಡಲು ಒಪ್ಪಿಕೊಂಡಿದ್ದ ಕರ್ನಾಟಕದ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಅವರ ಬಿಆರ್ಎಸ್ ವೆಂಚರ್ಸ್ ಇಂಡಿಯಾ ಸಂಸ್ಥೆಯು ಸರ್ಕಾರದೊಂದಿಗಿನ ಒಪ್ಪಂದದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಜೋಗ ಅಭಿವೃದ್ಧಿಗೆ 700 ಕೋಟಿ ಹೂಡಿಕೆ ಮಾಡಲಿದ್ದಾರೆ ಬಿ.ಆರ್.ಶೆಟ್ಟಿ
ಸರ್ಕಾರದ ವಿಳಂಬ ಧೋರಣೆಯಿಂದ ಬೇಸೆತ್ತು ಸಂಸ್ಥೆಯು ಒಪ್ಪಂದ ಮುರಿದುಕೊಳ್ಳಲು ಮುಂದಾಗಿದೆ. ಇದರಿಂದ ಖಾಸಗಿ ಸಂಸ್ಥೆಯ ಮೂಲಕ ಜೋಗವನ್ನು ಅಭಿವೃದ್ಧಿಪಡಿಸುವ ಬೃಹತ್ ಯೋಜನೆ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಹೇಳಲಾಗಿದೆ.
450 ಕೋಟಿ ರೂಪಾಯಿ ಯೋಜನೆ
ಸುಮಾರು 450 ಕೋಟಿ ರೂಪಾಯಿ ಹೂಡಿಕೆಯ ಯೋಜನೆಗೆ 2016ರ ಆಗಸ್ಟ್ನಲ್ಲಿ ಸಚಿವ ಸಂಪುಟದ ಒಪ್ಪಿಗೆ ದೊರೆತಿತ್ತು.
ಈ ಯೋಜನೆಗೆ ಪರಿಸರವಾದಿಗಳು ಮತ್ತು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಎದುರಾಗಿರುವುದರಿಂದ ಸರ್ಕಾರ ನಿಧಾನಗತಿಯಲ್ಲಿ ಅದನ್ನು ಮುಂದುವರಿಸಲು ಮುಂದಾಗಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜೋಗ ಜಲಪಾತವನ್ನು ವರ್ಷಪೂರ್ತಿ ವೈಭವಯುತವಾಗಿ ಇರುವಂತೆ ಮಾಡುವ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಿಆರ್ಎಸ್ ವೆಂಚರ್ಸ್ ಇಂಡಿಯಾದೊಂದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಸರ್ಕಾರದಿಂದಲೇ ಅರ್ಜಿ
ನಿಯಮದ ಪ್ರಕಾರ ಇಲ್ಲಿ ಯೋಜನೆಯ ಕಾಮಗಾರಿಗಳನ್ನು ನಡೆಸುವ ಕಂಪೆನಿಯೇ ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಿತ್ತು.
ಆದರೆ, ಕಂಪೆನಿಯ ಪರವಾಗಿ ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆ ಪಡೆದುಕೊಳ್ಳುವುದಕ್ಕಾಗಿ ಸ್ವತಃ ಮನವಿ ಸಲ್ಲಿಸಲು 2017ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಅನೇಕ ಕಾರಣಗಳಿಂದ ಆ ಕಡತ ಮುಂದುವರಿಯುವುದು ವಿಳಂಬವಾಗಿದೆ. ರಾಜ್ಯ ಸರ್ಕಾರದ ಕಚೇರಿ ಮತ್ತು ಕೇಂದ್ರದ ಕಚೇರಿಗಳಲ್ಲಿ ಕಡತ ಮುಂದಕ್ಕೆ ಸಾಗುತ್ತಿಲ್ಲ.
ಪರಿಸರವಾದಿಗಳ ವಿರೋಧ ಸಾಧ್ಯತೆ
ಜೋಗ ಜಲಪಾತದ ಸುತ್ತಲಿನ ಸುಮಾರು 120 ಎಕರೆ ಪ್ರದೇಶವನ್ನು ಬಿಆರ್ಎಸ್ ವೆಂಚರ್ಸ್ ಸಂಸ್ಥೆಗೆ ಹಸ್ತಾಂತರಿಸಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ವಿರೋಧದ ಬಗ್ಗೆ ಜೋಗ ಅಭಿವೃದ್ಧಿ ಪ್ರಾಧಿಕಾರ (ಜೆಎಂಎ) ಕಳವಳ ಹೊಂದಿದೆ ಎನ್ನಲಾಗಿದೆ.
ಜೋಗದ ಸುತ್ತಮುತ್ತಲಿನ ಪ್ರಮುಖವಾದ ಜಮೀನನ್ನು ಸಂಸ್ಥೆಗೆ ನೀಡಬೇಕಿದೆ. ಆದರೆ ಇದು ಪರಿಸರವಾದಿಗಳು ಮತ್ತು ಸ್ಥಳೀಯರ ಗಂಭೀರ ಪ್ರತಿಭಟನೆಗೆ ಗುರಿಯಾಗುವ ಆತಂಕವಿದೆ ಎಂದು ಮೂಲಗಳು ತಿಳಿಸಿವೆ.
ಈ ಕಾರಣದಿಂದಲೇ ತರಾತುರಿಯ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿರಲಿಲ್ಲ. ಸಂಪುಟದ ಅನುಮೋದನೆ ದೊರೆತು ಎರಡು ವರ್ಷವಾದರೂ ಯೋಜನೆ ಕಾರ್ಯರೂಪಕ್ಕೆ ಬಾರದ ಕಾರಣ ಸಂಸ್ಥೆ ಅದರಿಂದ ಹೊರಕ್ಕೆ ಬರಲು ತೀರ್ಮಾನಿಸಿದೆ.
ಇನ್ನೂ ಹೊರಬಂದಿಲ್ಲ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಗಾಗಿ ಮನವಿ ಸಲ್ಲಿಸಲಾಗಿದೆ. ಪರಿಸರ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ಆದರೆ, ಎರಡೂ ಕಡೆಗಳಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಆದರೆ, ಯೋಜನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಪರಿಸರ ಇಲಾಖೆಯ ಅನುಮತಿ ದೊರಕುವವರೆಗೂ ಕಾಯುವುದಾಗಿ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಜೋಗ ಅಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದೆಂಬ ಷರತ್ತಿನ ಅಡಿಯಲ್ಲಿ ಇದರ ಅಭಿವೃದ್ಧಿ ಕಾರ್ಯಕ್ಕೆ ಬಿಆರ್ ಸಮೂಹದ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಯೋಜನೆಯಲ್ಲಿ ಏನೇನಿದೆ?
ಬೇಸಿಗೆಯಲ್ಲಿ ಬತ್ತುವ ಜೋಗ ಜಲಪಾತದಲ್ಲಿ ಸರ್ವ ಋತುಗಳಲ್ಲಿಯೂ ಜಲಧಾರೆ ಇರುವಂತೆ ನೋಡಿಕೊಳ್ಳುವುದು. ಜೋಕಕ್ಕೆ ಸಂಪರ್ಕ ಕಲ್ಪಿಸುವ ಅಪಾಯಕಾರಿ ತಿರುವು, ಹೊಂಡಗುಂಡಿಗಳಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಜೋಗದ ಸುತ್ತಮುತ್ತ ಅಚ್ಚುಕಟ್ಟಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು. ಸೌರವಿದ್ಯುತ್ ಉತ್ಪಾದನಾ ಘಟಕ, ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ನಿರ್ಮಾಣ. ಲಘು ವಿಮಾನ ನಿಲ್ದಾಣ, ಹೆಲಿಪ್ಯಾಡ್, ಸೆವೆನ್ ಸ್ಟಾರ್ ಕಾಟೇಜ್, ಬೃಹತ್ ಕಾರಂಜಿ ಮುಂತಾದವುಗಳ ನಿರ್ಮಾಣ ಈ ಯೋಜನೆಯಲ್ಲಿ ಒಳಗೊಂಡಿದೆ.
ಸರ್ವ ಋತು ನೀರು ಹೇಗೆ?
ಲಿಂಗನಮಕ್ಕಿ ಅಣೆಕಟ್ಟು ಮತ್ತು ಜಲಪಾತದ ಮಧ್ಯೆ ಬರುವ ಸಾಗರ ತಾಲ್ಲೂಕಿನ ಸೀತಾಕಟ್ಟೆಯ ಸೇತುವೆ ಸಮೀಪ ಹೊಸದಾಗಿ ಅಣೆಕಟ್ಟು ನಿರ್ಮಿಸುವ ಮೂಲಕ ಶರಾವತಿ ನದಿಯ ನೀರನ್ನು ಸಂಗ್ರಹಿಸುವುದು. ಇದರಿಂದ ಜಲಪಾತಕ್ಕೆ ಬೇಸಿಗೆಯಲ್ಲಿಯೂ ನೀರು ಇರುವಂತೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹಿಸಿಕೊಳ್ಳಬಹುದು. ನವೆಂಬರ್ನಿಂದ ಜೂನ್ವರೆಗೂ ಜಲಪಾತ ಭೋರ್ಗರೆಯುತ್ತ ಧುಮ್ಮಿಕ್ಕುವಂತೆ ಮಾಡಬಹುದು.
ಈ ಯೋಜನೆಗೆ ಕಳೆದ ವರ್ಷ ನಡೆದ ನದಿ ಕಣಿವೆ ಮತ್ತು ಜಲವಿದ್ಯುತ್ ಯೋಜನೆಗಳ ನಿಷ್ಕರ್ಷ ಸಮಿತಿ ತಾತ್ಕಾಲಿಕವಾಗಿ ತಡೆ ನೀಡಿತ್ತು.
ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಈ ಯೋಜನೆ ಆಕ್ಷೇಪಗಳು ವ್ಯಕ್ತವಾಗಿವೆ. ಇದರಿಂದ ಪರಿಸರದ ಮೇಲೆ ತೀವ್ರ ಅಪಾಯ ಉಂಟಾಗುವುದಲ್ಲದೆ ಅರಣ್ಯ ನಾಶವಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.
ನೀರು ಸಂಗ್ರಹಿಸುವುದು ಹೇಗೆ?
ಬೇಸಿಗೆಯಲ್ಲಿ ಶರಾವತಿ ನದಿ ಅಣೆಕಟ್ಟೆಗೆ ನೀರಿನ ಒಳಹರಿವು ಕಡಿಮೆ ಇರುವ ಕಾರಣ ಜೋಗ ಜಲಪಾತಕ್ಕೆ ನೀರು ಹರಿಸುವುದಿಲ್ಲ. ಹೀಗಾಗಿ ಲಭ್ಯವಿರುವ ನೀರನ್ನೇ ಮರುಬಳಕೆ ಮಾಡಿಕೊಂಡು ಜಲಪಾತದ ಸೊಬಗನ್ನು ಬೇಸಿಗೆಯಲ್ಲಿಯೂ ಉಳಿಸಿಕೊಳ್ಳುವುದು ಈ ಯೋಜನೆಯ ಗುರಿ.
ಇಲ್ಲಿ ಬೀಳುವ ಸುಮಾರು 400 ಕ್ಯೂಸೆಕ್ ನೀರನ್ನು 330 ಮೀಟರ್ ಎತ್ತರಕ್ಕೆ ಪಂಪ್ ಮಾಡಿ ಸೀತಾ ಕಟ್ಟೆಯ ಅಣೆಕಟ್ಟೆಗೆ ತುಂಬಿಸಲಾಗುತ್ತದೆ. ನೀರನ್ನು ಮೇಲೆತ್ತಲು ಸುಮಾರು 3.2 ಕಿ.ಮೀ ದೂರದವರೆಗೆ ಪೈಪ್ಲೈನ್ ನಿರ್ಮಿಸಬೇಕಿದೆ. ಅದರಲ್ಲಿ ಒಂದು ಕಿ.ಮೀ. ಸುರಂಗ ಮಾರ್ಗ ಕೊರೆಯುವ ಅಗತ್ಯವಿದೆ. ನೀರನ್ನು ಪಂಪ್ ಮಾಡಲು 74 ದಶಲಕ್ಷ ಯುನಿಟ್ ವಿದ್ಯುತ್ ಬೇಕು.