ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆ ಮೇಲೆ ಐಟಿ ದಾಳಿ
ಶಿವಮೊಗ್ಗ, ನವೆಂಬರ್ 8: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ ಗೌಡ (59 ವರ್ಷ) ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಶರಾವತಿ ನಗರದಲ್ಲಿರುವ ಮನೆ, ತೀರ್ಥಹಳ್ಳಿ ತಾಲೂಕಿನ ಕರಕುಚ್ಚಿಯಲ್ಲಿರುವ ಮನೆ ಹಾಗೂ ಸಂಬಂಧಿಕರ ನಿವಾಸಗಳ ಮನೆ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಆರ್.ಎಂ. ಮಂಜುನಾಥ ಗೌಡ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ಕೊಡಚಾದ್ರಿ ಪತ್ತಿನ ಸಹಕಾರಿ ಸಂಘದ ಮೇಲೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಇದೇ ಮಂಜುನಾಥ ಗೌಡ ಮೇಲೆ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿ ನಡೆದಿತ್ತು. ಜತೆಗೆ ಅಪೆಕ್ಸ್ ಬ್ಯಾಂಕ್ ಅಕ್ರಮ ನೇಮಕಾತಿ, ನಕಲಿ ಚಿನ್ನ ಅಡವಿಟ್ಟು ಡಿಸಿಸಿ ಬ್ಯಾಂಕ್ ನಿಂದ ಅಕ್ರಮವಾಗಿ ಸಾಲ ಪಡೆದ 68 ಕೋಟಿ ರೂಪಾಯಿಯ ಹಗರಣದಲ್ಲಿಯೂ ಮಂಜುನಾಥ ಗೌಡ ಆರೋಪಿಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದ ಮಂಜುನಾಥ ಗೌಡ ತೀರ್ಥಹಳ್ಳಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ಇತ್ತೀಚೆಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.