ವಿಧಾನಸಭೆಗೆ ಶಿಫ್ಟ್ ಆದ ಕಿಮ್ಮನೆ-ಮಂಜುನಾಥ ಗೌಡ ಸಂಘರ್ಷ
ಬೆಂಗಳೂರು, ಫೆಬ್ರವರಿ 22: ಕಾಂಗ್ರೆಸ್ ತೊರೆದು ಇತ್ತೀಚೆಗೆ ಜೆಡಿಎಸ್ ಸೇರಿ ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಆರ್.ಎಂ. ಮಂಜುನಾಥ ಗೌಡ ಮತ್ತು ಹಾಲಿ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡುವಿನ ಕದನ ವಿಧಾನಸಭೆಗೆ ವರ್ಗಾವಣೆಯಾಗಿದೆ.
ಬುಧವಾರದ ವಿಧಾನಸಭೆ ಕಲಾಪದ ವೇಳೆ, ಮಂಜುನಾಥ ಗೌಡರು ಆರೋಪಿಯಾಗಿರುವ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಹುಕೋಟಿ ಚಿನ್ನದ ಸಾಲ ಹಗರಣವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಆಡಳಿತರೂಢ ಕಾಂಗ್ರೆಸ್ ಒತ್ತಾಯಿಸಿತು. ಆದರೆ ತಮ್ಮ ಪಕ್ಷದ ಸದಸ್ಯನನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಜೆಡಿಎಸ್ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಲಾಪದಲ್ಲಿ ಕಾವೇರಿದ ವಾತಾವರಣ ಕಂಡು ಬಂತು.
ಯಡಿಯೂರಪ್ಪ ಇಂದಿಗೂ ಆತ್ಮೀಯರು : ಆರ್.ಎಂ.ಮಂಜುನಾಥ ಗೌಡ ಸಂದರ್ಶನ
ವಂಚನೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಮತ್ತು ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಬೇಕು ಎಂದು ಕಿಮ್ಮನೆ ರತ್ನಾಕರ್ ಕಲಾಪದಲ್ಲಿ ಒತ್ತಾಯಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ವಿಚಾರವನ್ನು ಸದನದಲ್ಲಿ ಚರ್ಚೆಗೆ ಎತ್ತಿಕೊಂಡ ಕಿಮ್ಮನೆ ರತ್ನಾಕರ್, ಅವತ್ತಿನ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡರ ಜತೆ ಸೇರಿ ಬ್ಯಾಂಕ್ ಸಿಬ್ಬಂದಿಗಳು ನಕಲಿ ಚಿನ್ನಕ್ಕೆ, ಕೆಲವು ಪ್ರಕರಣಗಳಲ್ಲಿ ಚಿನ್ನವನ್ನು ಅಡವೇ ಇಡದೆ ಸಾಲವನ್ನು ನೀಡಿದ್ದಾರೆ. "ಇದೊಂದು ದೊಡ್ಡ ಹಗರಣವಾಗಿದ್ದು. ಇದನ್ನು ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು. ಮತ್ತು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು," ಎಂದು ಒತ್ತಾಯಿಸಿದರು.
ಕಿಮ್ಮನೆ ರತ್ನಾಕರ್ ಅವರಿಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ: ಸಿಎಂ
ಆದರೆ ಜನವರಿಯಲ್ಲಿ ತಮ್ಮ ಪಕ್ಷ ಸೇರಿದ ಗೌಡರನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಜೆಡಿಎಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು. "ಪ್ರಕರಣದ ನ್ಯಾಯಾಲಯದಲ್ಲಿರುವುದರಿಂದ ಸದನದಲ್ಲಿ ಈ ಕುರಿತು ಮಾತನಾಡಲು ಅವಕಾಶ ನೀಡಬಾರದು," ಎಂದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ವಾದಿಸಿದರು.
ಜತೆಗೆ, "ಕಾಂಗ್ರೆಸ್ ಯಾಕೆ ಇಲ್ಲಿಯವರೆಗೆ ಪ್ರಕರಣದ ಬಗ್ಗೆ ಮೌನವಾಗಿತ್ತು ಮತ್ತು ಪ್ರಕರಣವನ್ನು ಈಗ ಯಾಕೆ ಎತ್ತಿಕೊಂಡಿದೆ?" ಎಂದು ಅವರು ಪ್ರಶ್ನಿಸಿದರು.
"ಪ್ರಾಥಮಿಕ ತನಿಖೆಯಲ್ಲಿ ಚಿನ್ನದ ಸಾಲದಲ್ಲಿ ನಿಯಮಗಳು ಪಾಲಿಸದೆ ಸಾಲ ನೀಡಿರುವುದರಿಂದ ಬ್ಯಾಂಕಿಗೆ ರೂ. 62 ಕೋಟಿ ನಷ್ಟವಾಗಿದೆ," ಎಂದು ರೇವಣ್ಣ ವಾದಿಸಿದರು.
"2014ರ ಜುಲೈನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬ್ಯಾಂಕ್ ನ ಜನರಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿ ದೊಡ್ಡ ಮಟ್ಟದ ಹಗರಣ ನಡೆದಿರುವುದಾಗಿ ಹೇಳಿದ್ದರು," ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿಬಿ ಜಯಚಂದ್ರ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಹಗರಣದ ತನಿಖೆ ಸಂದರ್ಭದಲ್ಲಿ ಪೊಲೀಸರು ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು. ಬೇರೆ ಬೇರೆ ಆಸ್ತಿಗಳ ಮೇಲೆ ಅಕ್ರಮ ಹೂಡಿಕೆ ಮಾಡಿದ್ದರ ದಾಖಲೆಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಹಗರಣದ ತನಿಖೆಯನ್ನು ಸಹಕಾರ ಸಚಿವರು ಸಿಐಡಿಗೆ ನೀಡಿದ್ದರು. ಪ್ರಕರಣದಲ್ಲಿ ಮಂಜುನಾಥ ಗೌಡ ಸೇರಿ 18 ಜನರನ್ನು ಬಂಧಿಸಲಾಗಿತ್ತು ಎಂದು ಸದನದಲ್ಲಿ ಮಾಹಿತಿ ನೀಡಿದರು.