ಶ್ರೀಗಂಧ ಸಾಗಿಸುತ್ತಿದ್ದವರಿಗೆ ಜೈಲು, ದಂಡ: ಏನಿದು ಕೇಸ್? ಶಿಕ್ಷೆಗೊಳಗಾದವರು ಯಾರು?
ಶಿವಮೊಗ್ಗ, ಫೆಬ್ರವರಿ 17: ಜಿಲ್ಲೆಯ ಭದ್ರಾವತಿಯಲ್ಲಿ ಗಂಧದ ಮರ ಕಡಿದು ಸಾಗಿಸಲು ಯತ್ನಿಸಿದ್ದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಆರು ವರ್ಷ ಜೈಲು ಶಿಕ್ಷೆ ಮತ್ತು ತಲಾ 55 ಸಾವಿರ ರೂ. ದಂಡ ವಿಧಿಸಿದೆ.
ಏನಿದು ಕೇಸ್?
ಭದ್ರಾವತಿ ವಿಐಎಸ್ಎಲ್ ಆಫೀಸರ್ಸ್ ಕ್ವಾರ್ಟರ್ಸ್ನಲ್ಲಿ ಬೆಳೆದಿದ್ದ ಗಂಧದ ಮರವನ್ನು 2018ರ ಜನವರಿ 9ರಂದು ಕಳ್ಳರು ಕಡಿದು ಸಾಗಿಸಲು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಶಿವಮೊಗ್ಗದ ಸಮೀವುಲ್ಲಾ (39), ತೇನ್ ಸಿಂಗ್ (41) ಮತ್ತು ಸ್ಟ್ಯಾನ್ಲಿ (45) ಬಂಧಿತರು. ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ; ಒಂದೇ ವಾರದಲ್ಲಿ ಆನೆಗಳು ವಾಪಸ್, ಅಡಕೆ ಸಸಿ ನಾಶ
ಜೈಲು ಶಿಕ್ಷೆ ಪ್ರಕಟ
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಐಪಿಸಿ ಸೆಕ್ಷನ್ 379ರ ಪ್ರಕಾರ ಒಂದು ವರ್ಷದ ಸಾದಾ ಶಿಕ್ಷೆ, 5 ಸಾವಿರ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ತಪ್ಪದಿರೆ 15 ದಿನ ಸಾದಾ ಸಜೆ ಅನುಭವಿಸಬೇಕಾಗಿದೆ.
ಅರಣ್ಯ ಕಾಯ್ದೆ ಕಲಂ 86ರ ಪ್ರಕಾರ ಐದು ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ರತ್ನಮ್ಮ ವಾದ ಮಂಡಿಸಿದ್ದರು.
ಪಿಎಸ್ಐ ಶಾಂತಲಾ (ಪ್ರಸ್ತುತ ಮಹಿಳಾ ಠಾಣೆಯಲ್ಲಿದ್ದಾರೆ), ಪಿಎಸ್ಐ ಪ್ರಕಾಶ್ (ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಠಾಣೆಯಲ್ಲಿದ್ದಾರೆ) ಅವರು ಆರೋಪಿಗಳನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.