ಬೆಂಗಳೂರಿಗೆ ಶರಾವತಿ ನೀರು; ಅವೈಜ್ಞಾನಿಕ ಯೋಜನೆ ಕೈಬಿಡಲು ಜೆಸಿಐ ಆಗ್ರಹ
ಶಿವಮೊಗ್ಗ, ಜುಲೈ 5: ಮಲೆನಾಡಿನ ಶರಾವತಿ ನದಿ ನೀರನ್ನು ಬೇರೆಡೆಗೆ ಹರಿಸುವ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಬೇಕೆಂದು ಜೆಸಿಐ ಶಿವಮೊಗ್ಗ ಶರಾವತಿ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದೆ.
ಮಳೆ ನೀರು ಶೇಖರಿಸುವುದು, ಕೆರೆಕಟ್ಟೆಗಳನ್ನು ಉಳಿಸಿ ಅದರಿಂದ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಯ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಅದರ ಯೋಜನೆಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕಾದ ರಾಜ್ಯ ಸರ್ಕಾರ, 280 ಕಿ.ಮೀ ಉದ್ದದ ಯೋಜನೆಯನ್ನು ರೂಪಿಸಿದೆ. ಶರಾವತಿಯಿಂದ ಬೆಂಗಳೂರಿಗೆ ಅವೈಜ್ಞಾನಿಕವಾಗಿ ನೀರು ಹರಿಸುವುದು ಸಮಂಜಸವಲ್ಲ ಎಂದು ಮನವಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕ ವಿವರಿಸಿದೆ.
ಬೆಂಗಳೂರಿಗೆ ಶರಾವತಿ ನೀರು : ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಈ ಯೋಜನೆಯಿಂದ ಮಲೆನಾಡಿನ ವಾಸಿಗಳಿಗೆ ಅತೀವ ಆತಂಕವಾಗಿದೆ. ಅಲ್ಲದೆ ಪರಿಸರ ನಾಶದ ಯೋಜನೆ ಇದಾಗಿದ್ದು ಕೂಡಲೇ ಸರ್ಕಾರ ಈ ಕ್ರಿಯಾ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದೆ.
ಬೆಂಗಳೂರಿನ ಸುತ್ತಮುತ್ತ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಒತ್ತುವರಿಯಿಂದ ಸ್ವತಂತ್ರಗೊಳಿಸಿ ನೂರಾರು ಕೆರೆಗಳ ಹೂಳು ಎತ್ತುವ ವೈಜ್ಞಾನಿಕ ಯೋಜನೆಗಳನ್ನು ತ್ವರಿತವಾಗಿ ಜಾರಿಗೆ ತಂದು ಬೆಂಗಳೂರಿನ ಜನತೆಗೆ ನೀರು ಪೂರೈಸುವ ಪರ್ಯಾಯ ವ್ಯವಸ್ಥೆಗೆ ಮುಂದಾಗಲಿ. ನೂರಾರು ಕಿ.ಮೀಗಳಿಂದ ನೀರು ಹರಿಸುವ ಪರಿಸರ ವಿನಾಶದ ಅವೈಜ್ಞಾನಿಕ ಯೋಜನೆಯನ್ನು ಕೈ ಬಿಟ್ಟಿದ್ದೇವೆ ಎಂದು ಸಚಿವ ಸಂಪುಟದಲ್ಲಿ ತೀರ್ಮಾನಿಸುವ ಆದೇಶವನ್ನು ಸಾರ್ವಜನಿಕಗೊಳಿಸಲಿ ಎಂದು ಆಗ್ರಹಿಸಿದೆ.
ಬೆಂಗಳೂರಿಗೆ ಶರಾವತಿ ನೀರು, ಯೋಜನೆ ವಿರುದ್ಧ ಪತ್ರ ಚಳವಳಿ
ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರಾದ ಜೆಸಿ ಜ್ಯೋತಿ ಅರಳಪ್ಪ, ಉಪಾಧ್ಯಕ್ಷರಾದ ಮೋಹನ್ ಕಲ್ಪತರು, ಪರಮೇಶ್ವರ, ದಿವ್ಯಾ ಪ್ರವೀಣ್, ಸ್ವಪ್ನ ಗೌಡ ಹಾಗೂ ಕಾರ್ಯದರ್ಶಿಗಳಾದ ಶೋಭಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.