ಜೋಗ ಜಲಪಾತದಲ್ಲಿ ಸಿಲುಕಿದ ಕರಾಳ ಅನುಭವ ಹಂಚಿಕೊಂಡ ಕೋತಿರಾಮ
Recommended Video
ಶಿವಮೊಗ್ಗ, ಫೆಬ್ರವರಿ 28 : ಬೆಂಗಳೂರಿನ ಯುವಕನ ಬರೆದಿಟ್ಟ ಡೆತ್ ನೋಟ್ ನೋಡಿ ಅವನನ್ನು ಶೋಧಿಸಲು ಜೋತಿರಾಜ್ ಜೋಗ ಜಲಪಾತಕ್ಕೆ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ಕೂಡ ನಾಪತ್ತೆಯಾಗಿದ್ದರು.
ಅದೃಷ್ಟವಶಾತ್ 'ಕರ್ನಾಟಕದ ಸ್ಪೈಡರ್ ಮ್ಯಾನ್' ಎಂದೇ ಖ್ಯಾತರಾಗಿರುವ ಜೋತಿರಾಜ್ ಅವರು ಬದುಕಿಬಂದಿದ್ದಾರೆ. ಆದರೆ, ಆ ರಾತ್ರಿ ಅವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ಅದೆಷ್ಟು ಬಾರಿ ಜೋಗದ ಗುಂಡಿಯೊಳಗೆ ಇಳಿದಿದ್ದಾರೋ ಜೋತಿರಾಜ್ ಅವರು. ಯಾರನ್ನೇ ಆಗಲಿ ಪಾರು ಮಾಡಲು ಅಥವಾ ರಕ್ಷಣೆಗೆ ಇಳಿಯಲು ಎಂದೂ ಜೋತಿರಾಜ್ ಅವರು ಹಿಂಜರಿಯುವುದಿಲ್ಲ. ಹಿಂದೆ ಒಂದು ಬಾರಿ ಯಾರನ್ನೋ ರಕ್ಷಿಸಲು ಹೋಗಿ ಬೆನ್ನು ಮೂಳೆಯನ್ನು ಜೋತಿರಾಜ್ ಮುರಿದುಕೊಂಡಿದ್ದರು.
ಈ ಬಾರಿ ಕೂಡ ಸಾಹಸಕ್ಕೆ ಅಣಿಯಾದ ಜೋತಿರಾಜ್, ಜೋಗಕ್ಕೆ ಹೋಗುವ ಮೊದಲು, ಯಾರು ಕೂಡ ಆತ್ಮಹತ್ಯೆಯಂಥ ಹೀನ ಕೃತ್ಯಕ್ಕೆ ಇಳಿಯಬಾರದು ಎಂದು ಮನವಿ ಮಾಡಿಕೊಂಡಿದ್ದರು. ಅವರ ಕಳಕಳಿಗೆ ಧನ್ಯವಾದಗಳು.
ನೀರಿನೊಳಗೆ ಒಂದು ಇಡೀ ರಾತ್ರಿ ಕಳೆದಿದ್ದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...
ಡೆತ್ ನೋಟ್ ಬರದಿಟ್ಟು ನಾಪತ್ತೆಯಾದವನ ಹುಡುಕಾಟ
ನಾಪತ್ತೆಯಾಗಿದ್ದ ಬೆಂಗಳೂರಿನ ಯುವಕ ಬರೆದಿಟ್ಟಿದ್ದ ಡೆತ್ ನೋಟ್ ದೊರೆತ ಹಿನ್ನೆಲೆಯಲ್ಲಿ ಆತನ ಶೋಧಕ್ಕಾಗಿ ಮಂಗಳವಾರ ಮಧ್ಯಾಹ್ನ ಜೋಗ ಜಲಪಾತದ ಆಳಕ್ಕೆ ಹೋಗಿ ಹುಡುಕುವ ಸಂದರ್ಭ ಒದಗಿ ಬಂತು. ಮೇಲಿಂದ ಹುಡುಕಿದೆ ಎಲ್ಲೂ ಕಾಣಲಿಲ್ಲ. 300 ಅಡಿ ಮೇಲಿನಿಂದ ಬಂಡೆಗಳನ್ನು ಹುಡುಕಿದಾಗ ಕೂಡ ಯಾವ ಸಂಕೇತವೂ ದೊರೆಯಲಿಲ್ಲ. ಹಾಗಾಗಿ ನೀರಿನಾಳಕ್ಕೆ ಹೋಗಬೇಕಾಯಿತು.
ಕಲ್ಲುಸಂದಿಯಲ್ಲಿರಬಹುದೆ ಎಂದು ಇಣುಕಿದಾಗ...
ಒಂದೊಂದು ಕಲ್ಲು ಸಂದಿಗಳನ್ನೂ ಬಿಡದೆ ಹುಡುಕಿದ್ದೇನೆ. ಹೇಗಾದರೂ ಮಾಡಿ ಅವನ ದೇಹವನ್ನು ಹುಡುಕಲೇ ಬೇಕು ಎಂದು ಸಾಕಷ್ಟು ಕಷ್ಟಪಟ್ಟೆ, ನಂತರ ಸುಮಾರು 15 ಅಡಿ ಇರುವ ಕಲ್ಲುಸಂದಿಯಲ್ಲೇನಾದರೂ ಬಿದ್ದಿರಬಹುದು ಎಂದು ಭಾವಿಸಿ ಅಲ್ಲಿ ತೆರಳಿದಾಗ ಕಾಲು ಜಾರಿ ನಾನು ಆ ಕಲ್ಲಿನಡಿಯಲ್ಲಿ ಸಿಲುಕಿದೆ. ಆ ಕಲ್ಲಿನಲ್ಲಿ ಪಾಚಿ ಕಟ್ಟಿದ್ದ ಕಾರಣ ಎದ್ದೇಳಲು ಸಾಧ್ಯವಾಗಲಿಲ್ಲ.
ರಾತ್ರಿಯಿಡೀ ಅಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ
ಮನೆಯವರು, ತಮ್ಮ ತಂಡದವರು ಭಯಭೀತರಾಗುತ್ತಾರೆ ಎಂದು ಮೇಲೇಳಲು ಪ್ರಯತ್ನಿಸಿದೆ ಸಾಧ್ಯವಾಗಲಿಲ್ಲ. ಸಾಕಷ್ಟು ಪೆಟ್ಟು ಕೂಡ ಬಿದ್ದಿತ್ತು. ಕೂಗಿಕೊಂಡರೂ ಸಹಾಯಕ್ಕೆ ಯಾರೂ ಇರಲಿಲ್ಲ. ಇನ್ನೇನು ರಾತ್ರಿಯಾಯಿತು, ಬೇರೆ ದಾರಿ ಕಾಣದೆ ಅಲ್ಲಿಯೇ ಕಳೆಯಬೇಕಾದ ಪರಿಸ್ಥಿತಿಯೂ ಎದುರಾಯಿತು. ಬೆಳಗ್ಗೆಯವರೆಗೂ ನೀರಿನಲ್ಲಿಯೇ ನಿಂತಿದ್ದೆ.
ಹುಡುಕಲು ಹೋದ ವ್ಯಕ್ತಿ ಬದುಕಿದರೆ ಇನ್ನೂ ಸಂತೋಷ
ರಾತ್ರಿ ಎಲ್ಲಾ ತುಂಬಾ ಕಷ್ಟ ಅನುಭವಿಸಿದೆ. ಯಾವ ಕಡೆಯಿಂದಲೂ ಮೇಲೆ ಹತ್ತಲು ಸಾಧ್ಯವಾಗಲಿಲ್ಲ. ಬೆಳಗ್ಗೆ ಬೇರೆ ಕಲ್ಲೊಂದನ್ನು ತೆಗೆದುಕೊಂಡು ಇನ್ನೊಂದು ಕಲ್ಲಿಗೆ ಬಡಿಯುತ್ತಾ ಪಾಚಿ ತೆಗೆದು ಜಾರದಂತೆ ನೋಡಿಕೊಳ್ಳುತ್ತಾ ಸ್ವಲ್ಪ ಮೇಲೆ ಬಂದೆ. ನಂತರ ಪೊಲೀಸರು, ಸ್ನೇಹಿತರು ಎಲ್ಲರೂ ಸೇರಿ ನನಗೆ ಮೇಲೆ ಬರಲು ಸಹಾಯ ಮಾಡಿದ್ದಾರೆ. ನಾನು ಹುಡುಕಲು ಹೋಗಿದ್ದ ವ್ಯಕ್ತಿ ಬದುಕಿದ್ದರೆ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ತಾವು ಜೋಗ ಜಲಪಾತದಲ್ಲಿ ಕಳೆದ ಕರಾಳ ರಾತ್ರಿ ಅನುಭವವನ್ನು ಜನರ ಮುಂದಿಟ್ಟಿದ್ದಾರೆ.
ಜೋಗ ಜಲಪಾತದ ಬಂಡೆಗಳ ನಡುವೆ ಸಿಲುಕಿದ್ದ ಕೋತಿರಾಮನ ರಕ್ಷಣೆ
ಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆ