ಅಪಾಯದಲ್ಲಿದೆ ಜಯಚಾಮರಾಜೇಂದ್ರ ಒಡೆಯರ್ ತೂಗುಸೇತುವೆ
ತೀರ್ಥಹಳ್ಳಿ, ಜುಲೈ.04: ಮೈಸೂರು ಮಹಾರಾಜರ ಆಡಳಿತದಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಜಯಚಾಮರಾಜೇಂದ್ರ ಒಡೆಯರ್ ತೂಗು ಸೇತುವೆ ಇದೀಗ ಅಪಾಯ ಸ್ಥಿತಿಗೆ ತಲುಪಿದೆ.
ಈ ಹಿಂದೆ ಮೈಸೂರು ಮಹಾರಾಜರ ಆಡಳಿತದಲ್ಲಿ ರಾಜ್ಯದಲ್ಲಿ ಹತ್ತಾರು ಸೇತುವೆಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗಾನದಿಗೆ ನಿರ್ಮಿಸಿದ ಜಯಚಾಮರಾಜೇಂದ್ರ ಒಡೆಯರ್ ತೂಗು ಸೇತುವೆಯೂ ಒಂದಾಗಿದೆ.
ಭಾರೀ ಮಳೆಗೆ ಮುಂಬೈನ ಅಂಧೇರಿಯಲ್ಲಿ ಸೇತುವೆ ಕುಸಿತ
ಈ ಸೇತುವೆಯನ್ನು ಅಂದಿನ ಮೈಸೂರು ಮಹಾರಾಜರು ನಿರ್ಮಿಸಿ ಉದ್ಘಾಟನೆ ಸಹ ಅವರ ದಿವ್ಯ ಅಮೃತಹಸ್ತದಲ್ಲಿ ನೆರವೇರಿಸಿದ್ದರು.
ಇದೀಗ ಈ ಸೇತುವೆಯೂ ಅಪಾಯ ಮಟ್ಟಕ್ಕೆ ತಲುಪಿದೆ. ಈಗಾಗಲೇ ಸೇತುವೆಯ ಕೆಳಭಾಗದಲ್ಲಿರುವ ರಿಂಗ್ಗಳು ನಿರ್ವಹಣೆ ಇಲ್ಲದೇ ಸೊರಗಿವೆ. ಸೇತುವೆಯ ಕೆಲವು ಭಾಗ ಬಿರುಕು ಕಾಣಿಸಿಕೊಂಡಿದೆ. ಗ್ರೀಸ್ ಆಯಿಲ್ ಹಾಕಿ ನಿರ್ವಹಣೆ ಮಾಡಬೇಕಿದ್ದ ಇಂಜಿನೀಯರ್ ಗಳು ಆ ಬಗ್ಗೆ ಅನೇಕ ವರ್ಷದಿಂದ ಗಮನಹರಿಸಿಲ್ಲ.
ಜೊತೆಯಲ್ಲಿ ಅಧಿಕ ಭಾರದ ವಾಹನಗಳ ಸಾಗಾಟ ಸ್ಪೋಟಕ ಸಿಡಿಸಲಾಗುತ್ತದೆ. ಇವೆಲ್ಲಾ ಕಾರಣದಿಂದ ಸೇತುವೆ ಭದ್ರತೆ ಅಪಾಯದಲ್ಲಿದೆ. ರಾಜ್ಯದಲ್ಲಿ ಹಳೇ ಸೇತುವೆಗಳು ಈಗಾಗಲೇ ಕುಸಿದು ಬಿದ್ದ ಸುದ್ದಿಗಳನ್ನು ನೋಡುತ್ತಿದ್ದೇವೆ.
ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ- ಮಂಗಳೂರು ಮಾರ್ಗದಲ್ಲಿ ಈ ಸೇತುವೆ ಇದೆ. ಸೇತುವೆಗೆ ಹೆಚ್ಚಿನ ಹಾನಿಯಾಗಿ ಕುಸಿದು ಬೀಳುವ ಮೊದಲು ಇಂಜೀನಿಯರ್ ಗಳು, ಜಿಲ್ಲಾಡಳಿತ ಗಮನಹರಿಸಬೇಕಿದೆ. ಬೇಜವಾಬ್ದಾರಿಯಿಂದ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ಅನಾಹುತ ಕಟ್ಟಿಟ್ಟ ಬುತ್ತಿ.