ಶಿವಮೊಗ್ಗ; ಜೆಡಿಎಸ್ ಸಭೆ, ನಿಖಿಲ್ ಮತ್ತು ಪ್ರಜ್ವಲ್ ಕರೆಸಲು ಒತ್ತಾಯ!
ಶಿವಮೊಗ್ಗ, ಫೆಬ್ರವರಿ 19; ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಂಜುನಾಥ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕರೆಸುವಂತೆ ಒತ್ತಾಯಿಸಲಾಯಿತು.
ಶುಕ್ರವಾರ ಶಿವಮೊಗ್ಗ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾಧ್ಯಕ್ಷರ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕು, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಮೈಸೂರು ಮೇಯರ್ ಚುನಾವಣೆ; ಕಾಂಗ್ರೆಸ್, ಜೆಡಿಎಸ್ ಮೈತ್ರಿ?
ಮಾಜಿ ಸಚಿವ ಬಿ. ಬಿ. ನಿಂಗಯ್ಯ ನೇತೃತ್ವದಲ್ಲಿ ಜೆಡಿಎಸ್ ಜಿಲ್ಲಾ ಕಚೇರಿ ಗಾಂಧಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರು ಆಕ್ರೋಶಗೊಂಡರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರಿಗೆ ಜಿಲ್ಲಾ ಜೆಡಿಎಸ್ನ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.
ಉಪ ಚುನಾವಣೆಯಿಂದ ಜೆಡಿಎಸ್ ಹಿಂದೆ ಸರಿಯಲು ಏನು ಕಾರಣ?
ತಾಲೂಕು ಘಟಕದ ಅಧ್ಯಕ್ಷರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷ ಸಂಘಟನೆ ಕುರಿತು ಮಾತನಾಡಿದ ಬಹುತೇಕರು, ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿಸಲು ನಿಖಿಲ್ ರೈತ ತಂತ್ರ!
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ
ಸಭೆಯಲ್ಲಿ ಆರ್. ಎಂ. ಮಂಜುನಾಥ ಗೌಡ ಅವರ ವಿರುದ್ಧ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಹಾಗೆ ಬಂದು ಹೀಗೆ ಹೋಗುವವರಿಗೆ ಅಧಿಕಾರ ಕೊಡಬೇಡಿ. ಮಂಜುನಾಥ ಗೌಡ ಅವರನ್ನು ರಾತ್ರೋರಾತ್ರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅದು ಪಕ್ಷದ ಕ್ರಮವೇ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕರ್ತರಿಗೆ ಅಧಿಕಾರ ಕೊಡಲಿಲ್ಲ. ಜಿಲ್ಲೆಯಲ್ಲಿ ಪಕ್ಷಕ್ಕೆ ಕಾರ್ಯಕರ್ತರಿದ್ದಾರೆ. ಆದರೆ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಲಿಲ್ಲ. ಬೆಂಗಳೂರು ಕೇಂದ್ರಿತವಾಗಿ ಕಾರ್ಯಕರ್ತರಿಗೆ ವಿವಿಧ ಜವಾಬ್ದಾರಿ ನೀಡಲಾಯಿತು ಎಂಬ ದೂರು ಕೇಳಿ ಬಂತು.
ಮಂಜುನಾಥಗೌಡ ಗೈರು, ಆಕ್ರೋಶ
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರಿಗೆ ಅಧಿಕಾರ ಕೊಡಿ ಎಂದು ಕಾರ್ಯಕರ್ತರು ಆಗ್ರಹಿಸಿದರು. "ಎಂ. ಶ್ರೀಕಾಂತ್ ಅವರಿಗೆ ಅಧಿಕಾರ ಕೊಟ್ಟು, ಅವರನ್ನು ಮುಂದೆ ಬಿಟ್ಟು ಉಳಿದವರೆಲ್ಲ ಹಿಂದೆ ಸರಿಯುವುದಲ್ಲ. ಅವರ ಮುಂದಾಳತ್ವದಲ್ಲಿ ಸಂಘಟನೆ ಆಗಬೇಕು. ಪಕ್ಷಕ್ಕೆ ಹೈಕಮಾಂಡ್ನಿಂದ ಹಣಕಾಸಿನ ನೆರವು ಕೂಡ ಕೊಡಬೇಕು" ಎಂದು ಕುರುಣಾಮೂರ್ತಿ ಹೇಳಿದರು.
ಕಾರ್ಯಕರ್ತರ ಸಭೆಗೆ ಜಿಲ್ಲಾಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಗೈರಾಗಿದ್ದರು. "ಅವರು ಕೋರ್ಟ್ಗೆ ಹಾಜರಾಗಬೇಕಿರುವ ಹಿನ್ನೆಲೆ ಸಭೆಗೆ ಬಂದಿಲ್ಲ. ಹಲವು ಹೋರಾಟ ನಡೆಸಿದ್ದಾರೆ. ಪಕ್ಷದ ಸಂಘಟನೆ ಮಾಡುತ್ತಿದ್ದಾರೆ" ಎಂದು ತೀರ್ಥಹಳ್ಳಿಯ ಸುಂದರೇಶ್ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಸಂಘಟನೆ
ಮಂಜುನಾಥ ಗೌಡರ ಗೈರಿನ ಬಗ್ಗೆ ಕಾಂತರಾಜು ಅವರು ಆಕ್ಷೇಪ ವ್ಯಕ್ತಪಡಿಸಿದರು. "ಮಂಜುನಾಥ ಗೌಡ ಅವರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ. ಅಧಿಕಾರ ಇದ್ದಾಗ ಇದ್ದರು. ಅಧಿಕಾರ ಹೋದ ಮರುದಿನದಿಂದ ಈ ಕಡೆ ಬಂದಿಲ್ಲ" ಎಂದರು. ಕಾಂತರಾಜು ಅವರೊಂದಿಗೆ ಹಲವರು ಧ್ವನಿಗೂಡಿಸಿದರು. ಮಧ್ಯಪ್ರವೇಶಿಸಿದ ಶ್ರೀಕಾಂತ್ ಅವರು, "ಮಂಜುನಾಥ ಗೌಡ ಅವರು ತೀರ್ಥಹಳ್ಳಿಯಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಆದರೆ ಅವರು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮಾಡಬೇಕು" ಎಂದು ಎಲ್ಲರನ್ನು ಸಮಾಧಾನಪಡಿಸಿದರು.
ಇಬ್ಬರು ಸ್ಟಾರ್ ಪ್ರಚಾರಕರಿದ್ದಾರೆ, ಕರೆಸಿ
ಜೆಡಿಎಸ್ ಪಕ್ಷದಲ್ಲಿ ಇಬ್ಬರು ಸ್ಟಾರ್ ಪ್ರಚಾರಕರಿದ್ದಾರೆ. ಅವರನ್ನು ಕರೆಯಿಸಿ ಯುವಕರ ಸಂಘಟನೆ ಮಾಡಿ. ಯುವಕರಿಲ್ಲದೆ ಪಕ್ಷ ಬಲಿಷ್ಠವಾಗುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರು ಬಂದರೆ ಯುವಕರು ಒಗ್ಗೂಡುತ್ತಾರೆ ಎಂಬ ಸಲಹೆಯೂ ಕೇಳಿ ಬಂತು.
ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್ ಮಾತನಾಡಿ, "ಭದ್ರಾವತಿಯಲ್ಲಿ ಜೆಡಿಎಸ್ ಎಂದರೆ ಅಪ್ಪಾಜಿ. ಅವರು ಹೇಳಿದ್ದನ್ನು ಪಾಲಿಸುತ್ತಿದ್ದೆವು. ಆದರೆ ನಾವು ಜೆಡಿಎಸ್ನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರೂ, ನಮಗೆ ಪಕ್ಷದಲ್ಲಿ ಯಾವುದೆ ಗೌರವವಿಲ್ಲ" ಎಂದರು.